ಮಂಗಳೂರು: "ಹಲೋ ಮಂತ್ರಿ' ಕಾರ್ಯಕ್ರಮಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ವಿರುದ್ಧ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ ವ್ಯಕ್ತಿಯನ್ನು ಮಂಗಳೂರು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.ಮೂಡಬಿದಿರೆಯ ದಿವ್ಯಪ್ರಸಾದ್ (35) ಬಂಧಿತ ವ್ಯಕ್ತಿ.
ಈತನನ್ನು ಗುರುವಾರ ಬೆಂಗಳೂರಿನಲ್ಲಿ ದಸ್ತಗಿರಿ ಮಾಡಿ ಕದ್ರಿ ಪೊಲೀಸರು ಶುಕ್ರವಾರ ಮಂಗಳೂರಿಗೆ ಕರೆತಂದು ವಿಚಾರಣೆ ನಡೆಸಿದರು.ಎರಡು ವಾರಗಳ ಹಿಂದೆ "ಹಲೋ ಮಂತ್ರಿ' ಕಾರ್ಯಕ್ರಮದ ಪೋಸ್ಟ್ ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಲಾಗಿತ್ತು. ಆ ಕಾರ್ಯಕ್ರಮದಲ್ಲಿ ಸಚಿವ ಯು.ಟಿ. ಖಾದರ್ ಭಾಗವಹಿಸಿದ್ದರು. ಸಚಿವ ಖಾದರ್ ವಿರುದ್ಧ ದಿವ್ಯ ಪ್ರಸಾದ್ ಅವಹೇಳನಕಾರಿಯಾಗಿ ಪ್ರತಿಕ್ರಿಯೆ ನೀಡಿದ್ದರು. ಈ ಬಗ್ಗೆ ದಿವ್ಯ ಪ್ರಸಾದ್ ವಿರುದ್ಧ ಸಚಿವರ ಹಿತೈಷಿ ಬೊಳಿಯಾರ್ನ ಅಶ್ರಫ್ ಮೋನು ಅವರು ಕದ್ರಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.
ಪೊಲೀಸರು ಸೆಕ್ಷನ್ ಐಪಿಸಿ 507 ಮತ್ತು ಎಟಿ ಕಾಯ್ದೆಯ ಸೆಕ್ಷನ್ 67 ಅನ್ವಯ ಪ್ರಕರಣ ದಾಖಲಿಸಿದ್ದರು.ಆರೋಪಿ ದಿವ್ಯಪ್ರಸಾದ್ ಬೆಂಗಳೂರಿನ ಹೊಟೇಲ್ ಒಂದರಲ್ಲಿ ಸೂಪರ್ವೈಸರ್ ಆಗಿ ಕೆಲಸ ಮಾಡುತ್ತಿದ್ದನು. ಆತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ.