ಮಂಗಳೂರು: ರಾಜ್ಯದ ಪೊಲೀಸ್ ವ್ಯವಸ್ಥೆಯನ್ನೇ ತಲೆ ತಗ್ಗಿಸುವಂತೆ ಮಾಡುವ ಸ್ಫೋಟಕ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅದೇನೆಂದರೆ ಭದ್ರತೆ ವಿಚಾರದಲ್ಲಿ ಕರಾವಳಿಯ ನಾಲ್ಕು ಜಿಲ್ಲೆಗಳಿಗೆ ಅಧಿಪತಿ ಎನಿಸಿಕೊಂಡಿರುವ ಪಶ್ಚಿಮ ವಲಯ ಐಜಿಪಿ ಅವರ ಸರಕಾರಿ ಬಂಗ್ಲೆ ಆವರಣದಲ್ಲಿ ಬೆಳೆದು ನಿಂತಿದ್ದ ಶ್ರೀಗಂಧದ ಮರವನ್ನೇ ದುಷ್ಕರ್ಮಿಗಳು ಕೊಳ್ಳೆ ಹೊಡೆದಿದ್ದಾರೆ. ಹೌದು, ಕರಾವಳಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸ್ ಇಲಾಖೆಯ ನೇತೃತ್ವ ವಹಿಸಿಕೊಂಡಿರುವ ಪಶ್ಚಿಮ ವಲಯದ ಐಜಿಪಿ ಹೇಮಂತ್ ನಿಂಬಾಳ್ಕರ್ ಅವರ ಸರಕಾರಿ ಬಂಗ್ಲೆಯು ಮಂಗಳೂರು ನಗರದಿಂದ ಸುಮಾರು ಐದು ಕಿ.ಮೀ. ದೂರದಲ್ಲಿರುವ ಮೇರಿಹಿಲ್ನಲ್ಲಿದೆ.
ನಗರದ ಹೆಲಿಪ್ಯಾಡ್ಗೆ ಹೊಂದಿಕೊಂಡಿರುವ ಈ ಐಜಿಪಿ ಬಂಗ್ಲೆ ಆವರಣದಲ್ಲಿದ್ದ ಬೆಲೆಬಾಳುವ ಶ್ರೀಗಂಧದ ಮರವೊಂದು ನಾಲ್ಕು ದಿನಗಳ ಹಿಂದೆಯಷ್ಟೇ ಬುಡ ಸಹಿತ ನಾಪತ್ತೆಯಾಗಿದೆ! ಆತಂಕದ ವಿಚಾರವೆಂದರೆ ಪಶ್ಚಿಮ ವಲಯ ಐಜಿಪಿ ಅಧಿಕೃತ ನಿವಾಸವಾಗಿರುವ ಕಾರಣಕ್ಕೆ ಇಲ್ಲಿ ದಿನದ 24 ಗಂಟೆಯೂ ಬಿಗಿ ಪೊಲೀಸ್ ಭದ್ರತೆಯಿದೆ. ಹೀಗಿರುವಾಗ ಪೊಲೀಸರ ಸರ್ಪಗಾವಲಿನ ನಡುವೆ ಸರಕಾರಿ ಬಂಗಲೆಯ ಆವರಣದೊಳಗೆ ಬೆಳೆದು ನಿಂತಿದ್ದ ಶ್ರೀಗಂಧದ ಮರವನ್ನು ಮಟ-ಮಟ ಮಧ್ಯಾಹ್ನವೇ ಬೇರು ಸಹಿತ ಬುಡಮೇಲು ಮಾಡಿಕೊಂಡು ಕಳ್ಳತನ ಮಾಡಿರುವುದು ಎಲ್ಲರನ್ನೂ ಮೂಕ ವಿಸ್ಮಯಗೊಳಿಸಿದೆ.