ಮಂಗಳೂರು : ಆಧಾರ್ ಕಾರ್ಡ್ ಗಳಲ್ಲಿರುವ ದೋಷಗಳನ್ನು ಸರಿಪಡಿಸಲು ಅಂಚೆ ಕಚೇರಿಗಳಲ್ಲೂ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಂಗಳೂರು ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ ತಿಳಿಸಿದ್ದಾರೆ.ಪ್ರಸ್ತುತ ಸರಕಾರದ ವಿವಿಧ ಯೋಜನೆಗಳಿಗೆ ಆಧಾರ್ ಲಿಂಕಿಂಗ್ ಸಂದರ್ಭ ಆಧಾರ್ ಕಾರ್ಡ್ ನಲ್ಲಿ ಮಾಹಿತಿ ತಾಳೆ ಹೊಂದಿರುವುದರಿಂದ ಆಧಾರ್ ತಿದ್ದುಪಡಿಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಆಧಾರ್ ಕಾರ್ಡ್ ನಲ್ಲಿನ ತಪ್ಪುಗಳನ್ನು ಸರಿಪಡಿಸಲು ಜಿಲ್ಲೆಯ 23 ಅಂಚೆ ಕಚೇರಿಗಳಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದರು.ಈ ಪೈಕಿ ಈಗಾಗಲೇ ಮಂಗಳೂರು ವಿಭಾಗದ 15 ಅಂಚೆ ಕಚೇರಿಗಳಲ್ಲಿ ಕಾರ್ಯಾರಂಭವಾಗಿದೆ. ಅಗತ್ಯ ಪರಿಕರಗಳು ಹಾಗು ತಾಂತ್ರಿಕ ವ್ಯವಸ್ಥೆ ಒದಗಿದ ನಂತರ ಉಳಿದ ಅಂಚೆ ಕಚೇರಿಗಳಲ್ಲೂ ಆಧಾರ್ ತಿದ್ದುಪಡಿ ಪ್ರಾರಂಭವಾಗಲಿದೆ ಎಂದು ಜಗದೀಶ ಹೇಳಿದರು.
ಆಧಾರ್ ತಿದ್ದುಪಡಿ ಸಂದರ್ಭ ತ್ವರಿತವಾಗಿ ಪ್ರಕ್ರಿಯೆ ಪೂರೈಸಲು ಆಧಾರ್ ಕೇಂದ್ರಗಳಿಗೆ ಹಾಗು ತಿದ್ದುಪಡಿ ಮಾಡುವ ಅಂಚೆ ಕೇಂದ್ರಗಳಿಗೆ ಹೈಸ್ಪೀಡ್ ಇಂಟರ್ ನೆಟ್ ಸೌಲಭ್ಯವನ್ನು ಒದಗಿಸಲು ಬಿಎಸ್ಏನ್ಎಲ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.