ಮಂಗಳೂರು: ಕಾಂಗ್ರೆಸ್ ಸರಕಾರದ ಸಚಿವರ ಟೆಲಿಫೋನ್ ಸಂಭಾಷಣೆಯನ್ನು ಕೇಂದ್ರ ಸರಕಾರ ಕದ್ದಾಲಿಸುತ್ತಿದೆ ಎಂಬ ಮಾಹಿತಿ ಇದೆ. ಅದನ್ನು ನಿಲ್ಲಿಸಬೇಕು ಎಂದು ಕೇಂದ್ರ ಸರಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ತಿಳಿಸಿದ್ದಾರೆ. ಬುಧವಾರ ಮಂಗಳೂರಿಗೆ ಭೇಟಿ ನೀಡಿದ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ವಿಪಕ್ಷ ನಾಯಕರ ದೂರವಾಣಿಯನ್ನು ಕದ್ದಾಲಿಕೆ ಮಾಡಲಾಗುತ್ತಿದೆ ಎಂಬ ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್ ಅವರ ಆರೋಪಕ್ಕೆ ಪತ್ರಿಕ್ರಿಯಿಸಿದ ಅವರು, ರಾಜ್ಯ ಸರಕಾರಕ್ಕೆ ಬಿಜೆಪಿಯವರ ದೂರವಾಣಿ ಕದ್ದಾಲಿಸುವ ಆವಶ್ಯಕತೆ ಇಲ್ಲ.ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಬರುವುದಿಲ್ಲ. ಅವರಿಗೆ ಭಯ ಆರಂಭವಾಗಿದೆ. ಹಾಗಾಗಿ ರಾಜ್ಯ ಸರಕಾರದ ಮೇಲೆ ಏನೇನೊ ಆರೋಪ ಮಾಡುತ್ತಿದ್ದಾರೆ ಎಂದವರು ವಿವರಿಸಿದರು.