ಮಂಗಳೂರು: ಮಂಗಳೂರು ಹೊರವಲಯದ ಜಪ್ಪು ಮಹಾಕಾಳಿಪಡ್ಪು ರೈಲ್ವೇ ಗೇಟ್ ಬಳಿ ಶನಿವಾರ 6 ವರ್ಷದ ಬಾಲಕನೊಬ್ಬ ಚಲಿಸುತ್ತಿದ್ದ ರೈಲಿಗೆ ಢಿಕ್ಕಿ ಹೊಡೆದು ಸಾವನ್ನಪ್ಪಿದ್ದಾನೆ. ಮಹಾಕಾಳಿಪಡ್ಪು ಅನ್ವರ್ ಮತ್ತು ಶಮೀನಾ ದಂಪತಿಯ ಪುತ್ರ ಮಹಮದ್ ಹುಸೇನ್ ಹಾಫಿಲ್ (6) ಮೃತಪಟ್ಟವನು.
ಈತ ಜಪ್ಪು ಕಾಸ್ಸಿಯಾ ಸೈಂಟ್ ರೀಟಾ ಇಂಗ್ಲಿಷ್ ಮೀಡಿಯಂ ಶಾಲೆಯ 2ನೇ ತರಗತಿ ವಿದ್ಯಾರ್ಥಿ. ಮಧ್ಯಾಹ್ನ 3.30ಕ್ಕೆ ಹಾಫಿಲ್ ಪಕ್ಕದ ಅಂಗಡಿಗೆ ಹೋಗಿ ಚಾಕೊಲೇಟ್ ಖರೀದಿಸಿ ಮನೆಗೆ ವಾಪಸಾಗಲು ರೈಲ್ವೇ ಗೆಟ್ ಬಳಿ ಹಳಿ ದಾಟುತ್ತಿದ್ದಾಗ ಕೇರಳದಿಂದ ಉತ್ತರ ಭಾರತದ ಕಡೆಗೆ ಹೋಗುತ್ತಿದ್ದ ಎಕ್ಸ್ಪ್ರೆಸ್ ರೈಲು ಢಿಕ್ಕಿ ಹೊಡೆಯಿತು.ಢಿಕ್ಕಿಯ ರಭಸಕ್ಕೆ ರೈಲು ಬಾಲಕನನ್ನು ಸುಮಾರು 75 ಮೀಟರ್ಗಳಷ್ಟು ದೂರ ಎಳೆದಾಡಿಕೊಂಡು ಹೋಗಿದೆ. ಆತನ ದೇಹ ಛಿದ್ರವಾಗಿತ್ತು. ಸ್ಥಳೀಯ ಜನರು ಓಡಿ ಬಂದು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಬಾಲಕ ಸಾವನ್ನಪ್ಪಿದ್ದ ಎನ್ನಲಾಗಿದೆ.