ಮಂಗಳೂರು: ಮಂಗಳೂರು ಹೊರವಲಯದ ತಲಪಾಡಿ ಗ್ರಾಮದ ತಚ್ಚಾಣಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಕೇರಳದ ಮಂಜೇಶ್ವರ ಸಮೀಪದ ಕಣ್ವತೀರ್ಥದ ಶೇಖರ್ ಯಾನೆ ಕ್ಯಾಮು (32) ನನ್ನು ಸೋಮವಾರ ಎಕೊನಾಮಿಕ್ ಆ್ಯಂಡ್ ನಾರ್ಕೋಟಿಕ್ ಕ್ರೈಂ ಪೊಲೀಸ್ ಇನ್ಸ್ಪೆಕ್ಟರ್ ಮಹಮ್ಮದ್ ಶರೀಫ್ ಮತ್ತು ಸಿಬಂದಿ ಬಂಧಿಸಿ 7,000 ರೂ. ಮೌಲ್ಯದ 433 ಗ್ರಾಂ ಗಾಂಜಾ, 700 ರೂ. ನಗದು ಮತ್ತು 1,000 ರೂ. ಬೆಲೆಯ ಮೊಬೈಲ್ ಫೋನ್ನ್ನು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ತಚ್ಚಾಣಿಯ ಶ್ರೀ ಗುರುದೇವ್ ಫ್ರೆಂಡ್ಸ್ ಕಟ್ಟಡದ ಬಳಿ ತೆರಳಿದಾಗ ಅಲ್ಲಿ ಓರ್ವ ಯುವಕ ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರ್ ಹಿಡಿದು ನಿಂತಿರುವುದು ಕಂಡು ಬಂದಿತ್ತು.
ಯುವಕನನನ್ನು ವಿಚಾರಿಸಿದಾಗ ತನ್ನ ಹೆಸರನ್ನು ತಿಳಿಸಿದ್ದು, ಪ್ಲಾಸ್ಟಿಕ್ ಕವರ್ನಲ್ಲಿ ಗಾಂಜಾ ಪತ್ತೆಯಾಯಿತು. ತನ್ನ ಪರಿಚಯದ ತೂಮಿನಾಡು ಆಸಿಫ್ ಎಂಬಾತ 11 ಪ್ಯಾಕೆಟ್ ಗಾಂಜಾವನ್ನು ಮಾರಾಟ ಮಾಡುವುದಕ್ಕಾಗಿ ತನಗೆ ನೀಡಿದ್ದು, ಅದರಲ್ಲಿ ಒಂದು ಪ್ಯಾಕೆಟ್ ಗಾಂಜಾವನ್ನು ಮಾರಾಟ ಮಾಡಲಾಗಿದ್ದು, ಉಳಿದ 10 ಪ್ಯಾಕೆಟ್ಗಳು ತನ್ನ ವಶದಲ್ಲಿ ಇರುವುದಾಗಿ ತಿಳಿಸಿದನು. ಪೊಲೀಸರು ಆತನನ್ನು ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.