(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಅ.01: ಗೋರೆಗಾಂವ್ ಪಶ್ಚಿಮದಲ್ಲಿನ ಮೋತಿಲಾಲ್ ನಗರದ ತುಳು-ಕನ್ನಡಿಗರ ಶ್ರೀ ಶಾಂತ ದುರ್ಗಾ ಚಾರಿಟೇಬಲ್ ಟ್ರಸ್ಟ್ ಸಂಚಾಲಕತ್ವದ ಶ್ರೀ ಶಾಂತ ದುರ್ಗಾ ದೇವಿ ಮಂದಿರದಲ್ಲಿ 2017ನೇ ವಾರ್ಷಿಕ ಶರನ್ನವರಾತ್ರಿ ಉತ್ಸವ ಸಂಭ್ರಮ ಸಡಗರದಿಂದ ನಡೆಸಲ್ಪಟ್ಟಿತು. ಸಾತ್ರಸ್ತಾ ಹಾಗೂ ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಅಮ್ಮನವರ ಆರಾಧಕರಾಗಿದ್ದು ದೈವಕ್ಯ ಶ್ರೀ ನಿರಂಜನ ಸ್ವಾಮಿಜೀ ಅವರ ಅನುಗ್ರಹ ಮತ್ತು ದೇವಸ್ಥಾನದ ಧರ್ಮಾಧಿಕಾರಿ ಶ್ರೀ ಶ್ಯಾಮನಂದ ಸ್ವಾಮೀಜಿ ಮುಂದಾಳುತ್ವದಲ್ಲಿ ಶರನ್ನವರಾತ್ರಿ ವಿಧಿವತ್ತಾಗಿ ಆಚರಿಸಲ್ಪಟ್ಟಿತು.
ಮಂದಿರದ ವಿಶ್ವಸ್ಥ ಸದಸ್ಯರುಗಳಾದ ಉದಯ ಎಸ್.ಸಾಲಿಯಾನ್ ಮತ್ತು ಸೂರಜ್ ಎಸ್.ಸಾಲಿಯಾನ್ ಮುಂದಾಳುತ್ವದಲ್ಲಿ ಜರುಗಿದ ವಾರ್ಷಿಕ ಶರನ್ನವರಾತ್ರಿ ಉತ್ಸವದಲ್ಲಿ ಕಳೆದ ಶುಕ್ರವಾರ ಸಂಜೆ ಶ್ರೀ ಸತ್ಯನಾರಾಯಣ ಮಹಾ ಪೂಜೆ, ರಾತ್ರಿ ಕಾರ್ತಿಕ್ ಪಿಳ್ಳೈ ಹಾಗೂ ಸ್ವಾಮಿ ಪಿಳ್ಳೈ ಸೇವಾರ್ಥ ಅನ್ನ ಸಂತರ್ಪಣೆ ನಡೆಸಲ್ಪಟ್ಟಿತು. ವಿಜಯ ದಶಮಿ ದಿನ ಬೆಳಿಗ್ಗೆ ಘಟ ವಿಸರ್ಜನೆ, ಶ್ರೀದೇವಿಗೆ ಅಭಿಷೇಕ, ಮಹಾ ಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿತರಣೆ, ಸಂಜೆ ಭಜನೆ, ದೇವಿ ಅವೇಶ (ದರ್ಶನ) ಪೂಜೆ ವiತ್ತು ಅನ್ನಸಂತರ್ಪಣೆ ನೆರವೇರಿತು. ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣರಾಜ್ ತಂತ್ರಿ ತಮ್ಮ ಪೌರೋಹಿತ್ಯದಲ್ಲಿ ಪೂಜಾಧಿಗಳನ್ನು ನೆರವೇರಿಸಿ ನೆರದ ಸದ್ಭಕ್ತರನ್ನು ಹರಸಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ, ಆಹಾರ ಮತ್ತು ನಾಗರಿಕ ಸರಬರಾಜು ರಾಜ್ಯ ಸಚಿವ ವಿದ್ಯಾ ಠಾಕೂರ್, ಸ್ಥಾನೀಯ ನಗರ ಸೇವಕರುಗಳಾದ ಶ್ರೀಕಲಾ ಪಿಳ್ಳೈ, ದೀಪಕ್ ಠಾಕೂರ್, ಸಂದೀಪ್ ಪಾಟೇಲ್ ಪ್ರಧಾನ ಅಭ್ಯಾಗತರುಗಳಾಗಿ ಉಪಸ್ಥಿತರಿದ್ದು ಶ್ಯಾಮನಂದ ಸ್ವಾಮೀಜಿ ಸನ್ಮಾನಿಸಿ ಗೌರವಿಸಿದರು.
ಜರುಗಿಸಲ್ಪಟ್ಟ ವಾರ್ಷಿಕ ಶರನ್ನವರಾತ್ರಿ ಉತ್ಸವದಲ್ಲಿ ನಾಡಿನ ಸಾವಿರಾರು ಭಕ್ತಮಹಾಶಯರು ವಾರ್ಷಿಕ ಉತ್ಸವದಲ್ಲಿ ಪಾಲ್ಗೊಂಡು ವಿವಿಧ ಸೇವೆಗಳನ್ನು ನೆರವೇರಿಸಿ ಶ್ರೀ ಶಾಂತ ದುರ್ಗಾದೇವಿ ಕೃಪೆಗೆ ಪಾತ್ರರಾದರು.