(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಅ.05: ಭಾವೀ ಉಡುಪಿ ಪರ್ಯಾಯ ಪೀಠಾಲಂಕರ ನಡೆಸಲಿದ್ದು ಪರ್ಯಾಯ ಸಂಚಾರಕ್ಕೆ ಮುಂಬಯಿ ಮಹಾನಗರಕ್ಕಾಗಮಿಸಿರುವ ಉಡುಪಿ ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರ ತುಲಾಭಾರ ಸೇವೆ ಇಂದಿಲ್ಲಿ ಪೂರ್ವಾಹ್ನ ಸಾಂತಾಕ್ರೂಜ್ ಪೂರ್ವದ ಪ್ರಭಾತ್ ಕಾಲೋನಿ ಇಲ್ಲಿನ ಉಡುಪಿ ಪೇಜಾವರ ಮಠ ಮುಂಬಯಿ ಶಾಖೆಯ ಶ್ರೀ ಕೃಷ್ಣ ದೇವರ ಸನ್ನಿಧಿಯಲ್ಲಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ಗೌರವ ಅಧ್ಯಕ್ಷ ಡಾ| ಎ.ಎಸ್ ರಾವ್, ಗೌರವ ಕೋಶಾಧಿಕಾರಿ ಅವಿನಾಶ್ ಶಾಸ್ತ್ರಿ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಕೃಷ್ಣ ಯಾದವ ಆಚಾರ್ಯ, ರಾಮ ವಿಠಲ ಕಲ್ಲೂರಾಯ, ಕೆ.ಕೃಷ್ಣರಾಜ್ ತಂತ್ರಿ, ಟಿ.ಬಿ ಹುನ್ನೂರು ಹಾಗೂ ರಾಘವೇಂದ್ರ ಆಚಾರ್ಯ, ಗಣೇಶ ಆಚಾರ್ಯ, ಗುರುಪ್ರಸಾದ್ ಆಚಾರ್ಯ, ಶಿವರಾಮ ಶೆಟ್ಟಿ (ದ್ವಾರಕ), ಪೇಜಾವರ ಮಠ ಮುಂಬಯಿ ಶಾಖೆಯ ವ್ಯವಸ್ಥಾಪಕರಾದ ಪ್ರಕಾಶ ಆಚಾರ್ಯ ರಾಮಕುಂಜ, ಹರಿ ಭಟ್, ನಿರಂಜನ್ ಗೋಗ್ಟೆ ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.
ಪಲಿಮಾರುಶ್ರೀಗಳು ಪೂಜೆಗಳನ್ನು ನಡೆಸಿ ನೆರೆದ ಭಕ್ತಾಭಿಮಾನಿಗಳಿಗೆ ಮಂತ್ರಾಕ್ಷತೆ ನೀಡಿ ಅನುಗ್ರಹಿಸಿದರು. ಧನ, ಅಕ್ಕಿ, ನಾರಿಕೇಲ, ಗಂಧದ ಕೊರಡು ಇತ್ಯಾದಿಗಳಿಂದ ನಡೆಸಲ್ಪಟ್ಟ ತುಲಾಭಾರ ಸೇವೆಯ ಧಾರ್ಮಿಕ ವಿಧಿಗಳನ್ನು ಪೇಜಾವರ ಮಠದ ಪ್ರಧಾನ ಪ್ರಬಂಧಕ ರಾಮದಾಸ ಉಪಾಧ್ಯಾಯ ರೆಂಜಾಳ ನಡೆಸಿದರು. ಪ್ರಕಾಶ ಆಚಾರ್ಯ ರಾಮಕುಂಜ ಸ್ವಾಗತಿಸಿ ವಂದಿಸಿದರು.