ಬೋಂಟ್ರಾ ಜೀವನ ಯುವ ಜನತೆಗೆ ಆದರ್ಶಪ್ರಾಯ: ಜಯ ಸಿ.ಸುವರ್ಣ
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)
ಗುಜರಾತ್ (ಬರೋಡಾ), ಅ.08: ದಯಾನಂದ್ರ ಬೋಂಟ್ರಾರಂತಹ ನಿಸ್ವಾರ್ಥ ಸೇವೆಯ ಮಹಾನ್ ಸೇವಕರು ಸಮಾಜಕ್ಕೆ ಮೇರು ವ್ಯಕ್ತಿಯಾಗಿದ್ದಾರೆ. ಇವರ ಜೀವನ ಚರಿತ್ರೆ ಕೃತಿ ರೂಪವಾಗಿ ಬಂದಿರುವುದು ಅಭಿನಂದನೀಯ. ಇವರಂತಹ ಜೀವನ ಯುವಜನತೆಗೆ ಆದರ್ಶವಾಗಬೇಕು ಎಂದು ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಹಾಗೂ ಭಾರತ್ ಬ್ಯಾಂಕ್ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ನುಡಿದರು.
ಇಂದಿಲ್ಲಿ ಭಾನುವಾರ ಗುಜರಾತ್ನ ಬರೋಡಾ ಅಲ್ಕಾಪುರಾ ಇಲ್ಲಿನ ಸಂಘದ ಬೈದಶ್ರೀ ಸಾಂಸ್ಕೃತಿಕ ಕೇಂದ್ರದ ಸಭಾಗೃಹದಲ್ಲಿ ಗುಜರಾತ್ ಬಿಲ್ಲವ ಸಂಘವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಹಿತ್ಯ ಬಳಗ ಮುಂಬಯಿ ಪ್ರಕಟಿತ ಎಸ್ಕೆ ಹಳೆಯಂಗಡಿ ರಚಿತ, ಗುಜರಾತ್ನ ಹಿರಿಯ ಉದ್ಯೋಗ, ಸಮಾಜ ಸೇವಾಕರ್ತ ಹಾಗೂ ಗುಜರಾತ್ ಬಿಲ್ಲವರ ಸಂಘದ ಸ್ಥಾಪಕ ರೂವಾರಿ, ಪ್ರಸಕ್ತ ಗೌರವಾಧ್ಯಕ್ಷ ದಯಾನಂದ ಬೋಂಟ್ರಾ ಅವರ ಜೀವನ ಸಾಧನೆ `ಅಲಕಾಪುರಿಯ ಮಹಾನುಭಾವ ದಯಾನಂದ ಬೋಂಟ್ರಾ' ಕೃತಿ ಬಿಡುಗಡೆಗೈದು ಜಯ ಸುವರ್ಣ ಮಾತನಾಡಿದರು.
ಗುಜರಾತ್ ಬಿಲ್ಲವ ಸಂಘದ ಅಧ್ಯಕ್ಷ ಮೋಹನ್ ಸಿ.ಪೂಜಾರಿ ಅಹ್ಮದಾಬಾದ್ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ಅತಿಥಿüಗಳಾಗಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ತುಳು ಸಂಘ ಬರೋಡಾ ಅಧ್ಯಕ್ಷ ಶಶಿಧರ ಬಿ.ಶೆಟ್ಟಿ, ಕರ್ನಾಟಕ ಸಂಘ ಬರೋಡಾ ಅಧ್ಯಕ್ಷ ಡಿ.ಕೆ ನರಸಿಂಹ ಮತ್ತು ಅಧ್ಯಾತ್ಮಿಕ ಚಿಂತಕ, ಲೇಖಕ ಶ್ರೀಕೃಷ್ಣ ಆಚಾರ್ಯ, ಶೋಭಾ ದಯಾನಂದ ಬೋಂಟ್ರಾ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದಯಾನಂದ ಬೋಂಟ್ರಾ ಅವರು ತುಳುವ ಕನ್ನಡಿಗನಾಗಿ ಇಡೀ ಗುಜರಾತ್ಗೆ ಮಾದರಿ ವ್ಯಕ್ತಿ ಆಗಿದ್ದಾರೆ. ಎಲ್ಲರಿಗೂ ಆದರ್ಶಪ್ರಾಯರಾದ ಅವರ ಜೀವನ ಶೈಲಿಯೇ ಒಂದು ಕೃತಿಯಾಗಿದೆ. ಬಡವನಾಗಿ ಹುಟ್ಟಿ ಸಾಮರಸ್ಯತ್ವದ ಸದ್ಗುಣಗಳನ್ನು ಮೈಗೂಡಿಸಿ ಮಾನವೀಯತೆಯಲ್ಲೂ ಶ್ರೀಮಂತರಾಗಿದ್ದಾರೆ. ಇವರ ಕೃತಿ ಬರೆಯುವುದೇ ನನ್ನ ಪಾಲಿನ ಭಾಗ್ಯ ಎಂದು ಕೃತಿಕಾರ ಎಸ್ಕೆ ಹಳೆಯಂಗಡಿ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು.
ಕಾರ್ಯಕ್ರಮದಲ್ಲಿ ಅಸೋಸಿಯೇಶನ್ನ ಗೌ| ಪ್ರ| ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್, ಅಕ್ಷಯ ಮಾಸಿಕದ ಸಂಪಾದಕ ಡಾ| ಈಶ್ವರ ಅಲೆವೂರು, ಸಹಾಯಕ ಸಂಪಾದಕ ಹರೀಶ್ ಹೆಜ್ಮಾಡಿ, ಹರೀಶ್ ಜಿ.ಪೂಜಾರಿ ಕೊಕ್ಕರ್ಣೆ, ತುಳು ಸಂಘ ಬರೋಡಾ ಸಂಚಾಲಕ ಜಯರಾಮ ಶೆಟ್ಟಿ, ಗೌ| ಪ್ರ| ಕಾರ್ಯದರ್ಶಿ ವಾಸು ವಿ.ಸುವರ್ಣ, ಗುಜರತ್ ಬಿಲ್ಲವರ ಕೋಶಾಧಿಕಾರಿ ಜಿನರಾಜ್ ಪೂಜಾರಿ, ಮಹಿಳಾಧ್ಯಕ್ಷೆ ಸರಿತಾ ಸೋಮನಾಥ್ ಸೇರಿದಂತೆ ಸಂಘದ ಪದಾಧಿಕಾರಿಗಳು, ವಿವಿಧ ಶಾಖೆಗಳ ಮುಖ್ಯಸ್ಥರು ಮತ್ತು ಪದಾಧಿಕಾರಿಗಳು ಸೇರಿದಂತೆ ಸದಸ್ಯರನೇಕರು ಉಪಸ್ಥಿತರಿದ್ದರು.
ದಯಾನಂದ ಬೋಂಟ್ರಾ ಅವರು ಕೃತಿ ಮತ್ತು ಸನ್ಮಾನಕ್ಕೆ ಉತ್ತರಿಸುತ್ತಾ ಫಲಾಪೆಕ್ಷೆ ಇರಿಸದೆ ಸೇವೆ ಮಾಡಿ ಬಂದಿರುವ ಆತ್ಮವಿಶ್ವಾಸ ನನಗಿದೆ. ಪ್ರತೀ ಮಾನವ ಜೀವನದ ಹಿಂದೆ ಸಮಾಜದ ಕಣ್ಣು ಇರುತ್ತದೆ ಮತ್ತು ಭಗವಂತನ ಅಭಯವಿರುತ್ತದೆ. ಇವೆರಡನ್ನೇ ತಿಳಿದು ಬಾಳಿದ ಕಾರಣ ಈ ನನ್ನ ಬದುಕು ಕೃತಿ ರೂಪ ತಾಳುವಂತಾಯಿತು. ಪ್ರಾಮಾಣಿಕ ಜೀವನವೇ ಫಲಪ್ರದವಾಗುತ್ತದೆ ಎಂದು ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿ ಶುಭಾರೈಸಿದರು.
ಇದೇ ಸಂದರ್ಭದಲ್ಲಿ ಅಕ್ಷಯದ ಅನನ್ಯ ಸಹಯೋಗವನ್ನಿತ್ತ ಮೋಹನ್ ಸಿ.ಪೂಜಾರಿ ಅಹ್ಮದಾಬಾದ್ ಅವರನ್ನು ಅಕ್ಷಯ ಮಂಡಳಿ ಪರವಾಗಿ ಜಯ ಸುವರ್ಣರು ಸತ್ಕರಿಸಿ ಅಭಿವಂದಿಸಿದರು. ಹಾಗೂ ದಯಾನಂದ ಬೋಂಟ್ರಾ ಮತ್ತು ಶೋಭಾ ಡಿ.ಬೋಂಟ್ರಾ ದಂಪತಿಯನ್ನು ಸನ್ಮಾನಿಸಿ ಗೌರವಿಸಿದರು. ದಯಾನಂದ ಬೋಂಟ್ರಾ ಕೃತಿಕಾರ ಎಸ್ಕೆ ಹಳೆಯಂಗಡಿ ಅವರಿಗೆ ಪುಷ್ಫಗೌರವನ್ನಿತ್ತು ಅಭಿವಂದಿಸಿದರು. ನಾಟಕಕಾರ ಸಾ.ದಯಾ ಕೃತಿ ಸಮೀಕ್ಷೆಗೈದು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.