ಮಂಗಳೂರು: ಮಂಗಳೂರು ನಗರ ವ್ಯಾಪ್ತಿಯಲ್ಲಿ ಕೆಲವು ದಿನಗಳಿಂದ ರೌಡಿಗಳ ಅಟ್ಟಹಾಸ ಮಿತಿ ಮೀರುತ್ತಿದ್ದು, ಇದನ್ನು ಮಟ್ಟ ಹಾಕಲು ಈಗ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಎರಡು ರೌಡಿ ನಿಗ್ರಹ ದಳಗಳನ್ನು ಸ್ಥಾಪಿಸುವ ಮಹತ್ವದ ತೀರ್ಮಾನವನ್ನು ಪೊಲೀಸ್ ಇಲಾಖೆ ಕೈಗೊಂಡಿದೆ. ಒಂದು ರೌಡಿ ನಿಗ್ರಹ ದಳವನ್ನು ದಕ್ಷಿಣ ಪೊಲೀಸ್ ಉಪ ವಿಭಾಗ ಹಾಗೂ ಇನ್ನೊಂದನ್ನು ಉತ್ತರ ಉಪ ವಿಭಾಗ ವ್ಯಾಪ್ತಿಯಲ್ಲಿ ರಚಿಸಿ ಆದೇಶ ಹೊರಡಿಸಲಾಗಿದೆ. ಉಳ್ಳಾಲ, ಕೊಣಾಜೆ, ಕಂಕನಾಡಿ ನಗರ ಸೇರಿದಂತೆ ಮಂಗಳೂರು ದಕ್ಷಿಣ ಉಪ ವಿಭಾಗ ವ್ಯಾಪ್ತಿಯಲ್ಲಿ ಎಸಿಪಿ ರಾಮ ರಾವ್ ನೇತೃತ್ವದಲ್ಲಿ ಎಂಟು ಮಂದಿ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ಪ್ರತ್ಯೇಕ ರೌಡಿ ನಿಗ್ರಹ ದಳವನ್ನು ರಚಿಸಲಾಗಿದೆ.
ಹಾಗೆಯೇ ಪಣಂಬೂರು, ಸುರತ್ಕಲ್, ಮೂಲ್ಕಿ, ಬಜಪೆ, ಮೂಡಬಿದಿರೆ, ಮಂಗಳೂರು ಗ್ರಾಮಾಂತರ, ಕಾವೂರು ಸೇರಿದಂತೆ ಉತ್ತರ ಉಪ ವಿಭಾಗದಲ್ಲಿ ಎಸಿಪಿ ರಾಜೇಂದ್ರ ಡಿ.ಎಸ್. ನೇತೃತ್ವದಲ್ಲಿ ಇನ್ನೊಂದು ರೌಡಿ ನಿಗ್ರಹ ದಳ ಕೂಡ ಶೀಘ್ರದಲ್ಲೇ ಅಸ್ತಿತ್ವಕ್ಕೆ ಬರಲಿದೆ. ಆ ಮೂಲಕ ಈ ಎರಡು ಉಪ ವಿಭಾಗಳಲ್ಲಿ ರೌಡಿ ಚಟುವಟಿಕೆಗಳಿಗೆ ಸಂಪೂರ್ಣ ಕಡಿವಾಣ ಹಾಕುವುದಕ್ಕೆ ಪೊಲೀಸ್ ಇಲಾಖೆ ತೀರ್ಮಾನಿಸಿರುವುದು ಗಮನಾರ್ಹ. ಆದರೆ ಸದ್ಯಕ್ಕೆ ಸೆಂಟ್ರಲ್ ಉಪ ವಿಭಾಗ ವ್ಯಾಪ್ತಿಯಲ್ಲಿ ರೌಡಿ ನಿಗ್ರಹ ದಳ ಸ್ಥಾಪಿಸುವ ಚಿಂತನೆ ಸದ್ಯಕ್ಕೆ ಪೊಲೀಸ್ ಇಲಾಖೆ ಮುಂದಿಲ್ಲ.