ಮಂಗಳೂರು: ಮಂಗಳೂರು ಮಹಾನಗರಪಾಲಿಕೆಯಲ್ಲಿ ಮಂಗಳವಾರ ಹೈಡ್ರಾಮಾವೊಂದು ನಡೆದುಹೋಗಿದೆ. ಮೇಯರ್ ಕವಿತಾ ಸನಿಲ್ ತಮ್ಮ ಮೇಲೆ ಬಂದಿರುವ ಹಲ್ಲೆ ಆರೋಪಕ್ಕೆ ಕಣ್ಣೀರಿಟ್ಟರು. ಇತ್ತ ವಿರೋಧ ಪಕ್ಷವಾದ ಬಿಜೆಪಿಯ ಸದಸ್ಯರು ಸಭೆ ನಡೆಯಲು ಅವಕಾಶ ನೀಡದಿದ್ದದ್ದು, ರಾಜೀನಾಮೆಗೆ ಆಗ್ರಹಿಸಿದ್ದು ಇಷ್ಟೆಲ್ಲ ಪ್ರಹಸನಕ್ಕೆ ಕಾರಣವಾಯಿತು.
ಅಷ್ಟಕ್ಕೂ ಇಷ್ಟೆಲ್ಲ ಹೈ ಡ್ರಾಮಾಗೆ ಕಾರಣವಾಗಿದ್ದು ಮೇಯರ್ ಕವಿತಾ ಸನಿಲ್ ತಮ್ಮ ಫ್ಲ್ಯಾಟ್ ನ ವಾಚ್ ಮನ್ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ.ಈ ಆರೋಪವನ್ನೇ ಮುಂದಿಟ್ಟುಕೊಂಡು ವಿರೋಧ ಪಕ್ಷದವರು ಮೇಯರ್ ವಿರುದ್ಧ ಧಿಕ್ಕಾರ ಕೂಗಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಫ್ಲ್ಯಾಟ್ ನಲ್ಲಿನ ಸಿಸಿಟಿವಿ ಕ್ಯಾಮೆರಾದ ಫೂಟೇಜ್ ಪರಿಶೀಲಿಸಿ. ಯಾರ ಮೇಲೂ ನಾನು ಹಲ್ಲೆ ಮಾಡಿಲ್ಲ. ಕಟೀಲು ದುರ್ಗಾಪರಮೇಶ್ವರಿ ಮೇಲೆ ಆಣೆ ಮಾಡಿ ಹೇಳುತ್ತೇನೆ ಎಂದು ಉತ್ತರ ನೀಡುತ್ತಲೇ ಕಣ್ಣೀರಿಟ್ಟರು. ಈ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ಮಾಡಿದರು. ಈ ಹೈಡ್ರಾಮಾ ಪಾಲಿಕೆಯಲ್ಲಿ ಗೊಂದಲದ ವಾತಾವರಣ ಮೂಡಿತು.