ಮಂಗಳೂರು: ಹಾಡು ಹಗಲೇ ಮಂಗಳೂರಿನ ಸರಕಾರಿ ವಸತಿ ಗೃಹಗಳ ಬೀಗ ಮುರಿದು ನಡೆಸುತ್ತಿದ್ದ ಕಳ್ಳತನ ಪ್ರಕರಣವನ್ನು ಕೊನೆಗೂ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸರಕಾರಿ ವಸತಿ ಗೃಹಗಳ ಹಾಗೂ ಒಂಟಿ ಮನೆಗಳ ಬಾಗಿಲಿನ ಬೀಗವನ್ನು ಒಡೆದು ಬೆಲೆಬಾಳುವ ಸೊತ್ತುಗಳನ್ನು ದೋಚುತ್ತಿದ್ದ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಮಹಿಳೆ ಸೇರಿದಂತೆ 3 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಕಾಟಿಪಳ್ಳ ನಿವಾಸಿ ಜಯಂತ (23) ಹಾಗೂ ಈತ ಕಳವುಗೈದ ಚಿನ್ನಾಭರಣಗಳನ್ನು ಹಣಕಾಸು ಸಂಸ್ಥೆಗಳಲ್ಲಿ ಅಡಮಾನ ಇರಿಸಿದ ಕಾಟಿಪಳ್ಳ ನಿವಾಸಿಗಳಾದ ವಿಜ್ವಲ್ ಪೂಜಾರಿ (23) ಹಾಗು ಗುಣವತಿ (48) ಎಂದು ಗುರುತಿಸಲಾಗಿದೆ.ಬಂಧಿತರಿಂದ 131 ಗ್ರಾಂ ಚಿನ್ನಾಭರಣಗಳು, 15,000 ನಗದು, ಮೊಬೈಲ್ ಫೋನ್, ರೋಲ್ಡ್ ಗೋಲ್ಡ್ ಆಭರಣಗಳು, ಕಳ್ಳತನಕ್ಕೆ ಉಪಯೋಗಿಸಿದ ಚೂರಿ, ಕಬ್ಬಿಣದ ರಾಡ್, 1 ಬೈಕ್, ಮಹೇಂದ್ರ ಬೊಲೆರೋ ಜೀಪ್ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಳ್ಳಲಾದ ಸೊತ್ತುಗಳ ಒಟ್ಟು ಮೌಲ್ಯ 8,44,657 ರೂಪಾಯಿ ಎಂದು ಅಂದಾಜಿಸಲಾಗಿದೆ.ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.