ಉಜಿರೆ: ಹೊಸನಗರ ಶ್ರೀ ರಾಮಚಂದ್ರ್ರಾಪುರ ಮಠದ ಸಮಸ್ಯೆ ಒಂದರ ಪರಿಹಾರದ ಬಗ್ಗೆ ಶ್ರೀ ಮಂಜುನಾಥ ಸ್ವಾಮಿಯನ್ನು ಪ್ರಾರ್ಥಿಸಿಕೊಂಡಾಗ ದೇವರ ಅಭಯ ಮತ್ತು ರಕ್ಷೆ ಮಠಕ್ಕೆ ದೊರಕಿ ಸಮಸ್ಯೆ ಸುಲಲಿತವಾಗಿ ಪರಿಹಾರಗೊಂಡಿದೆ. ಶುಕ್ರವಾರ ಶ್ರೀ ಸ್ವಾಮಿಯ ದರ್ಶನ ಹಾಗೂ ಸೇವೆಯಿಂದ ಧನ್ಯತೆ, ಶಾಂತಿ ಹಾಗೂ ತೃಪ್ತಿ ದೊರಕಿದೆ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಸ್ವಾಮೀಜಿಯವರು ದೇವರ ದರ್ಶನ ಮಾಡಿ ಶತರುದ್ರಾಭಿಷೇಕ ಸೇವೆ ಸಲ್ಲಿಸಿದರು. ಅವರ 286 ಮಂದಿ ಭಕ್ತರು 5 ಆವರ್ತಗಳಲ್ಲಿ 1430 ರುದ್ರ ಪಠಣ ಮಾಡಿದರು.
ಮಠ ಹಾಗೂ ತಮ್ಮ ಗುರುಗಳಿಗಾಗಿ ರುದ್ರಪಠಣ ಮಾಡಿದ ಭಕ್ತರ ಸೇವೆಯನ್ನು ಅವರು ಶ್ಲಾಘಿಸಿದರು.
ಅಭಯಾಕ್ಷರ ಆಂದೋಲನಕ್ಕೆ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವಿ. ಹೆಗ್ಗಡೆ ಹಾಗೂ ಡಾ. ಬಿ. ಯಶೋವರ್ಮ ಸಹಿ ಹಾಕಿ ಶುಭ ಹಾರೈಸಿರುವುದರಿಂದ ಆಂದೋಲನಕ್ಕೆ ಆನೆ ಬಲ ಬಂದಂತಾಗಿದೆ. ಅದು ಯಶಸ್ವಿಯಾಗುವುದರ ಬಗ್ಗೆ ಭರವಸೆ ಹಾಗೂ ವಿಶ್ವಾಸ ಮೂಡಿ ಬಂದಿದೆ ಎಂದು ಸ್ವಾಮೀಜಿ ಹೇಳಿದರು. ಧರ್ಮದ ದೃಷ್ಟಿಯೊಂದಿಗೆ ಎಲ್ಲರ ಯೋಗ-ಕ್ಷೇಮಕ್ಕಾಗಿ ಕೆಲಸ ಮಾಡುವುದರಿಂದ ಜೀವನ ಪಾವನವಾಗುತ್ತದೆ ಎಂದು ಸ್ವಾಮೀಜಿ ಹೇಳಿದರು.
ತಮ್ಮ ಮೊದಲ ಭೇಟಿಯಲ್ಲೆ ಧರ್ಮಸ್ಥಳದ ಬಗ್ಗೆ ಅಪಾರ ಗೌರವ ಮೂಡಿ ಬಂದಿದೆ. ಅಂದು ವೀರೇಂದ್ರ ಹೆಗ್ಗಡೆಯವರಲ್ಲಿ ಶ್ರೀ ಮಂಜುನಾಥ ಸ್ವಾಮಿಯನ್ನು ಕಂಡರೆ ಇಂದು ಶ್ರೀ ಮಂಜುನಾಥ ಸ್ವಾಮಿಯಲ್ಲಿ ಹೆಗ್ಗಡೆಯವರನ್ನು ಕಂಡಿದ್ದೇನೆ ಎಂದು ಸ್ವಾಮೀಜಿ ಹೇಳಿದರು. ಅನಿವಾರ್ಯ ಕಾರಣಗಳಿಂದ ಹೆಗ್ಗಡೆಯವರು ಉಪಸ್ಥಿತರಿರಲಿಲ್ಲ.
ಪ್ರಾಸ್ತಾವಿಕವಾಗಿ ಮಾತನಾಡಿದ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ, ತನ್ನ ಆತ್ಮಕಲ್ಯಾಣದೊಂದಿಗೆ ಧ್ಯಾನ, ತಪಸ್ಸು ಮತ್ತು ತ್ಯಾಗದಿಂದ ಇತರರ ಕಲ್ಯಾಣಕ್ಕಾಗಿ ಚಿಂತಿಸುವವರೇ ನಿಜವಾದ ಗುರುಗಳಾಗಿದ್ದು ಆರಾಧನೆಗೆ ಅರ್ಹರಾಗಿರುತ್ತಾರೆ. ಗೋವುಗಳ ರಕ್ಷಣೆ ಬಗ್ಗೆ ಸ್ವಾಮೀಜಿಯವರ ಆಸಕ್ತಿ ಮತ್ತು ಕಾಳಜಿ ಬಗ್ಗೆ ಅವರು ಶ್ಲಾಘಿಸಿದರು.
ಹೇಮಾವತಿ ವಿ. ಹೆಗ್ಗಡೆಯವರು ಅಭಯಾಕ್ಷರ ಆಂದೋಲನಕ್ಕೆ ಸಹಿ ಹಾಕಿ ಚಾಲನೆ ನೀಡಿ ಶುಭ ಹಾರೈಸಿದರು.
ಸೋನಿಯಾವರ್ಮ ಉಪಸ್ಥಿತರಿದ್ದರು.