ಮಂಗಳೂರು: ಮಂಗಳೂರು-ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ೭೫ರಲ್ಲಿ ಶಿರಾಡಿ ಘಾಟಿ ಹಾದು ಹೋಗುವ ಪ್ರದೇಶದಲ್ಲಿ ೧೨ ಸಾವಿರ ಕೋಟಿ ರೂ. ವೆಚ್ಚದಲ್ಲಿ ಸುರಂಗ ಮಾರ್ಗ ನಿರ್ಮಾಣದ ವಿಚಾರ ಪ್ರಸ್ತಾವನೆಯಲ್ಲಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಸಿ ಮಹದೇವಪ್ಪ ಹೇಳಿದ್ದಾರೆ. ೨೩ ಕಿ.ಮೀ ಉದ್ದಕ್ಕೆ ಜಪಾನ್ ನ ಸಹಯೋಗದಲ್ಲಿ ಈ ಸುರಂಗ ಮಾರ್ಗ ನಿರ್ಮಿಸುವ ಬಗ್ಗೆ ಪರಾಮರ್ಶೆ ನಡೆಯುತ್ತಿದೆ ಎಂದು ವಿಧಾನಪರಿಷತ್ ಅಧಿವೇಶನದಲ್ಲಿ ಸದಸ್ಯ ಕೋಟ ಶ್ರೀನಿವಾಸ ಪೂಜಾರಿಯವರು ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿ ಈ ಮಾಹಿತಿ ನೀಡಿದರು.
ಇದೇ ವೇಳೆ ಅಡ್ಡಹೊಳೆಯಿಂದ ಬಂಟ್ವಾಳದವರೆಗೆ ನಿರ್ಮಾಣವಾಗುತ್ತಿರುವ ಕಾಮಗಾರಿ ೨೦೧೯ ರ ಎ.೨೩ರೊಳಗೆ ಮುಗಿಸುವುದಾಗಿ ಎನ್ ಎಚ್ ಎಐ ತಿಳಿಸಿದೆ ಎಂದು ಸಚಿವರು ವಿವರಿಸಿದರು. ಹಾಸನ, ಸಕಲೇಶಪುರ ರಸ್ತೆಯಲ್ಲಿನ ತಿರುವು ಕಡಿಮೆಗೊಳಿಸುವುದು, ಸುಗಮ ಸಂಚಾರಕ್ಕಾಗಿ ೮೦ ಕಿ.ಮೀ. ವೇಗಕ್ಕೆ ಮಿತಿಗೊಳಿಸಿ ರಸ್ತೆ ನಿರ್ಮಿಸಲಾಗುತ್ತಿದೆ. ಹಾಸನದಿಂದ ಮಾರನಹಳ್ಳಿಯವರೆಗೆ ೩೩ ಸ್ಥಳಗಳಲ್ಲಿ, ಅಡ್ಡಹೊಳೆಯಿಂದ ಬಂಟ್ವಾಳದವರೆಗೆ ೩೬ ಸ್ಥಳಗಳಲ್ಲಿ ತಿರುವುಗಳನ್ನು ಸಾಧ್ಯವಾದಷ್ಠು ನೇರಗೊಳಿಸಿ ಕಾಮಗಾರಿ ಆರಂಭಿಸಲಾಗುವುದು ಎಂದು ಸಚಿವರು ತಿಳಿಸಿದರು.