ಮಂಗಳೂರು: ಅಜ್ಜನ ಶ್ರಾದ್ದಕ್ಕೆಂದು ಹೋದ ಬಾಲಕ ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಬಂಟ್ವಾಳ ದಲ್ಲಿ ಬೆಳಕಿಗೆ ಬಂದಿದೆ.
ಬಂಟ್ವಾಳದ ಕಲ್ಲಡ್ಕ ಸಮೀಪದ ಉಮಾಶಿವಕ್ಷೇತ್ರ ದೇವಳದ ಸಮೀಪ ಈ ಘಟನೆ ನಡೆದಿದೆ. ನೇರಳಕಟ್ಟೆ ಭಗವತಿಕೋಡಿ ನಿವಾಸಿ ಸತ್ಯನಾರಾಯಣ ಎಂಬುವರ ಪುತ್ರ ಶ್ರೀರಾಮ್(7) ಮೃತ ಬಾಲಕ.ಉಮಾಶಿವ ಕ್ಷೇತ್ರದ ಸಭಾಂಗಣದಲ್ಲಿ ತನ್ನ ಅಜ್ಜನ ಶ್ರಾದ್ದಕ್ಕೆಂದು ಶ್ರೀರಾಮ್ ತನ್ನ ಮನೆಯವರ ಜೊತೆ ಬಂದಿದ್ದ ವೇಳೆ ಈ ದುರಂತ ಸಂಭವಿಸಿದೆ. ಆಟವಾಡಲು ತನ್ನ ಸ್ನೇಹಿತನ ಜೊತೆ ಕ್ಷೇತ್ರದ ಕೆರೆಯ ಬಳಿಗೆ ತೆರಳಿದ್ದ ಈತ ಹಠಾತ್ತನೆ ಆಯತಪ್ಪಿ ಬಿದ್ದಿದ್ದಾನೆ.
ಇದೇ ವೇಳೆ ಸ್ನೇಹಿತ ಓಡಿ ಬಂದು ಶ್ರೀರಾಮ್ ಕೆರೆಗೆ ಬಿದ್ದಿರುವ ವಿಚಾರ ತಿಳಿಸಿದ್ದಾನೆ. ತಕ್ಷಣ ಅಲ್ಲಿದ್ದವರು ಆತನನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಿದರಾದರೂ ದಾರಿಮಧ್ಯೆ ಶ್ರೀರಾಮ್ ಮೃತಪಟ್ಟಿದ್ದಾನೆ.ಶ್ರೀರಾಮ್ , ಮಾಣಿಯ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯಲ್ಲಿ 2ನೇ ತರಗತಿ ಓದುತ್ತಿದ್ದ. ಘಟನೆ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.