(ಚಿತ್ರ / ವರದಿ : ರೊನಿಡಾ ಮುಂಬಯಿ)
ಮುಂಬಯಿ, ಡಿ.14: ಅಖಿಲ ಭಾರತೀಯ ದಿಗಂಬರ ಜೈನ ಮಹಾ ಸಭಾ ಮತ್ತು ತಾಂತ್ರಿಕ ವಿಶ್ವವಿದ್ಯಾಲಯ ಕೀನ್ಯಾ ಇವರ ಜಂಟಿ ಆಶ್ರಯದಲ್ಲಿ, ಜೈನ ಮತ್ತು ಆಫ್ರಿಕನ್ ತತ್ವಜ್ಞಾನದ ಅಂತರಾಷ್ಟ್ರೀಯ ವಿಶ್ವಶಾಂತಿ ಸಮ್ಮೇಳನದಲ್ಲಿ ಭಾಗವಹಿಸಲು ಕೀನ್ಯಾದ ಕಿಸ್ಮು ನಗರಕ್ಕೆ ಪ್ರವಾಸದಲ್ಲಿರುವ ಸಿಂಹನಗದ್ದೆ ಶ್ರೀ ಜೈನಮಠದ ಪೀಠಾಧಿಪತಿ ಶಾಂತಿಭೂಷಣ ಸ್ವಸ್ತಿ ಶ್ರೀ ಲಕ್ಷಿ ್ಮಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿ ಅವರು ಕಳೆದ ಸೋಮವಾರ ಬೃಹನ್ಮುಂಬಯಿಗೆ ಚಿತ್ತೈಸಿದರು.
ಮಹಾನಗರಕ್ಕೆ ಆಗಮಿಸಿದ ಶ್ರೀಗಳನ್ನು ಅಖಿಲ ಕರ್ನಾಟಕ ಜೈನ ಸಂಘ ಮುಂಬಯಿ ಇದರ ಶ್ರಾವಕರು ಭಕ್ತಿಪೂರ್ವಕವಾಗಿ ಬರ ಮಾಡಿಕೊಂಡರು. ಸಂಘದ ಹಿರಿಯ ಸದಸ್ಯರಾದ ಸುಕುಮಾರ ಜೈನ್ ಅವರ ನಿವಾಸದಲ್ಲಿ ಸ್ವಾಮೀಜಿ ಅವರು ಶ್ರಾವಕರಿಗೆ ಆಶೀರ್ವಚನವನ್ನು ನೀಡಿದರು.
ಈ ಸಂಧರ್ಭದಲ್ಲಿ ಸಂಘದ ಗೌರವ ಕಾರ್ಯದರ್ಶಿ ಪವನಂಜಯ ಬಲ್ಲಾಳ್, ಜೊತೆ ಕೋಶಾಧಿಕಾರಿ ಸಂಪತ್ ಜೈನ್ ಅಂಧೇರಿ, ಸದಸ್ಯರಾದ ಸನತ್ ಕುಮಾರ್ ಜೈನ್, ನಮಿರಾಜ್ ಜೈನ್, ಮುನಿರಾಜ ಜೈನ್, ಭರತ್ರಾಜ್ ಜೈನ್, ವೀಣಾ ಜೈನ್, ವತ್ಸಲಾ ಅರಿಗ, ಮಿತ್ರಾವತಿ ಜೈನ್, ಅಕ್ಷತಾ ಪಿ.ಜೈನ್, ಅಮರಾಜಿ ಜೈನ್, ವಿನೋದ ಎಸ್.ಜೈನ್ ಸುಪ್ರಿಯಾ ಬಹಿರ್ಶೇಟ್ ಮತ್ತಿತರರು ಉಪಸ್ಥಿತರಿದ್ದರು.
ತರುವಾಯ ಶ್ರೀಗಳು ಕೀನ್ಯಾದತ್ತ ಪ್ರಯಾಣ ಮುಂದುವರಿಸಿದ್ದು ಶ್ರಾವಕರು ಶುಭಪ್ರಯಾಣ ಹಾರೈಸಿದರು. ಶ್ರೀಗಳು ತಮ್ಮ ಪ್ರಥಮ ವಿದೇಶ ಯಾತ್ರೆಯಲ್ಲಿ, ವಿಶ್ವಶಾಂತಿ ಅಧಿವೇಶನದ ಜೊತೆಗೆ ಅಲ್ಲಿನ ಪುರಾತನ ಜಿನಮಂದಿರಗಳ ದರ್ಶನ ಹಾಗೂ ಅವುಗಳ ಪುರಾತತ್ವದ ಬಗ್ಗೆಯೂ ಅಧ್ಯಯನ ನಡೆಸಲಿದ್ದಾರೆ. ಈ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಪಂಚದ.ವಿವಿಧ ದೇಶಗಳಿಂದ ಸುಮಾರು 300ಕ್ಕೂ ಅಧಿಕ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ಭರತ್ ರಾಜ್ ಜೈನ್ ತಿಳಿಸಿದ್ದಾರೆ.