ಮಂಗಳೂರು: ದುಷ್ಕರ್ಮಿಗಳ ದಾಳಿಗೆ ಒಳಗಾಗಿ ಸಾವನ್ನಪ್ಪಿದ ಬಶೀರ್ ಅವರ ಮೃತದೇಹದ ಅಂತ್ಯಕ್ರಿಯೆ ಸಾಯಂಕಾಲ ಮಂಗಳೂರಿನ ಕೂಳೂರು ಮಹಿಯುದ್ದೀನ್ ಜುಮ್ಮಾ ಮಸೀದಿಯ ಆವರಣದಲ್ಲಿ ಸಕಲ ಧಾರ್ಮಿಕ ವಿಧಿವಿಧಾನಗಳಂತೆತ ನಡೆಯಿತು.ಬಶೀರ್ ಅವರ ಪುತ್ರ ಅಬುದಾಭಿಯಲ್ಲಿ ಉದ್ಯೋಗದಲ್ಲಿದ್ದು ಅವರು ಅಲ್ಲಿಂದ ಬರಲು ಕಾಲಾವಕಾಶ ಬೇಕಾಗಿದ್ದುದರಿಂದ ಬಶೀರ್ ಅವರ ಅಂತ್ಯಸಂಸ್ಕಾರವನ್ನು ಆದಿತ್ಯವಾರ ಸಾಯಂಕಾಲದ ಹೊತ್ತಿಗೆ ನಡೆಸಲು ಕುಟುಂಬಸ್ಥರು ತೀರ್ಮಾನಿಸಿದ್ದರು.
ಅದರಂತೆ ಅವರ ಪುತ್ರ ಇರ್ಶಾನ್ ಅವರು ಆಗಮಿಸುತ್ತಿದ್ದಂತೆಯೇ ಬಶೀರ್ ಅವರ ಅಂತ್ಯಸಂಸ್ಕಾರ ವಿಧಿವಿಧಾನಗಳನ್ನು ಇಸ್ಲಾಂ ಸಂಪ್ರದಾಯದಂತೆ ನಡೆಸಲಾಯಿತು. ಅಂತ್ಯಸಂಸ್ಕಾರ ಸ್ಥಳಕ್ಕೆ ಜನಸಾಗರವೇ ಹರಿದುಬಂದಿದ್ದು ಮತಾಂಧರ ದಾಳಿಗೆ ಪ್ರಾಣತ್ಯಜಿಸಿದ ಅಮಾಯಕ ಬಶೀರ್ ಅವರಿಗೆ ಎಲ್ಲರೂ ಕಂಬನಿ ತುಂಬಿದ ಅಂತಿಮನಮನಗಳನ್ನು ಸಲ್ಲಿಸಿದರು. ಮಸೀದಿಯಲ್ಲಿ ಧಾರ್ಮಿಕ ವಿಧಿವಿಧಾನಗಳ ಬಳಿಕ ಬಶೀರ್ ಅವರ ಪಾರ್ಥೀವ ಶರೀರವನ್ನು ಅಲ್ಲೇ ಸಮೀಪದಲ್ಲಿರುವ ಖಬರಿಸ್ಥಾನ್ ನಲ್ಲಿ ದಫನ ಮಾಡಲಾಯಿತು.ಕೂಳೂರು ಪರಿಸರ ಸೇರಿದಂತೆ ಮಂಗಳೂರಿನಾದ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಬಿಗು ಬಂದೋಬಸ್ತ್ ಏರ್ಪಡಿಸಿದ್ದರು.