ಮಂಗಳೂರು: ಮಂಗಳೂರಿನಲ್ಲಿ ದುಷ್ಕರ್ಮಿಗಳಿಂದ ಕೊಲೆಯಾದ ದೀಪಕ್ ರಾವ್ ಮತ್ತು ಅಬ್ದುಲ್ ಬಷೀರ್ ಮನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಸಂಜೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.ದಕ್ಷಿಣ ಕನ್ನಡ ಪ್ರವಾಸದಲ್ಲಿದ್ದ ಸಿದ್ದರಾಮಯ್ಯ ಮೊದಲಿಗೆ ಸುರತ್ಕಲ್ ಕಾಟಿಪಳ್ಳದಲ್ಲಿರುವ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಮನೆಗೆ ಸಂಜೆ ವೇಳೆ ಭೇಟಿ ನೀಡಿ ಮನೆಯವರಿಗೆ ಸಾಂತ್ವಾನ ಹೇಳಿದರು.
ಸಿ.ಎಂ ಅವರೊಂದಿಗೆ ಸಚಿವ ರಮನಾಥ್ ರೈ, ಯು.ಟಿ ಖಾದರ್, ಮಂಗಳೂರು ಮೇಯರ್ ಕವಿತಾ ಸನಿಲ್ ಕೂಡ ದೀಪಕ್ ಮನೆಗೆ ಭೇಟಿ ನೀಡಿದರು.ನಂತರ ಮುಖ್ಯಮಂತ್ರಿಗಳು ಜನವರಿ 3ರಂದೇ ರಾತ್ರಿ ಹಲ್ಲೆಗೊಳಗಾಗಿ ಭಾನುವಾರ ಬೆಳಿಗ್ಗೆ ನಿಧನರಾದ ಅಬ್ದುಲ್ ಬಶೀರ್ ಮನೆಗೆ ಭೇಟಿ ನೀಡಿದರು.ನಂತರ ಮಾತನಾಡಿದ ಅವರು ಬಷೀರ್ ಹತ್ಯೆ ಹಿನ್ನಲೆಯಲ್ಲಿ ಶಾಂತಿ ಕಾಪಾಡಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
"ಸಾವಿನಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ದೀಪಕ್ ಕುಟುಂಬಕ್ಕೆ ಹತ್ತು ಲಕ್ಷ ಪರಿಹಾರ ನೀಡಿದಂತೆ ಬಶೀರ್ ಕುಟುಂಬಕ್ಕೂ ನೀಡಲಾಗುತ್ತದೆ. ದೀಪಕ್ ರಾವ್ ಹಾಗೂ ಬಶೀರ್ ಅವರನ್ನು ಅಮಾನವೀಯವಾಗಿ ಹತ್ಯೆ ಮಾಡಲಾಗಿದೆ," ಎಂದು ಬೇಸರ ವ್ಯಕ್ತಪಡಿಸಿದರು."ಈ ಪ್ರಕರಣಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಯಾವ ಸಂಘಟನೆ ಇದರಲ್ಲಿ ಭಾಗಿಯಾಗಿದೆ ಎಂದು ತನಿಖೆಯಲ್ಲಿ ಬಹಿರಂಗವಾಗಲಿದೆ. ಅದನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಸಿಎಂ ಹೇಳಿದರು.