ಮುಂಬಯಿ, ಜ.10: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಮಾಜಿ ಉಪಾಧ್ಯಕ್ಷ, ನಿವೃತ್ತ ಶಿಕ್ಷಕ ಭಾರತ್ ಬ್ಯಾಂಕ್ ಕೋ.ಅಪರೇಟಿವ್ (ಮುಂಬಯಿ) ಲಿಮಿಟೆಡ್ನ ಸ್ಥಾಪಕ ರೂವಾರಿಯಲ್ಲೋರ್ವ, ಬ್ಯಾಂಕ್ನ ಮಾಜಿ ಕಾರ್ಯಾಧ್ಯಕ್ಷ ಡಿ.ಯು ಸಾಲ್ಯಾನ್ (ದೇವು ಉಗ್ಗಪ್ಪ ಪೂಜಾರಿ) (95.) ಕಳೆದ ಬುಧವಾರ ರಾತ್ರಿ ಸಾಂತಕ್ರೂಜ್ ಪಶ್ಚಿಮದ ದೇವ್ದರ್ಶನ್ ಅಪಾರ್ಟ್ಮೆಂಟ್ನ ಸ್ವನಿವಾಸದಲ್ಲಿ ನಿಧನರಾದರು.
ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಚೆಲ್ಲಾರು ಕರಿಯ ತೋಟ ನಿವಾಸಿ ಉಗ್ಗಪ್ಪ ಪೂಜಾರಿ ಮತ್ತು ತೋಮ ಪೂಜಾರ್ತಿ ಸುಪತ್ರ ಆಗಿದ್ದ ಸಾಲ್ಯಾನ್ ಭಾರತ್ ಬ್ಯಾಂಕ್ನ ಶತ ಶಾಖೆಯ ಸಂಭ್ರಮದಲ್ಲಿ ಹಾಗೂ ಬಿಲ್ಲವರ ಅಸೋಸಿಯೇಶನ್ ಇದರ 85ನೇ ಸಂಸ್ಥಾಪಕ ದಿನಾಚರಣೆಯಲ್ಲಿ ಸನ್ಮಾನಿಸಲ್ಪಟ್ಟಿ ದ್ದರು. ಲಕ್ಷ್ಮೀಛಾಯಾ ವಿಚಾರ ವೇದಿಕೆ ಸೇರಿದಂತೆ ನೂರಾರು ಸಂಘ ಸಂಸ್ಥೆಗಳಿಂದ ಗೌರವಿಸಲ್ಪಟ್ಟ ಸಾಲ್ಯಾನ್ ಅಸೀಮ ಛಲವಾದಿಯಾಗಿದ್ದು ಅವಿರತ ಪರಿಶ್ರಮದಿಂದ ಸುಸಂಸ್ಕೃತ ಸಭ್ಯ, ಸದೃಹಸ್ಥನಾಗಿ ಜೀವನ ರೂಪಿಸಿಕೊಂಡವರು. ಉತ್ಕಟ ರಾಷ್ಟ್ರಪ್ರೇಮಿ ಆಗಿದ್ದು ರಾಷ್ಟ್ರೀಯ ಚಳುವಳಿಯಲ್ಲಿ ಭಾಗವಹಿಸಿದ್ದ ಇವರು ಸಮಾಜವಾದಿಯಾಗಿದ್ದು ಜನಾನುರಾಗಿದ್ದರು. ಮೃತರು ಮೂರು ಗಂಡು, ಎರಡು ಹೆಣ್ಣು ಸೇರಿದಂತೆ ಬಂಧು-ಬಳಗ ಅಗಲಿದ್ದಾರೆ.
ಸಾಲ್ಯಾನ್ ನಿಧನಕ್ಕೆ ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಹಾಗೂ ಭಾರತ್ ಬ್ಯಾಂಕ್ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಮತ್ತು ಸರ್ವ ಪದಾಧಿಕಾರಿಗಳು, ಸದಸ್ಯರು, ನಿಕಟ ಪೂರ್ವಾಧ್ಯಕ್ಷ ಎಲ್.ವಿ.ಅವಿೂನ್, ಭಾರತ್ ಬ್ಯಾಂಕ್ನ ಮಾಜಿ ಕಾರ್ಯಾಧ್ಯಕ್ಷ ವಾಸುದೇವ ಆರ್.ಕೋಟ್ಯಾನ್, ಉಪ ಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲಿಯಾನ್, ಆಡಳಿತ ನಿರ್ದೇಶಕ ಸಿ.ಆರ್ ಮೂಲ್ಕಿ, ನಿರ್ದೇಶಕ ಮಂಡಳಿ, ಸೂರು ಸಿ.ಕರ್ಕೇರ, ಕೆ. ಭೋಜರಾಜ್, ಬಿಸಿಸಿಐ ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ ಸೇರಿದಂತೆ ನಗರದಲ್ಲಿನ ಅನೇಕಾನೇಕ ಸಂಘ-ಸಂಸ್ಥೆಗಳ ಮುಖ್ಯಸ್ಥರು ಸಂತಾಪ ವ್ಯಕ್ತ ಪಡಿಸಿದ್ದಾರೆ.
ಮೃತರ ಅಂತ್ಯಕ್ರಿಯೆ ಇಂದು (ಜ.11) ಗುರುವಾರÀ ಅಪರಾಹ್ನ 3.30 ಗಂಟೆಗೆ ಸಾಂತಕ್ರೂಜ್ ಪಶ್ಚಿಮದ ಜುಹೂ ಅಲ್ಲಿನ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.