ಮಂಗಳೂರು: ಬಾರಿ ಸಂಚಲನ ಮೂಡಿಸಿದ್ದ ಮಂಗಳೂರು ಕಾನೂನು ಕಾಲೇಜು ವಿದ್ಯಾರ್ಥಿನಿ ರೇಷ್ಮಾ ಲವ್ ಜಿಹಾದ್ ಆರೋಪ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದೆ. ಕಾಸರಗೋಡು ಮೂಲದ ಮಂಗಳೂರಿನ ಕಾನೂನು ಕಾಲೇಜು ವಿದ್ಯಾರ್ಥಿನಿ ರೇಷ್ಮಾ ತಾನು ಹೆತ್ತವರ ಜೊತೆಗೆ ಮರಳುವುದಾಗಿ ಮುಂಬಯಿ ಹೈಕೋರ್ಟ್ ನಲ್ಲಿ ಹೇಳಿಕೆ ನೀಡಿದ್ದಾರೆ ಎಂದು ರೇಷ್ಮಾ ಪರ ವಕೀಲ ಸಂಜೀವ ಪುನೆಲೇರ್ಕರ್ ತಿಳಿಸಿದ್ದಾರೆ.ಕಾಸರಗೋಡಿನ ಶ್ರೀಮಂತ ಕುಟುಂಬದ ರೇಷ್ಮಾ ಮಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಕಾನೂನು ವಿದ್ಯಾರ್ಥಿನಿಯಾಗಿದ್ದರು.
ಮೂರು ವರ್ಷಗಳ ಹಿಂದೆ ರೇಷ್ಮಾಗೆ ಫೇಸ್ಬುಕ್ನಲ್ಲಿ ಇಕ್ಬಾಲ್ ಎಂಬಾತನ ಪರಿಚಯವಾಗಿದ್ದು ಆತನನ್ನು ಪ್ರೀತಿಸುತ್ತಿದ್ದರು ಎಂದು ಹೇಳಲಾಗಿತ್ತು.ಮಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ರೇಷ್ಮಾ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದು, ಆಕೆ ಮುಂಬಯಿನಲ್ಲಿ ಇಕ್ಬಾಲ್ ಜೊತೆಗೆ ವಾಸವಾಗಿದ್ದಳು ಎಂದು ಹೇಳಲಾಗಿತ್ತು. "ಇದು 'ಲವ್ ಜಿಹಾದ್' ಪ್ರಕರಣ. ರೇಷ್ಮಾಳ ತಲೆ ಕೆಡಿಸಿ ಆಕೆಯನ್ನು ಕರೆದುಕೊಂಡು ಹೋಗಲಾಗಿದೆ," ಎಂದು ಮಹಮ್ಮದ್ ಇಕ್ಬಾಲ್ ವಿರುದ್ಧ ರೇಷ್ಮಾ ಹೆತ್ತವರು ಅಪಹರಣ ಪ್ರಕರಣ ದಾಖಲಿಸಿದ್ದರು.ನಂತರ ಕೆಲ ದಿನಗಳ ಹಿಂದೆ ಮುಂಬಯಿಯಿಂದ ರೇಷ್ಮಾ ಅವರನ್ನು ಮಂಗಳೂರಿಗೆ ಕರೆತರಲಾಗಿತ್ತು. ಈ ನಡುವೆ ತನ್ನ ಪತ್ನಿ ನಾಪತ್ತೆಯಾಗಿರುವುದಾಗಿ ಮಹಮ್ಮದ್ ಇಕ್ಬಾಲ್ ಮುಂಬಯಿ ನ್ಯಾಯಾಲಯದಲ್ಲಿ ಹೇಬಿಯಸ್ ಕಾರ್ಪಸ್ ಪ್ರಕರಣ ದಾಖಲಿಸಿದ್ದರು.ಈ ಹಿನ್ನೆಲೆಯಲ್ಲಿ ಮಂಗಳೂರಿಗೆ ಆಗಮಿಸಿದ್ದ ಮುಂಬಯಿ ಪೊಲೀಸರು ತನಿಖೆ ಆರಂಭಿಸಿದ್ದರು.
ಆದರೆ ರೇಷ್ಮಾ ಅವರನ್ನು ಪತ್ತೆ ಮಾಡುವಲ್ಲಿ ಸಫಲರಾಗಿರಲಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಬಜರಂಗದಳದ ಕಾರ್ಯಕರ್ತ ಸುನೀಲ್ ಪಂಪ್ ವೆಲ್ ಎಂಬವರನ್ನು ಬಂಧಿಸಿ ಮುಂಬಯಿಯ ವಾಶಿ ಠಾಣೆಯ ಪೊಲೀಸರು ಕರೆದುಕೊಂಡು ಹೋಗಿದ್ದರು.ಇದೀಗ ರೇಷ್ಮಾ ಅವರನ್ನು ಮುಂಬಯಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯದಲ್ಲಿ ಈಕೆಯ ಜೊತೆ ನ್ಯಾಯಾಧೀಶರು ವೈಯಕ್ತಿಕವಾಗಿ ಮಾತನಾಡಿದ್ದರು. ಈ ಸಂದರ್ಭದಲ್ಲಿ ಮಹಮ್ಮದ್ ಇಕ್ಭಾಲ್ ಅವರನ್ನೂ ನ್ಯಾಯಾಲಯಕ್ಕೆ ಕರೆ ತರಲಾಗಿತ್ತು.ನ್ಯಾಯಾಲಯದಲ್ಲಿ ರೇಷ್ಮಾ ತಾನು ಸ್ವಂತ ಇಚ್ಛೆಯಿಂದ ಹೆತ್ತವರೊಂದಿಗೆ ತೆರಳುತ್ತೇನೆ ಎಂದು ಪ್ರಮಾಣ ಪತ್ರವನ್ನು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಆಕೆಯನ್ನು ಹೆತ್ತವರ ಜತೆಯಲ್ಲಿಕಳುಹಿಸುವಂತೆ ನ್ಯಾಯಾಲಯ ಆದೇಶಿಸಿದೆ. ಅಲ್ಲದೆ ಮಹಮ್ಮದ್ ಇಕ್ಭಾಲ್ ವಿರುದ್ಧದ ಅಪಹರಣ ಪ್ರಕರಣದ ತನಿಖೆಯನ್ನು ಮುಂದುವರೆಸಲು ಪೊಲೀಸರಿಗೆ ಸೂಚನೆ ನೀಡಿದೆ ಎನ್ನಲಾಗಿದೆ.