ಮುಂಬಯಿ (ಬಂಟ್ವಾಳ), ಫೆ.14: ಆ ಸ್ಮಶಾನದಲ್ಲಿ ಮಧ್ಯರಾತ್ರಿ ವರೆಗೂ ಜನ ಸೇರಿದ್ದರು, ಅವರ ಮೊಗದಲ್ಲಿ ಸ್ಮಶಾನ ವೆಂಬ ಯಾವ ಭಾವವೂ ಇರಲಿಲ್ಲ.. ಭಯವೂ ಇರಲಿಲ್ಲ.ಪುರುಷ-ಮಹಿಳೆ ಎಂಬ ಬೇಧಭಾವ ವಿಲ್ಲದೆ ಎಲ್ಲರೂ ಶಿವಧ್ಯಾನದಲ್ಲಿ ತೊಡಗಿದ್ದ ಅಪೂರ್ವ ಸನ್ನಿವೇಶವದು. ಹೌದು ಇದು ಸಜೀಪನಡು ಕಂಚಿನಡ್ಕ ಪದವಿನಲ್ಲಿ ಶಿವರಾತ್ರಿಯ ಕಳೆದ ಮಂಗಳವಾರ ರಾತ್ರಿ ಕಂಡು ಬಂದ ಸಡಗರದ ಸನ್ನಿವೇಶವದು.
ಸಜೀಪನಡು ಗ್ರಾಮದ ಕಂಚಿನಡ್ಕ ಪದವು ಅಲ್ಲಿನ ರುದ್ರಭೂಮಿ ದೇವಭೂಮಿಯಲ್ಲಿ ಹಿಂದೂ ರುಧ್ರಭೂಮಿ ಸಮಿತಿ ಹಾಗೂ ಹಿಂದೂ ರುಧ್ರಭೂಮಿ ಅಭಿವೃದ್ದಿ ಸಮಿತಿ ಮಹಾಶಿವರಾತ್ರಿಯ ಅಂಗವಾಗಿ ಆಯೋಜಿಸಿದ್ದ ವಿಶಿಷ್ಟ ಮತ್ತು ಅಪರೂಪದ ಕಾರ್ಯಕ್ರಮ . ಸಾಮಾನ್ಯವಾಗಿ ರುದ್ರಭೂಮಿಯಲ್ಲಿ ಭಜನಾ ಕಾರ್ಯಕ್ರಮ ನಡೆಯುವುದೇ ಅದು ವಿಶೇಷ. ಅದರಲ್ಲೂ ರುದ್ರಭೂಮಿಗೆ ಜನರು ಬರುವುದೆ ವಿರಳ .ಅಂತಹ ಜಾಗದಲ್ಲಿ ಅದು ಮಂಗಳವಾರ ರಾತ್ರಿ ಹೊತ್ತಿನಲ್ಲಿ ಶಿವನ ಪ್ರತಿಮೆಯ ಬಳಿ ಕರ್ಪೂರ ಹಚ್ಚಿ ಪ್ರಾರ್ಥನೆ ಸಲ್ಲಿಸುವ ಅಭೂತಪೂರ್ವ ಕ್ಷಣ ಅದು ಎಲ್ಲೂ ಕಾಣಸಿಗದ ಸನ್ನಿವೇಶ.
ಸಜೀಪನಡು ಗ್ರಾಮದ ಕಂಚಿನಡ್ಕಪದವಿನಲ್ಲಿರುವ ರುದ್ರಭೂಮಿ ದೇವಭೂಮಿಯಲ್ಲಿ ಹಿಂದೂ ರುಧ್ರಭೂಮಿ ಸಮಿತಿ ಹಾಗೂ ಹಿಂದೂ ರುಧ್ರಭೂಮಿ ಅಭಿವೃದ್ದಿ ಸಮಿತಿ ಮಹಾಶಿವರಾತ್ರಿ ಪ್ರಯುಕ್ತ ಆಯೋಜಿಸಿದ್ದ ಭಜನಾ ಸಂಕೀರ್ತನೆ ದೇವಭೂಮಿ ಎಂಬ ನಾಮವನ್ನು ಸಾಕ್ಷೀಕರಿಸಿತು.
ರುದ್ರಭೂಮಿ ಮನುಷ್ಯನ ಮೋಕ್ಷ ಸ್ಥಳ,ಇಂತಹಾ ಪವಿತ್ರ ಸ್ಥಳ ಶಿವನ ಸಾನಿಧ್ಯವೂ ಇದೆ. ಈ ಬಗ್ಗೆ ಸಾಮಾಜಿಕ ಜಾಗೃತಿಯ ಕಾರಣಕ್ಕೆ ಶಿವರಾತ್ರಿಯಂದು ಭಜನೆಯ ಮೂಲಕ ಶಿವಾರಾಧನೆ ನಡೆಸಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಯಶವಂತ ದೇರಾಜೆ ತಿಳಿಸಿದರು.
ಭಜನಾ ಸಂಕೀರ್ತನೆಯಲ್ಲಿ ಶ್ರೀ ಮಹಾಗಣಪತಿ ಷಣ್ಮುಖ ಸುಬ್ರಹ್ಮಣ್ಯ ಭಜನಾ ಮಂಡಳಿ ಸಜೀಪ ನಡು, ಶ್ರೀ ರಾಮ ಭಜನಾ ಮಂಡಳಿ ಶ್ರೀ ರಾಮನಗರ ಕೋಟೆಕಣಿ, ಶ್ರೀಸೋಮನಾಥೇಶ್ವರ ಭಜನಾ ಮಂಡಳಿ ಇರಾ, ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆ ತಲೆಮೊಗರು, ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆ ಕಾರಾಜೆ, ಶ್ರೀ ಶಾರದಾ ಭಜನಾ ಮಂಡಳಿ ನಗ್ರಿ, ಬ್ರಹ್ಮಶ್ರೀ ಗುರು ಭಜನಾ ಮಂಡಳಿ ಬೋಳಿಯಾರ್, ಬ್ರಹ್ಮಶ್ರೀ ಗುರು ಮಂದಿರ ಭಜನಾ ಮಂಡಳಿ ಸುಭಾಷ್ ನಗರ ಮೊದಲಾದ ಭಜನಾ ತಂಡಗಳು ಶಿವರಾತ್ರಿಯನ್ನು ಅರ್ಥಪೂರ್ಣ ಆಚರಿಸಿದವು. ಒಟ್ಟಿನಲ್ಲಿ ಸ್ಮಶಾನದ ಮಹತ್ವವನ್ನು ಎತ್ತಿ ಹಿಡಿಯುವಲ್ಲಿ ಮಹಾಶಿವರಾತ್ರಿ ಸಂಭ್ರಮಯುತವಾಯಿತು.