ಮಂಗಳೂರು: ರಾಜ್ಯ ವಿಧಾನ ಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇರುವಂತೆ, ಕರಾವಳಿಯಲ್ಲೂ ಬಿರುಸಿನ ರಾಜಕೀಯ ಚಟುವಟಿಕೆಗಳು ಗರಿಗೆದರಿದೆ. ತಮ್ಮ ತಮ್ಮ ಪಕ್ಷಗಳನ್ನು ಇನ್ನಷ್ಟು ಬಲಶಾಲಿಗೊಳಿಸಿಲು ರಾಜ್ಯದ ಹಾಗೂ ಜಿಲ್ಲಾ ನಾಯಕರುಗಳು ಕೇಂದ್ರ ನಾಯಕರ ಮೊರೆ ಹೋಗಿದ್ದಾರೆ .
ಅದರಂತೆ ಬಿಜೆಪಿ ಪಕ್ಷ ಸಂಘಟನೆ ಹಾಗೂ ಚುನಾವಣಾ ಪ್ರಚಾರಕ್ಕಾಗಿ ಫೆಬ್ರವರಿ 19ರ ರಾತ್ರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮಂಗಳೂರಿಗೆ ಆಗಮಿಸಿ, ಕುಕ್ಕೆ ಸುಬ್ರಹ್ಮಣ್ಯದಲ್ಲಿ ತಂಗಲಿದ್ದಾರೆ. ಫೆಬ್ರವರಿ 20 ರ ಬೆಳಗ್ಗೆ ಕುಕ್ಕೆ ಸುಬ್ರಹ್ಮಣ್ಯ ದರ್ಶನ ಮಾಡಲಿದ್ದು, ಬಳಿಕ ಉಡುಪಿಯ ಶ್ರೀಕೃಷ್ಣಮಠಕ್ಕೆ ತೆರಳಲಿದ್ದಾರೆ. ಫೆಬ್ರವರಿ 22ರಂದು ದೀಪಕ್ ರಾವ್ ಮನೆಗೆ ತೆರಳಲಿದ್ದಾರೆ.
ಜೊತೆಗೆ ಬಿಜೆಪಿ ಮೀನುಗಾರರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಇದಲ್ಲದೆ, ಮಡಿಕೇರಿಯ ಕುಶಾಲನಗರದಿಂದ ಹಾಗೂ ಅಂಕೋಲಾದಿಂದ ಮಾರ್ಚ್ 3ರಿಂದ 6ರವರೆಗೆ ಬಿಜೆಪಿ ಕರ್ನಾಟಕ ಸುರಕ್ಷಾ ಯಾತ್ರೆ ನಡೆಸಲಿದೆ. ಸುರತ್ಕಲ್ನಲ್ಲಿ ಸಮಾರೋಪ ನಡೆಯಲಿದೆ. ಅಲ್ಲಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಗಮಿಸಲಿದ್ದಾರೆ. ಇದರ ಜೊತೆಗೆ 27ರಂದು ದಾವಣಗೆರೆಯಲ್ಲಿ ಬೃಹತ್ ರೈತ ಸಮಾವೇಶ ನಡೆಯಲಿದ್ದು, ಈ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ.