ಸ್ವರ್ಗಸ್ಥ ಸುಮನ್ ಕೆ.ಚಿಪ್ಲೂಣ್ಕರ್ಗೆ ಬಿಎಸ್ಕೆಬಿಎ ಸಂತಾಪ ಸಭೆ
ಮುಂಬಯಿ, ಫೆ.28: ಬಿಎಸ್ಕೆಬಿ ಅಸೋಸಿಯೇಶನ್, ಗೋಕುಲದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯೆ, ಉಪಾಧ್ಯಕ್ಷೆ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ಸುಮಾರು ಮೂರುವರೆ ದಶಕಗಳ ಅವಿರತ ಅತ್ಯಂತ ನಿಷ್ಠೆಯಿಂದ ಸಂಘಕ್ಕೆ ಅತ್ಯಮೂಲ್ಯ ಸೇವೆ ಸಲ್ಲಿಸಿದ ಮುದ್ರಾವಿಜ್ಞಾನದ ಮೇರು ಸಾಧಕಿ, ಗೋಕುಲ ಕಲಾಶ್ರೀ ಪ್ರಶಸ್ತಿ ವಿಜೇತೆ ಸುಮನ್ ಕೆ.ಚಿಪ್ಲೂಣ್ಕರ್ ನಿಧನಕ್ಕೆ ಕಳೆದ ಶನಿವಾರ ಶೋಕಸಭೆಯನ್ನು ನೆರೂಲ್ ಅಲ್ಲಿನ ಆಶ್ರಯದಲ್ಲಿ ಬಿಎಸ್ಕೆಬಿಎ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಅಧ್ಯಕ್ಷತೆಯಲ್ಲಿ ಜರಗಿಸ ಲಾಯಿತು.
ಸುರೇಶ್ ರಾವ್ ಅವರು ಸುಮನ್ ನಿಧನಕ್ಕೆ ಶೋಕ ವ್ಯಕ್ತ ಪಡಿಸುತ್ತಾ `ಸದಾ ಗೋಕುಲದ ಏಳಿಗೆಯನ್ನೇ ಬಯಸುತ್ತಿದ್ದ ಸುಮನ್ ನಾಸಿಕದಲ್ಲಿ ಇದ್ದುಕೊಂಡು ಕೂಡಾ ಗೋಕುಲದ ಚಟುವಟಿಕೆಗಳ ಬಗ್ಗೆ ವಿಶೇಷ ಆಸಕ್ತಿ ವಹಿಸುತ್ತಿದ್ದರು. ಕೊಡುಗೈ ದಾನಿಯಾದ ಇವರು, ಸದ್ಯ ಪುನರ್ ನಿರ್ಮಾಣದಲ್ಲಿರುವ ಗೋಕುಲ ಕಟ್ಟಡದ ಧನ ಸಂಗ್ರಹಕ್ಕಾಗಿ ತನ್ನ ದೇಣಿಗೆಯನ್ನು ನೀಡುತ್ತಿದ್ದುದಲ್ಲದೆ, ಇತರರಿಂದಲೂ ಧನಸಂಗ್ರಹಕ್ಕೆ ಅತ್ಯಂತ ಮುತುವರ್ಜಿ ವಹಿಸುತ್ತಿದ್ದರು. ಸದಾ ಹಸನ್ಮುಖ, ನಯ-ವಿನಯದ ಮಾತುಗಳಿಂದ ಎಲ್ಲರ ಪ್ರೀತಿ ಪಾತ್ರರಾಗಿದ್ದ, ನಮಗೆಲ್ಲಾ ಹಿರಿಯಕ್ಕನಂತೆ ಮಾರ್ಗದರ್ಶಕರಾಗಿದ್ದ ಸುಮನಕ್ಕನವರ ನಿಧನದಿಂದ ಸಂಘಕ್ಕೆ ಭರಿಸಲಾರದ ನಷ್ಟವಾಗಿದೆ. ಅವರ ಆದರ್ಶ ಜೀವನ ಎಲ್ಲರಿಗೂ ದಾರಿ ದೀಪವಾಗಬೇಕು, ಗೋಕುಲ ನವೀಕರಣದ ಕನಸು ಕಾಣುತ್ತಿದ್ದ ಸುಮನ್ ಅವರ ಕನಸು ನನಸಾಗಬೇಕಾದರೆ ತಾವೆಲ್ಲರೂ ಅವರಂತೆ ತಂತಮ್ಮ ತನುಮನಧನದ ಸಹಕಾರ ನೀಡಬೇಕು, ಅದುವೇ ನಾವು ಅವರಿಗೆ ಅರ್ಪಿಸುವ ಶ್ರದ್ಧಾಂಜಲಿ' ಎಂದು ಹೇಳುತ್ತಾ ಮೃತರ ಆತ್ಮಕ್ಕೆ ಶಾಂತಿ ಕೋರಿದರು.
ಉಪಾಧ್ಯಕ್ಷರುಗಳಾದ ವಾಮನ್ ಹೊಳ್ಳ, ಶೈಲಿನಿ ರಾವ್, ಕೋಶಾಧಿಕಾರಿ ಹರಿದಾಸ್ ಭಟ್, ಜತೆ ಕಾರ್ಯದರ್ಶಿ ಪಿ.ಸಿ.ಎನ್ ರಾವ್, ಸಂಘದ ನಿಕಟಪೂರ್ವ ಅಧ್ಯಕ್ಷ ಕೆ.ಸುಬ್ಬಣ್ಣ ರಾವ್, ಶಕುಂತಲಾ ಭಟ್, ಪ್ರಭಾವತಿ ರಾವ್, ಚಂದ್ರಾವತಿ ರಾವ್, ಲತಾ ಕೋಟೆಕಾರ್, ಕೆ.ಎನ್ ಗೋರೆ, ಚಂದ್ರಶೇಖರ್ ಭಟ್ ಮತ್ತಿತರರು ಮಾತನಾಡಿ ತಂತಮ್ಮ ಜೀವನದಲ್ಲಿ ಸುಮನ್ ಅವರು ಬಿರಿದ ಪ್ರಭಾವ, ಗೋಕುಲಕ್ಕೆ, ಸಮಾಜಕ್ಕೆ ಮಾಡಿದ ಸೇವೆ, ಶೆಕ್ಷಣಿಕ ಹಾಗೂ ಮುದ್ರಾ ವಿಜ್ಞಾನ ಕ್ಷೇತ್ರದಲ್ಲಿ ಮಾಡಿದ ಅಪಾರ ಸಾಧನೆಯನ್ನು ಸ್ಮರಿಸಿ ಸಂತಾಪ ವ್ಯಕ್ತ ಪಡಿಸಿದರು.
ಸಂಘದ ಪರವಾಗಿ ಕೇಶವರಾವ್ ಚಿಪ್ಲೂಣ್ಕರ್ ಮತ್ತು ಕುಟುಂಬಕ್ಕೆ ನೀಡಲಾಗುವ ಸಂತಾಪ ಸೂಚಕ ಪತ್ರವನ್ನು ಮಹಿಳಾ ವಿಭಾಗಧ್ಯಕ್ಷೆ ಪ್ರೇಮಾ ಎಸ್.ರಾವ್ ವಾಚಿಸಿದರು. ನಂತರ ಎರಡು ನಿಮಿಷಗಳ ಮೌನ ಪ್ರಾರ್ಥನೆಯೊಂದಿಗೆ ಮೃತರ ಆತ್ಮಕ್ಕೆ ಚಿರಶಾಂತಿ ಕೋರಿ ಬಾಷ್ಪಾಂಜಲಿ ಸಲ್ಲಿಸಲಾಯಿತು. ಗೌರವ ಕಾರ್ಯದರ್ಶಿ ಎ.ಪಿ.ಕೆ ಪೆÇೀತಿ ಕಾರ್ಯಕ್ರಮ ನಿರೂಪಿಸಿದರು.