ಮಂಗಳೂರು. ಜನ್ನತುಲ್ ಉಲೂಂ ಯಂಗ್ಮೆನ್ಸ್ ಅಸೋಸಿಯೇಶನ್ ಮತ್ತು ಮಂಗಳೂರು ವೆನ್ಲಾಕ್ ಅಸ್ಪತ್ರೆಯ ರಕ್ತನಿಧಿ ವಿಭಾಗದ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ ಸೋಮವಾರ ಕಣ್ಣೂರಿನ ಕುಂಡಾಲ ಜನ್ನತುಲ್ ಉಲೂಂ ಮದ್ರಸ ಹಾಲ್ನಲ್ಲಿ ನಡೆಯಿತು.
ಜನ್ನತುಲ್ ಉಲೂಂ ಯಂಗ್ಮೆನ್ಸ್ ಅಸೋಸಿಯೇಶನ್ ಸ್ಥಾಪಕಾಧ್ಯಕ್ಷ ಅಬ್ದುಲ್ ರಶೀದ್ ಹನೀಫಿ ಮಾತನಾಡಿ, ಗಾಂಜಾ ಮುಕ್ತ ಕಣ್ಣೂರು ಅಭಿಯಾನವನ್ನು ಸಂಸ್ಥೆ ಕೈಗೊಂಡ ಹಿನ್ನೆಲೆಯಲ್ಲಿ ಪರಿಸರದಲ್ಲಿ ಮಹತ್ತರ ಬದಲಾವಣೆಯಾಗಿದೆ. ಅಡ್ಯಾರ್ ಮತ್ತು ಕಣ್ಣೂರು ವ್ಯಾಪ್ತಿಯಲ್ಲಿ ಗಾಂಜಾ ವ್ಯಸನಿಗಳು ಹಾಗೂ ಗ್ಯಾಂಗ್ವಾರಿನಲ್ಲಿದ್ದವರು ಎಲ್ಲವನ್ನೂ ಬಿಟ್ಟು ಸಂಘಟನೆಯ ಜತೆಗೆ ಕೈಜೋಡಿಸಿಕೊಂಡು ಉತ್ತಮ ದಾರಿಯಲ್ಲಿ ಸಾಗುತ್ತಿರುವುದು ಸಂಘಟನೆಯ ಮಹತ್ಕಾರ್ಯವಾಗಿದೆ. ನಿರ್ಗತಿಕರಿಗೆ ಆಶ್ರಯವಾಗಿ ಸಂಘಟನೆ ಕಾರ್ಯಾಚರಿಸುತ್ತಿದೆ. ಇದೀಗ ರಕ್ತದಾನ ಶಿಬಿರ ಕೈಗೊಳ್ಳುವ ಮೂಲಕ ಎಲ್ಲಾ ಧರ್ಮೀಯರಿಗೂ ಆಪತ್ಕಾಲದಲ್ಲಿ ಸಹಕರಿಸಲು ಸಂಘಟನೆ ಮುಂದಾಗಿದೆ. ಜತೆಗೆ ವರದಕ್ಷಿಣೆ ರಹಿತ ಮದುವೆಯಾಗುವ ಜೋಡಿಯ ವಿವಾಹದ ಸಂಪೂರ್ಣ ವೆಚ್ಚವನ್ನು ಭರಿಸಲು ಸಂಘಟನೆ ಸದಾ ಸಿದ್ಧವಾಗಿದೆ ಎಂದು ಹೇಳಿದರು.
ಜನ್ನತುಲ್ ಉಲೂಂ ಯಂಗ್ಮೆನ್ಸ್ ಅಸೋಸಿಯೇಶನ್ ಕಾರ್ಯದರ್ಶಿ ಶಾಕೀರ್ ನಿಝಾಂ ಮಾತನಾಡಿ ಸಾಮಾಜಿಕವಾಗಿ ಜನ್ನತ್ತುಲ್ ಉಲೂಂ ಯಂಗ್ ಮೆನ್ಸ್ ಅಸೋಸಿಯೇಷನ್ ಸಂಘಟನೆ ಕಾರ್ಯಾಚರಿಸುತ್ತಿದ್ದು, ಇದರಲ್ಲಿರುವ ಯುವಪಡೆ ಸಮುದಾಯಕ್ಕಾಗಿ ಎಂದಿಗೂ ದುಡಿಯುವ ಯುವಸಂಘಟನೆಯಾಗಿದೆ ಎಂದು ಹೇಳಿದರು.
ಕಣ್ಣೂರು ಕೇಂದ್ರÀ ಜುಮಾ ಮಸೀದಿ ಖತೀಬ್ ಅನ್ಸಾರ್ ಫೈಝಿ ಬುರ್ಹಾನಿ ಕಾರ್ಯಕ್ರಮ ಉದ್ಘಾಟಿಸಿದರು. ಜನ್ನತುಲ್ ಉಲೂಂ ಮಸೀದಿ ಅಧ್ಯಕ್ಷ ರಫೀಕ್ ಇ.ಕೆ ಕಣ್ಣೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಜನ್ನತುಲ್ ಉಲೂಂ ಯಂಗ್ಮೆನ್ಸ್ ಅಸೋಸಿಯೇಶನ್ ಅಧ್ಯಕ್ಷ ಮೊಹಮ್ಮದ್ ಅನ್ಸಾರ್ ಕುಂಡಾಲ, ಬದ್ರಿಯಾ ಜುಮಾ ಮಸೀದಿ ಕಾರ್ಯದರ್ಶಿ ಇಕ್ಬಾಲ್ ಎ.ಕೆ, ಸ್ಥಳೀಯರಾದ ಯಾಕೂಬ್ ಕುಂಡಾಲ, ಇಕ್ಬಾಲ್ ಬೋರುಗುಡ್ಡೆ, ಸಾಧಿಕ್ ಕಣ್ಣೂರು, ಉಮ್ಮರಬ್ಬ ಕುಂಡಾಲ, ಉಸ್ಮಾನ್ ಸಖಾಫಿ ಮನಾಲ, ಮಂಗಳೂರು ವೆನ್ಲಾಕ್ ಅಸ್ಪತ್ರೆಯ ರಕ್ತನಿಧಿ ವಿಭಾಗದ ಮುಖ್ಯಸ್ಥ ಆ್ಯಂಟನಿ ಡಿ'ಸೋಜಾ, ಮುಂತಾದವರು ಈ ಸಂದರ್ಭ ಉಪಸ್ಥಿತರಿದರು.