ಮಂಗಳೂರು : ಮಂಗಳೂರಿನಾದ್ಯಂತ ಸುರಿದ ಮಹಾ ಮಳೆ ಸ್ವಲ್ಪ ಬಿಡುವು ಪಡೆದಿದೆ. ಭಾರೀ ಮಳೆಯ ಬಳಿಕ ಕರಾವಳಿಯಲ್ಲಿ ಮಳೆಯ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದ್ದು, ಮಂಗಳೂರಿನಲ್ಲಿ ಜನ ಜೀವನ ಸಹಜ ಸಹಜ ಸ್ಥಿತಿಗೆ ಮರಳುತ್ತಿದೆ.ಮಂಗಳೂರಿನ ಸುತ್ತಮುತ್ತ ಸೃಷ್ಟಿಯಾಗಿದ್ದ ನೆರೆಯ ಪರಿಸ್ಥಿತಿ ಸುಧಾರಿಸುತ್ತಿದೆ. ನಿನ್ನೆ ಸುರಿದ ಮಹಾಮಳೆಗೆ ಮಂಗಳೂರಿನಲ್ಲಿ ಭಾರೀ ಪ್ರಮಾಣದಲ್ಲಿ ಆಸ್ತಿಪಾಸ್ತಿಗೆ ನಷ್ಟುಂಟಾಗಿದ್ದು, ಕೋಟ್ಯಾಂತರ ರೂಪಾಯಿ ನಷ್ಟ ಸಂಭವಿಸಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಈ ಗಾಗಲೇ ಮಂಗಳೂರಿಗೆ ಆಗಮಿಸಿದ್ದು,
ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದೆ.ನಿನ್ನೆ ಸುರಿದ ಮಹಾಮಳೆಗೆ ಸಿಲುಕಿ ವಯೋವೃದ್ಧೆ ಸೇರಿದಂತೆ ಮಹಿಳೆಯೊಬ್ಬರು ಮೃತ ಪಟ್ಟಿದ್ದು, ಈ ಇಬ್ಬರ ಕುಟುಂಬಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಪರಿಹಾರ ವಿತರಿಸಿದರು. ಭಾರೀ ಮಳೆಯಿಂದಾಗಿ ಉದಯನಗರದ ಮೋಹಿನಿ (60) ಹಾಗು ಕೊಡಿಯಾಲ್ ಬೈಲ್ ನಿವಾಸಿ ಮುಕ್ತಾಬಾಯಿ(80) ಸಾವನ್ನಪ್ಪಿದರು.ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯ ಶವಾಗಾರದ ಬಳಿ ಆಗಮಿಸಿದ ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರದ ಚೆಕ್ ವಿತರಿಸಿದರು.ಈ ಮಧ್ಯೆ, ಮಂಗಳೂರು ನಗರದ ಎಲ್ಲ ಪ್ರಮುಖ ಚರಂಡಿಗಳ ಪರಿಶೀಲನೆಯನ್ನು ತಕ್ಷಣ ನಡೆಸುವಂತೆ ಮಹಾನಗರ ಪಾಲಿಕೆಯ ಆಯುಕ್ತರು ಮತ್ತು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಆದೇಶ ನೀಡಿದ್ದಾರೆ.