ಮುಂಬಯಿ, ಜೂ.02: ಕುಡಿದ ಮತ್ತಿನಲ್ಲಿ ಮಾವ ಮತ್ತು ಅಳಿಯನ ನಡುವಿನ ವಾಗ್ವಾದ ತಾರಕಕ್ಕೇರಿ ಹೊಡೆದಾಟ ನಡೆದು ಅಳಿಯನ ಕೊಲೆಯಲ್ಲಿ ಅಂತ್ಯಗೊಂಡ ದಾರುಣ ಘಟನೆ ಮಣಿನಾಲ್ಕೂರು ಗ್ರಾಮದಲ್ಲಿ ನಡೆದಿದೆ.
ಇಲ್ಲಿನ ಬಡೆಕೊಟ್ಟು ನಿವಾಸಿ ರಮಾನಂದ (52.) ಮೃತ ದುರ್ದೈವಿಯಾಗಿದ್ದು, 70 ವರ್ಷ ವಯಸ್ಸಿನ ಮಾವ ಅಮ್ಮನ್ನ ಪೂಜಾರಿ ಕೊಲೆಗೈದ ಆರೋಪಿ ಎಂದು ಹೇಳಲಾಗಿದೆ.
ಘಟನೆ ವಿವರ:
ಮೂಲತಃ ಬಣಕಲ್ ನಿವಾಸಿ ರಮಾನಂದ ಕಳೆದ ಹಲವು ವರ್ಷಗಳಿಂದ ತನ್ನ ಪತ್ನಿ ಮೋಹಿನಿಯ ತಂದೆ ಅಮನ್ನ ಪೂಜಾರಿಯವರ ಮನೆಯಲ್ಲಿ ವಾಸ್ತವ್ಯವಿದ್ದರು. ರಮಾನಂದ ಮೋಹಿನಿ ದಂಪತಿಗಳಿಗೆ ಮೂವರು ಹೆಣ್ಣು ಮಕ್ಕಳಿದ್ದು, ಹಿರಿಯ ಮಗಳಿಗೆ ಕೆಲ ತಿಂಗಳ ಹಿಂದೆಯಷ್ಟೇ ಮದುವೆ ನಡೆದಿದ್ದು, ಇನ್ನಿಬ್ಬರು ಹೆಣ್ಣುಮಕ್ಕಳು ಮೂಡಬಿದಿರೆಯ ಬಟ್ಟೆಮಳಿಗೆಯಲ್ಲಿ ದುಡಿಯುತ್ತಿದ್ದಾರೆ. ಪತ್ನಿ ಮೋಹಿನಿ ಹತ್ತಿರದ ಮನೆಗಳಲ್ಲಿ ಮನೆಕೆಲಸ ನಿರ್ವಹಿಸುತ್ತಿದ್ದಾರೆ.
ಕಳೆದ ಕೆಲವು ಸಮಯಗಳಿಂದ ಮಾವ ಅಮ್ಮನ್ನ ಪೂಜಾರಿ ಹಾಗೂ ರಮಾನಂದರ ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದು, ಶನಿವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಕೆಲಸಕ್ಕೆ ತೆರಳಿದ್ದ ರಮಾನಂದ ರ ಪತ್ನಿ ಮನೆಗೆ ಬಂದಾಗ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದ್ದು, ಮನೆ ಹಿಂಭಾಗದ ತೆಂಗಿನ ಹೊಂಡದಲ್ಲಿ ರಮಾನಂದ ಶವವಾಗಿ ಪತ್ತೆಯಾಗಿದ್ದಾರೆ. ಕೊಲೆ ಆರೋಪಿ ಎನ್ನಲಾದ ಅಮನ್ನ ಪೂಜಾರಿ ಅವರಿಗೂ ಹೊಡೆದಾಟದ ವೇಳೆ ಗಾಯಗಳಾಗಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಮನೆ ಪರಿಸರದಲ್ಲಿ ಭಾರೀ ಜನಜಮಾಯಿಸಿದ್ದು, ಬಂಟ್ವಾಳ ಗ್ರಾಮಾಂತರ ಪೆÇಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ನಡೆಸಿದ್ದಾರೆ. ಆರೋಪಿ ಅಮ್ಮನ್ನ ಪೂಜಾರಿಗೆ ಎರಡು ವಿವಾಹ ಆಗಿದ್ದು, ಮೋಹಿನಿಯ ತಾಯಿ ಕೆಲ ವರ್ಷಗಳ ಹಿಂದೆಯೇ ಮೃತಪಟ್ಟಿದ್ದು, ಇನ್ನೋರ್ವ ಹೆಂಡತಿ ಇಬ್ಬರು ಹೆಣ್ಣುಮಕ್ಕಳ ಜೊತೆ ಇದೇ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಕುಡಿದ ಮತ್ತಿನಲ್ಲಿ ನಡೆದ ಕೊಲೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲವಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಸ್ಥಳದಲ್ಲಿ ಪರೀಕ್ಷಣಾ ಐಪಿಎಸ್ ಅಕ್ಷಯ್ ಎಂ. ಹಾಕೆ, ಬಂಟ್ವಾಳ ವೃತ್ತ ನಿರೀಕ್ಷಕ ಪ್ರಕಾಶ್, ಗ್ರಾಮಾಂತರ ಠಾಣಾಧಿಕಾರಿ ಪ್ರಸನ್ನ ಕುಮಾರ್ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.