ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ ಪ್ರಕರಣ ವರದಿಯಾಗಿದೆ. ಬಂಟ್ವಾಳ ತಾಲೂಕಿನ ಫರಂಗಿಪೇಟೆ ರಾಷ್ಟ್ರೀಯ ಹೆದ್ದಾರಿ ಬಳಿ ಭಿನ್ನ ಕೋಮಿನ ಯುವಕ ಹಾಗು ಮಹಿಳೆಯ ಮೇಲೆ ದುಷ್ಕರ್ಮಿಗಳ ತಂಡ ದಾಳಿ ನಡೆಸಿರುವುದು ತಡವಾಗಿ ಬೆಳಕಿಗೆ ಬಂದಿದೆ.ಮಾಹಿತಿ ದೊರೆಯುತ್ತಿದ್ದಂತೆ ಸ್ಥಳಕ್ಕೆ ತೆರಳಿ ತಕ್ಷಣವೇ ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದರು.
ಉಡುಪಿ ಜಿಲ್ಲೆಯ ಸಾಲಿಗ್ರಾಮ ನಿವಾಸಿ ಸುರೇಶ ಎಂಬವರು ಬೋಟು ವ್ಯವಹಾರ ನಡೆಸುತ್ತಿದ್ದು, ಇದೇ ವ್ಯವಹಾರಕ್ಕೆ ಸಂಬಂಧಿಸಿದಂತೆ ಫರಂಗಿಪೇಟೆಗೆ ಬಂದಿದ್ದ ಇವರಿಗೆ ಉಡುಪಿ ಮೂಲದ ಪರಿಚಯಸ್ಥ ಮುಸ್ಲಿಂ ಮಹಿಳೆಯೊಬ್ಬರು ಸಿಕ್ಕಿದ್ದಾರೆ. ಮಹಿಳೆ ಇಲ್ಲಿನ ಆಯುವೇ೯ದ ಔಷಧಿ ನೀಡುವ ನಾಟಿ ವೈದ್ಯ ಹಾಜಿ ಮಸ್ತಾನ ಎಂಬವರಲ್ಲಿಗೆ ಬಂದಿದ್ದರು ಎಂದು ಹೇಳಲಾಗಿದೆ.ಇದೇ ವೇಳೆ ಇಬ್ಬರು ಮಾತನಾಡುವುದನ್ನು ಕಂಡ ಸ್ಥಳೀಯ ಭಿನ್ನಕೋಮಿನ ಯುವಕರು ಫರಂಗಿಪೇಟೆ ಪೇಟೆಯಿಂದ ಅನ್ಯಕೋಮಿನ ಯುವಕ ತಮ್ಮ ಧರ್ಮದ ಯುವತಿಯನ್ನು ಕಾರಿನಲ್ಲಿ ಕುಳ್ಳಿರಿಸಿ ಕರೆದುಕೊಂಡು ಹೋಗಲು ಯತ್ನಿಸುತ್ತಿದ್ದಾನೆ ಎಂಬ ಗಾಳಿ ಸುದ್ದಿ ಹರಡಿದ ಹಿನ್ನೆಲೆಯಲ್ಲಿ ಯುವಕರ ಗುಂಪೊಂದು ಸ್ಥಳಕ್ಕೆ ಆಗಮಿಸಿ ಜೋಡಿಯನ್ನು ಸುತ್ತುವರಿದು ಹಲ್ಲೆ ನಡೆಸಿದೆ ಎಂದು ಹೇಳಲಾಗಿದೆ.