ಎಲ್ಲರ ನೋವು-ನಲಿವಿಗೆ ಶ್ರಮಿಸುವೆ : ಶಾಸಕ ಡಾ. ಭರತ್ ಶೆಟ್ಟಿ
ಮುಂಬಯಿ (ಗುರುಪುರ), ಜು.31: ಗುರುಪುರ ಬಂಟರ ಮಾತೃ ಸಂಘದ ವಾರ್ಷಿಕ ಸಮಾವೇಶ, ಮಹಾಸಭೆ, ಸಮಾಜದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಅಭಿನಂದನಾ ಸಮಾರಂಭ ಭಾನುವಾರ ಗುರುಪುರ ಕುಕ್ಕದಕಟ್ಟೆಯ ಶ್ರೀ ವೈದ್ಯನಾಥ ಸಮುದಾಯ ಭವನದಲ್ಲಿ ಜರುಗಿತು.
ಪ್ರತಿಯೊಬ್ಬ ಬಂಟರಲ್ಲಿ ನಾಯಕತ್ವ ಗುಣವಿದೆ. ಶಿಸ್ತಿನ ಸಮಾಜ ನಿರ್ಮಾಣಕ್ಕಾಗಿ ಇದು ಅವಶ್ಯ. ಶಿಸ್ತುಬದ್ಧ ಬಂಟರ ಸಮಾಜದಿಂದ ಭವಿಷ್ಯದಲ್ಲಿ ಏನನ್ನಾದರೂ ಸಾಧಿಸಬಹುದು. ಸಮಾಜದ ಏಳ್ಗೆಗಾಗಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು ಎಂದು ಆಶೀರ್ವಚನ ನೀಡಿದ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮಿ ಹೇಳಿದರು.
ಅಪರಾಹ್ನ ನಡೆದ ಸನ್ಮಾನ ಮತ್ತು ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಡಾ. ಭರತ್ ಶೆಟ್ಟಿ, ಬಂಟರ ಸಂಘದ ಅಭಿನಂದನೆ ನನ್ನ ಜವಾಬ್ದಾರಿ ಹೆಚ್ಚಿಸಿದೆ. ನಿಮ್ಮೆಲ್ಲರ ನೋವು-ನಲಿವುಗಳಿಗೆ ಸ್ಪಂದಿಸಬೇಕೆಂಬ ಏಕೈಕ ಉದ್ದೇಶದಿಂದ ರಾಜಕೀಯಕ್ಕೆ ಬಂದಿದ್ದೇನೆ. ಯಾವತ್ತಾದರೂ ನನ್ನಿಂದ ಕೆಲಸವಾಗುತ್ತಿಲ್ಲ ಎಂದಾದರೆ ಆ ದಿನವೇ ನಾನು ರಾಜಕೀಯ ಬಿಟ್ಟು ವೈದ್ಯ ವೃತ್ತಿಯಲ್ಲಿ ಮುಂದುವರಿಯುವೆ ಎಂದರು.
ಮುಂಬೈ ಹೋಟೆಲ್ ಉದ್ಯಮಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡುತ್ತ, ಬಂಟ ಸಮಾಜದಲ್ಲಿ ಹಣವಿದ್ದರು ಮತ್ತು ಏನೂ ಇಲ್ಲದರಿದ್ದಾರೆ. ನಾವೆಲ್ಲರೂ ಬಡವರ ಏಳ್ಗೆಗೆ ಶ್ರಮಿಸಬೇಕು ಮತ್ತು ಬಂಟರೆಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು. ಆಗಲೇ ನಮ್ಮ ಶ್ರೀಮಂತ ಪರಂಪರೆಯ ಅನಾವರಣಗೊಳ್ಳಲಿದೆ ಎಂದು ಹೇಳಿದರು.
ಸುಬ್ಬಯ್ಯ ಶೆಟ್ಟಿ ಲಿಂಗಮಾರುಗುತ್ತು(ಸಮಾಜಸೇವೆ), ಅಶ್ವಿನ್ ನಾಯ್ಕ್ ಮಿಜಾರು(ಕ್ರೀಡೆ-ಎಫ್ಐಎ ಯುರೋಪಿಯನ್ ರ್ಯಾಲಿ ಚಾಂಪಿಯನ್), ರಾಜೇಂದ್ರ ಮೇಂಡ ಮೊಗರುಗುತ್ತು(ಕೃಷಿ), ವಿಜಯಲಕ್ಷ್ಮೀ ಶೆಟ್ಟಿ ಮೊಗರುಗುತ್ತು(ರಾಜಕೀಯ), ಸುರೇಂದ್ರ ಮಲ್ಲಿ ದೋಣಿಂಜೆಗುತ್ತು(ಯಕ್ಷಗಾನ), ರಕ್ಷಿತ್ ಶೆಟ್ಟಿ ಗುರುಪುರ(ಕ್ರೀಡೆ) ಮತ್ತು ಗಣೇಶ ಶೆಟ್ಟಿ ಅಡ್ಡೂರು(ಶ್ರಮಿಕ ಕ್ಷೇತ್ರ) ಇವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಜೊತೆಗೆ ಐಕಳ ದಂಪತಿಗೆ ಮೈಸೂರು ಪೇಟ ತೊಡಗಿಸಿ ಸನ್ಮಾನಿಸಲಾಯಿತು. ಗುರುಪುರ ಬಂಟರ ಮಾತೃ ಸಂಘದ ಐದನೇ ವರ್ಷದ ಸ್ಮರಣ ಸಂಚಿಕೆ `ಪಂಚಮ' ಬಿಡುಗಡೆಗೊಂಡಿತು.
ವೇದಿಕೆಯಲ್ಲಿ ಬಂಟ ಸಮಾಜದ ಗಣ್ಯರಾದ ಅಜಿತ್ ಕುಮಾರ್ ರೈ ಮಾಲಾಡಿ, ಸದಾನಂದ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಮಂಜುನಾಥ ಭಂಡಾರಿ ಮೂಡುಶೆಡ್ಡೆ, ಶಶಿಧರ ಹೆಗ್ಡೆ(ಮಾಜಿ ಮೇಯರ್), ಗಿರೀಶ್ ಶೆಟ್ಟಿ, ವಿಜಯಪ್ರಸಾದ್ ಆಳ್ವ, ಜಯರಾಮ ಸಾಂತ, ದೇವಿಚರಣ ಶೆಟ್ಟಿ, ರವೀಂದ್ರನಾಥ ಮಾರ್ಲ, ಉಮೇಶ್ ರೈ ಮೇಗಿನಮನೆ, ಪದ್ಮನಾಭ ಆಳ್ವ ಕೊಂಬೆಲ್, ರಾಜಗೋಪಾಲ ರೈ, ವಿನಯಕುಮಾರ್ ಶೆಟ್ಟಿ ಮೊದಲಾದವರಿದ್ದರು. ಸಂಘದ ಪದಾಧಿಕಾರಿ ಸುದರ್ಶನ ಶೆಟ್ಟಿ ಪೆರ್ಮಂಕಿ ಪ್ರಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ರಾಜೀವ ಶೆಟ್ಟಿ ಸಲ್ಲಾಜೆ, ನಯನಾ ಶೆಟ್ಟಿ ಗುರಪುರ ಹಾಗೂ ಕವಿತಾ ಪಕ್ಕಳ ಪೆರ್ಮಂಕಿಗುತ್ತು ಕಾರ್ಯಕ್ರಮ ನಿರೂಪಿಸಿದರು.