ಉಜಿರೆ: ಬದುಕಿನ ಎಲ್ಲಾ ರಂಗಗಳಲ್ಲಿ ಎಂಜಿನಿಯರ್ಗಳ ಅವಶ್ಯಕತೆ ಇದ್ದು ಅವರು ಆತ್ಮಸಾಕ್ಷಿಗೆ ಸರಿಯಾಗಿ ಶಿಸ್ತು ಮತ್ತು ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಭಾನುವಾರ ಧರ್ಮಸ್ಥಳದಲ್ಲಿ ಮಹೋತ್ಸವ ಸಭಾ ಭವನದಲ್ಲಿ ಕರ್ನಾಟಕ ಎಂಜಿನಿಯರ್ಗಳ ಸಂಘದ ಆರನೇ ಕಾರ್ಯಕಾರಿ ಸಮಿತಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಎಂಜಿನಿಯರ್ಗಳು ವಿಜ್ಞಾನಿಗಳು ಹಾಗೂ ಚಿಂತಕರಾಗಿದ್ದು ಸಾವಿರಾರು ವರ್ಷಗಳ ಹಿಂದೆಯೇ ಪಿರಮಿಡ್, ತಾಜ್ಮಹಲ್ ನಂತಹ ವಿಶೇಷ ವಿನ್ಯಾಸದ ಕಟ್ಟಡಗಳ ಕಲ್ಪನೆ ಮಾಡಿ ವಿನ್ಯಾಸ ರೂಪಿಸಿದ್ದರು. ಅನೇಕ ವೈಶಿಷ್ಠ್ಯಪೂರ್ಣ ಸ್ಮಾರಕಗಳು, ದೇವಸ್ಥಾನಗಳು, ಚರ್ಚ್ಗಳು, ಮಸೀದಿಗಳು ಹಾಗೂ ಮಂದಿರಗಳನ್ನು ನಿರ್ಮಿಸಿದ್ದಾರೆ. ಸಮಾಜದಲ್ಲಿ ಎಂಜಿನಿಯರ್ ಗಳಿಗೆ ವಿಶೇಷ ಗೌರವವಿದೆ. ತಾವು ಮಾಡುವ ಕೆಲಸ ಶಾಶ್ವತವಾಗಿ ಜನರ ಸ್ಮರಣೆಯಲ್ಲಿರುವಂತೆ ಹಾಗೂ ದೇಶದ ಪ್ರಗತಿಗೆ ಪ್ರೇರಕವಾಗುವಂತೆ ಎಂಜಿನಿಯರ್ಗಳು ಕೆಲಸ ಮಾಡಬೇಕು. ತಮ್ಮ ಕ್ಷೇತ್ರದಲ್ಲಿ ಎದುರಾಗುವ ಸಮಸ್ಯೆಗಳನ್ನು, ಸವಾಲುಗಳನ್ನು ಬದ್ಧತೆ ಮತ್ತು ಕುಶಲತೆಯಿಂದ ಪರಿಹರಿಸಬೇಕು ಎಂದು ಅವರು ಸಲಹೆ ನೀಡಿದರು.
ನಿವೃತ್ತ ಎಂಜಿನಿಯರ್ ಕಲ್ಲಪ್ಪ ಅವರನ್ನು ಗೌರವಿಸಲಾಯಿತು. ಎಂಜಿನಿಯರ್ಗಳ ಸಂಘದ ಅಧ್ಯಕ್ಷ ಡಿ.ಎಸ್. ದೇವರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ ಸಂಘದ ಸೇವೆ, ಸಾಧನೆಯ ಮಾಹಿತಿ ನೀಡಿದರು.
ಎಂಜಿನಿಯರ್ಗಳಾದ ಕಾಂತರಾಜ್, ಚಿನ್ನೇಗೌಡ, ಎಸ್.ಎಂ. ಮೇಟಿ, ಎಚ್.ಕೆ. ಕಲ್ಲಪ್ಪ ಮತ್ತು ಯಶವಂತ ಉಪಸ್ಥಿತರಿದ್ದರು.
ಬೆಳ್ತಂಗಡಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಪ್ರಸಾದ ಅಜಿಲ ಸ್ವಾಗತಿಸಿದರು. ಉಡುಪಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಶೇಖರ ಧನ್ಯವಾದವಿತ್ತರು.
ಮುಖ್ಯಾಂಶಗಳು:
• ಭೌತಶಾಸ್ತ್ರ ಮತ್ತು ಖಗೋಳ ಭೌತಶಾಸ್ತ್ರದ ಜ್ಞಾನ ಭಾರತೀಯರಿಗೆ ಸಾವಿರಾರು ವರ್ಷಗಳ ಹಿಂದೆಯೇ ತಿಳಿದಿತ್ತು.
• ಎಂಜಿನಿಯರ್ಗಳು ಮಾಡುವ ಕೆಲಸ ಶಾಶ್ವತವಾಗಿ ದೇಶದ ಪ್ರಗತಿಗೆ ಸಹಾಯಕವಾಗಬೇಕು.
• ಎಂಜಿನಿಯರಿಂಗ್ ಕ್ಷೇತ್ರದಲ್ಲಿ ವೈಜ್ಞಾನಿಕ ಅಧ್ಯಯನ ಹಾಗೂ ಸಂಶೋಧನೆ ನಡೆಯಬೇಕು.
• ಎಂಜಿನಿಯರ್ಗಳಿಗೆ ಸಮಾಜದಲ್ಲಿ ವಿಶೇಷ ಗೌರವವಿದೆ.
• ಪ್ರಶಂಸೆಗೆ ರಾಜಕಾರಣಿಗಳು, ದೂಷಣೆಗೆ ಅಧಿಕಾರಿಗಳು.
• ಎಂಜಿನಿಯರ್ಗಳ ಸಂಘದ ವತಿಯಿಂದ ಹೆಗ್ಗಡೆಯವರನ್ನು ಸನ್ಮನಿಸಲಾಯಿತು.