ಮಂಗಳೂರು: ಪರಶುರಾಮ ಸೃಷ್ಟಿಯ ತುಳುನಾಡು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಗರಪಂಚಮಿಯನ್ನು ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸಲಾಯಿತು. ಮಂಗಳೂರಿನ ಇತಿಹಾಸ ಪ್ರಸಿದ್ಧ ಕುಡುಪು ಅನಂತ ಪದ್ಮನಾಭ ದೇವಸ್ಥಾನದಲ್ಲಿ ಮುಂಜಾನೆಯೇ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಸರತಿ ಸಾಲಿನಲ್ಲಿ ನಿಂತು ನಾಗ ದೇವನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಪಾರ್ಥನೆ ನೇರವೇರಿಸಿದರು. ನಾಗ ಬನದಲ್ಲಿ ನಾಗದೇವರಿಗೆ ದೇವಳದ ಪ್ರಧಾನ ಆರ್ಚಕರ ನೇತೃತ್ವದಲ್ಲಿ ಹಾಲು, ಕ್ಷೀರಾ, ತುಪ್ಪ, ಜೇನಿನೊಂದಿಗೆ ಪಂಚಾಮೃತ ಆಭಿಷೇಕವನ್ನು ಮಾಡಿ ವಿಶೇಷ ಪೂಜೆ ನೆರವೇರಿಸಿದರು.
ಈ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರೆ ನಾಗ ದೋಷ ಪರಿಹಾರ, ಸಂತಾನ ಪ್ರಾಪ್ತಿ ಹಾಗೂ ರೋಗ ರುಜಿನಗಳು ವಾಸಿಯಾಗುತ್ತವೆ ಎಂಬ ನಂಬಿಕೆ ಭಕ್ತರದ್ದು. ಈ ಹಿನ್ನೆಲೆಯಲ್ಲಿ ಪ್ರತಿಯೊಂದು ಕುಟುಂಬವೂ ನಾಗನ ವಿಗ್ರಹಗಳಿಗೆ ಹಾಲು ಹಾಗೂ ಸೀಯಾಳಾಭಿಷೇಕವನ್ನು ಮಾಡುವ ಮೂಲಕ ನಾಗನ ಮೇಲಿರುವ ನಂಬಿಕೆ ಹಾಗೂ ಭಕ್ತಿಯನ್ನು ಸಾದರಪಡಿಸುತ್ತದೆ.ಈ ಮೂಲಕ ಕರಾವಳಿಯಾದ್ಯಂತ ಶ್ರದ್ಧಾಭಕ್ತಿಯಿಂದ ನಾಗರಪಂಚಮಿ ಹಬ್ಬವನ್ನು ಆಚರಿಸಲಾಯಿತು.