ಮುಂಬಯಿ, ಸೆ.04: ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಹಾಗೂ ಬಿ. ಎಸ್.ಕೆ.ಬಿ. ಎಸೋಸಿಯೇಶನ್,ಗೋಕುಲ ಸಾಯನ್, ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ರವಿವಾರ, ದಿನಾಂಕ 2.9. 2018 ರಂದು ಶ್ರೀ ಕೃಷ್ಣ ಬಾಲಾಲಯ, ಆಶ್ರಯ, ನೆರೂಲ್ ನಲ್ಲಿ ವಿಜೃಂಭಣೆಯಿಂದ ಆಚರಿಸಿತು.
ಗೋಕುಲ ಸ್ಥಾಪಕ ಸದಸ್ಯರಲ್ಲೊಬ್ಬರಾದ ದಿ. ಯು.ವಿ. ಉಪಾಧ್ಯರವರ ಕುಟುಂಬ ಸದಸ್ಯರು ಬಾಲಾಲಯ ಹಾಗೂ ಶ್ರೀ ಗೋಪಾಲಕೃಷ್ಣ ದೇವರ ದಿವ್ಯ ಮೂರ್ತಿಯ ವಿಶೇಷ ಆಲಂಕಾರಕ್ಕಾಗಿ ವಿವಿಧ ಪುಷ್ಪಗಳನ್ನು ಪ್ರಾಯೋಜಿಸಿದ್ದರು. ವೇ. ಮೂ. ದಿನೇಶ್ ಉಪ್ಪರ್ಣ ಮತ್ತು ಸಹ ಅರ್ಚಕ ವರ್ಗದವರು ಬಾಲಾಲಯ ಹಾಗೂ ಶ್ರೀ ದೇವರ ಮೂರ್ತಿಯನ್ನು ಅತ್ಯಂತ ಸುಂದರವಾಗಿ ಅಲಂಕರಿಸಿದ್ದರು. ಗೋಕುಲ ಭಜನಾ ಮಂಡಳಿ, ಹರಿಕೃಷ್ಣ ಭಜನಾ ಮಂಡಳಿ, ಶ್ರೀಕೃಷ್ಣ ಭಜನಾ ಮಂಡಳಿ ಹಾಗೂ ಬಾಲಕಲಾವೃಂದದವರಿಂದ ಶ್ರೀಕೃಷ್ಣ ದೇವರನಾಮಗಳ ಭಜನಾ ಕಾರ್ಯಕ್ರಮ ನೆರವೇರಿತು. ನಂತರ ಹರಿ ಭಟ್ ಹಾಗೂ ದಿನೇಶ್ ಉಪ್ಪರ್ಣ ರ ನೇತೃತ್ವದಲ್ಲಿ ವಿಷ್ಣು ಸಹಸ್ರ ನಾಮ ಪಠನೆ, ಪುಷ್ಪಾರ್ಚನೆ, ಶ್ರೀ ಕೃಷ್ಣಾಷ್ಟೋತ್ತರ ಸ್ತೋತ್ರ ಪಠನೆಗಳೊಂದಿಗೆ ಪೂಜಾ ವಿಧಿಗಳು ವಿಧಿವತ್ತಾಗಿ ನೆರವೇರಿದವು.
ದಿನೇಶ್ ಉಪ್ಪರ್ಣ ರವರು ತಮ್ಮ ಪ್ರಾರ್ಥನೆಯಲ್ಲಿ 'ಕೃಷ್ಣನ ನೆನೆದರೆ ಕಷ್ಟ ಒಂದಿಲ್ಲ ಎಂದು ದಾಸವರೇಣ್ಯರುಗಳು ಕೊಂಡಾಡಿದ್ದಾರೆ. ಆತನ ನಾಮಸ್ಮರಣೆ ಮಾತ್ರದಿಂದ ಮಾನವರ ಕಷ್ಟಗಳು ಪರಿಹಾರವಾಗುವುವು. ಧರ್ಮ ಸಂಸ್ಥಾಪನೆಗಾಗಿಯೇ ಅವತರಿಸಿದ ಶ್ರೀ ಕೃಷ್ಣನ ಜನ್ಮದಿನವಾದ ಇಂದು ಭಕ್ತಿ ಶ್ರದ್ಧಾ ಪೂರ್ವಕವಾಗಿ ಉಪವಾಸ, ಭಜನೆ, ಕೀರ್ತನೆ, ಸ್ತೋತ್ರ ಪಠನೆ, ಮಂತ್ರ ಪುಷ್ಪಾರ್ಚನೆಗಳಿಂದ ಶ್ರೀಕೃಷ್ಣನ ಆರಾಧನೆಯನ್ನು ನಾವೆಲ್ಲಾ ಮಾಡಿದ್ದೇವೆ. ಸಂಘವು ಈಗ ಶ್ರೀ ಕೃಷ್ಣ ಮಂದಿರ ಹಾಗೂ ಗೋಕುಲ ಕಟ್ಟಡ ನಿರ್ಮಾಣದಂತಹ ಬೃಹತ್ ಯೋಜನೆಯನ್ನು ಹಮ್ಮಿಕೊಂಡಿದೆ. ಶ್ರೀ ದೇವರ ಅನುಗ್ರಹದಿಂದ ಹಾಗೂ ಭಕ್ತಾದಿಗಳ ತನುಮನಧನದ ಸಹಕಾರದಿಂದ ಶ್ರೀ ಕೃಷ್ಣ ಮಂದಿರದ ನವ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ನೆರವೇರಿ ನವನವೀನ ಮಂದಿರದಲ್ಲಿ ಶ್ರೀ ಗೋಪಾಲಕೃಷ್ಣ ದೇವರ ಪುನರ್ ಪ್ರತಿಷ್ಠಾಪನೆ ಅತಿ ಶೀಘ್ರವಾಗಿ ನೆರೆವೇರುವಂತಾಗಲಿ' ಎಂದು ಪ್ರಾರ್ಥಿಸಿದರು. ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಕಾರ್ಯಕಾರಿ ಸಮಿತಿ, ಬಿ.ಎಸ್ ಕೆ.ಬಿ. ಎಸೋಸಿಯೇಶನ್ ಉಪಾಧ್ಯಕ್ಷ ವಾಮನ್ ಹೊಳ್ಳ, ಕಾರ್ಯದರ್ಶಿ ಎ. ಪಿ. ಕೆ. ಪೆÇೀತಿ, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ನೂರಾರು ಭಕ್ತಾದಿಗಳು ಈ ಧಾರ್ಮಿಕ ವಿಧಿಯಲ್ಲಿ ಪಾಲ್ಗೊಂಡು ಶ್ರೀ ಕೃಷ್ಣನಿಗೆ ಅರ್ಘ್ಯ ಪ್ರದಾನ ಗೈದರು. ತೀರ್ಥ ಪ್ರಸಾದ ವಿತರಣೆ ಹಾಗೂ ಲಘು ಉಪಹಾರದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.