ಬದಿಯಡ್ಕ: ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಸವಾನಂದ ಭಾರತೀ ಶ್ರೀಗಳ 58ನೇ ಚಾತುರ್ಮಾಸ್ಯ ವ್ರತಾಚರಣೆಯ ಅಂಗವಾಗಿ ಪ್ರತಿನಿತ್ಯ ನಡೆಯುತ್ತಿದ್ದಚ ಸಾಂಸ್ಕøತಿಕ ಸಂಜೆಯ ಕೊನೆಯ ಕಾರ್ಯಕ್ರಮವಾಗಿ ಸೋಮವಾರ ಸಂಜೆ ಕಿಕ್ಕಿರಿದು ನೆರೆದಿದ್ದ ಸಾವಿರಾರು ಜನರ ಸಮ್ಮುಖದಲ್ಲಿ ಮೆಗಾ ಮ್ಯಾಜಿಕ್ ಸ್ಟಾರ್ ಕುದ್ರೋಳಿ ಗಣೇಶ್ ಮತ್ತು ಅವರ ತಂಡದವರಿಂದ ಮೈನವಿರೇಳಿಸಿದ ವಿಸ್ಮಯ ಜಾದೂ ಪ್ರದರ್ಶನ ಮನಸೂರೆಗೊಂಡಿತು.
ಜಾನಪದ, ರಂಗಭೂಮಿ, ಮಣ್ಣಿನ ಪರಂಪರೆಯ ಸೊಗಡುಗಳ ಹೂರಣವಾದ ತಮ್ಮ ಜಾದೂ ಪ್ರದರ್ಶನದಲ್ಲಿ ಸ್ವಚ್ಚತೆಗಾಗಿನ ಸ್ವಚ್ಚ ಜಾದೂ ಹೆಚ್ಚು ಗಮನ ಸೆಳೆಯುವಲ್ಲಿ ಸಫಲವಾಯಿತು. ಮಾಯಾ ಕತ್ತರಿ, ಇಂಡಿಯನ್ ರೂಪ್ ಟ್ರಿಕ್, ಪೇಪರ್ ಮ್ಯಾಜಿಕ್, ಜಪಾನೀ ಬೀಸಣಿಗೆ, ಉಂಗುರ ಮ್ಯಾಜಿಕ್, ಇಂಡಿಯನ್ ಬಾಸ್ಕೆಟ್ ಮ್ಯಾಟಿಕ್, ದೈವಾರಾಧನೆಯನ್ನು ಪ್ರತಿಬಿಂಬಿಸಿ ಪರಿ ಪಾಡ್ದನಗಳಿಂದೊಡಗೂಡಿದ ಮ್ಯಾಜಿಕ್ ಗಳನ್ನು ಕುದ್ರೋಳಿಯವರು ತಮ್ಮ ವಾಕ್ಘರಿಗಳ ಮೂಲಕ ಸಮರ್ಥವಾಗಿ ಪ್ರದರ್ಶಿಸಿದರು.
ಪ್ರವೀಣ್ ಬಜಾಲ್(ಧ್ವನಿ ಮತ್ತು ಬೆಳಕು), ವಿಜಯಕುಮಾರ್, ಗುರುಪ್ರಸಾದ್ ಆಚಾರ್ಯ, ಸತೀಶ್ ಸುಳ್ಯ, ವರಪ್ರಸಾದ್, ರೇಖಾ ಸುಳ್ಯ, ಅಮಿತಾ ಸುಳ್ಯ, ನಿಶಾನ್, ವಿನೋದ್ ಅವರುಗಳು ಜಾದೂ ಪ್ರದರ್ಶನಕ್ಕೆ ಸಹಕರಿಸಿದರು.ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳು ಉಪಸ್ಥಿತರಿದ್ದರು. ಚಾತುರ್ಮಾಸ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆಯ್ಯೂರು ನಾರಾಯಣ ಭಟ್ ಸ್ವಾಗತಿಸಿ, ವಂದಿಸಿದರು. ಸಂಜೆ ಶ್ರೀಗಳಿಂದ ದೇವರ ನಾಮಗಳ ಭಜನ್ ನೆರವೇರಿತು.