ಮುಂಬೈ ಕನ್ನಡ ರಂಗಭೂಮಿಯ ಪಿತಾಮಹ ದಿ. ಕೆ ಕೆ ಸುವರ್ಣರ ಪುತ್ರ ಜಯಶೀಲ್ ಸುವರ್ಣರು ಬಾಲ್ಯದಿಂದಲೇ ರಂಗಭೂಮಿಯ ಕಡೆಗೆ ಆಕರ್ಷಿತರಾದವರು. ನಟನೆಯ ಬಗ್ಗೆ ವಿಶೇಷ ಆಸಕ್ತಿ ತೋರಿಸುತ್ತಿದ್ದ ಜಯಶೀಲರಿಗೆ ಪ್ರಥಮ ಗುರು ಕೂಡ ಅವರ ತಂದೆಯವರೇ. ಮೊದಮೊದಲು ಹಿನ್ನೆಲೆಯಲ್ಲೇ ಕೆಲಸ ಮಾಡುತ್ತಿದ್ದ ಜಯಶೀಲರು ತಮ್ಮ ತಂದೆಯವರ 'ಸುವರ್ಣಧ್ವನಿ' ನಾಟಕ ತಂಡದಲ್ಲಿ 'ಮೇಜರ್ ಚಂದ್ರಕಾಂತ್' ನಾಟಕದ ಮೂಲಕ ರಂಗಭೂಮಿಗೆ ಪಾದಾರ್ಪಣೆಗೈದು ಮುಂದೆ ಹಲವಾರು ನಾಟಕಗಳಲ್ಲಿ ಅಭಿನಯಿಸಿದರು.
ಇಂಡಿಯನ್ ಬ್ಯಾಂಕ್ ನಲ್ಲಿ ಉದ್ಯೋಗ ಸಿಕ್ಕ ನಂತರವೂ ರಂಗಭೂಮಿಯ ನಂಟನ್ನು ಬಿಡದ ಜಯಶೀಲರು ಕಂಠದಾನ ಕ್ಷೇತ್ರಕ್ಕೆ ಕಾಲಿಟ್ಟರು. ಇದುವರೆಗೆ ಇವರು ಕನ್ನಡ, ಹಿಂದಿ ಮತ್ತು ಇಂಗ್ಲಿಶ್ ಭಾಷೆಯಲ್ಲಿ ಸಾವಿರಾರು ಜಾಹೀರಾತು, ಸಾಕ್ಷ್ತಚಿತ್ರಗಳು, ಚಲನಚಿತ್ರಗಳು ಮತ್ತು ಟಿವಿ ಸರಣಿಗಳಿಗೆ ಧ್ವನಿ ನೀಡಿದ್ದಾರೆ. ಜಾಹೀರಾತುಗಳು ಮತ್ತು ಚಲನಚಿತ್ರಗಳ ಅನುವಾದದಲ್ಲೂ ಸಿದ್ಧಹಸ್ತರಾಗಿರುವ ಜಯಶೀಲರು ಕರ್ನಾಟಕದಲ್ಲಿ ಡಬ್ಬಿಂಗ್ ವಿರೋಧಿ ಶಕ್ತಿಗಳ ವಿರುದ್ಧ ಶಕ್ತಿಮೀರಿ ಹೋರಾಡುತ್ತಿರುವ ಛಲಗಾರ.
ಇತ್ತೀಚೆಗೆ ಶುಗರ್ ಮೀಡಿಯಾಸ್ ಎಂಬ ಪ್ರತಿಷ್ಠಿತ ಜಾಹೀರಾತು ಸಂಸ್ಥೆಯು ಆಯೋಜಿಸಿದ 'ದ ವಾಯ್ಸ್ ಫೆಸ್ಟ್' ಎಂಬ ರಾಷ್ಟ್ರಮಟ್ಟದ ಕಾರ್ಯಕ್ರಮದಲ್ಲಿ, ಜಾಹೀರಾತು ಕ್ಷೇತ್ರಕ್ಕೆ ಜಯಶೀಲ ಸುವರ್ಣರ ಕೊಡುಗೆಯನ್ನು ಗುರುತಿಸಿ, ಅವರನ್ನು ಸನ್ಮಾನಿಸಲಾಯ್ತು. ಕಂಠದಾನ ಕ್ಷೇತ್ರದ ಭೀಷ್ಮ ಶ್ರೀ ಅಮೀನ್ ಸಯಾನಿಯವರು ಜಯಶೀಲರನ್ನು ಸನ್ಮಾನಿಸಿದರು.