ಅ. ವಂ. ಡಾ. ಪೀಟರ್ ಪಾವ್ಲ್ ಸಲ್ದಾನ್ಹರವರು ‘ಸಂತ ಆಂತೋನಿಯವರ ಪವಾಡಗಳು’ ಟಿ.ವಿ. ಧಾರವಾಹಿಯ ಮುಹೂರ್ತವನ್ನು ಟಿ.ವಿ. ಪರದೆಯ ಮೇಲೆ ಧಾರವಾಹಿಯ ಶೀರ್ಷಿಕೆಯನ್ನು ಮೂಡಿಸುವ ಮೂಲಕ ಉದ್ಗಾಟಿಸಿದರು. ತದನಂತರ ಧಾರವಾಹಿಯ ಸಂಭಾಷಣೆ ಕೃತಿಯನ್ನು ಬಿಡುಗಡೆಗೊಳಿಸಿ ಆಶೀರ್ವಚನ ಮಾಡಿದರು. ಧರ್ಮಾಧ್ಯಕ್ಷರು ತಮ್ಮ ಸಂದೇಶದಲ್ಲಿ ಸಂತ ಆಂತೋನಿಯವರು ಯೇಸು ಸ್ವಾಮಿ ನಿಜ ಹಿಂಬಾಲಕರಾಗಿ ತಮ್ಮ ಜೀವನವನ್ನು ದೇವರ ಸಾಮ್ರಾಜ್ಯವನ್ನು ಸಾರುವುದಕ್ಕಾಗಿ ಮೀಸಲಿಟ್ಟರು. ಅವರು ಮಾಡಿದ ಆ ನಿಸ್ವಾರ್ಥತೆಯ ಸೇವೆಗಾಗಿ ದೇವರು ಅವರ ನಾಲಗೆಯನ್ನು ಕಳೆದ ಎಂಟು ಶತಮಾನಗಳಿಂದ ಕೊಳೆಯದೆ ಕಾಯ್ದು ಕಾಪಾಡಿದ್ದಾರೆ. ಇದು ದೇವರು ಸಂತ ಆಂತೋನಿಯವರಲ್ಲಿ ಮಾಡಿದ ಒಂದು ದೊಡ್ದ ಪವಾಡ. ತಾನು ಇಟೆಲಿಯಲ್ಲಿ ಇರುವಾಗ ಆ ಪವಿತ್ರ ಸ್ಮರಣಿಕೆ ಇಟ್ಟಿರುವಂತಹ ಮಹಾದೇವಲಯಕ್ಕೆ ಭೇಟಿ ನೀಡುವ ಭಾಗ್ಯ ದೊರಕ್ಕಿತು ಎಂದು ಹೇಳಿದರು. ಈಗ ತಯಾರು ಮಾಡುವಂತಹ ಧಾರವಾಹಿ ಸಂತ ಆಂತೋನಿಯವರ ಜೀವನ ಮತ್ತು ಅವರ ಪವಾಡಗಳೊಗೊಂಡಿದ್ದು ಅದನ್ನು ನೋಡಿದ ಭಕ್ತಾಧಿಗಳು ಒಳಿತನ್ನು ಮಾಡಲು ಪ್ರೇರಣೆ ಪಡೆಯಲೆಂದು ಹಾರೈಸುತ್ತೇನೆ ಎಂದರು.
ಮುಖ್ಯ ಅತಿಥಿಯಾಗಿ ಬಂದಿರುವ ಶ್ರೀ ಯು. ಟಿ. ಖಾದರ್ ಕರ್ನಾಟಕ ಸರಕಾರದ ಸಚಿವರು ಸಂತ ಆಂತೋನಿಯವರ ಹೆಸರು ಜಾತಿ-ಮತ ಭೇದವಿಲ್ಲದೆ ಪ್ರಪಂಚದೆಲ್ಲೆಡೆ ಪ್ರಸಿದ್ದೆ ಪಡೆದಿದೆ. ಈ ಧಾರವಾಹಿಯ ಮುಖಾಂತರ ಸಂತ ಆಂತೋನಿಯವರ ಭಕ್ತಾಧಿಗಳಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಆಶೀರ್ವಾದಗಳು ಸಿಗಲಿ ಎಂದು ಹಾರೈಸಿದರು.
ಗೌರವ ಅತಿಥಿಯಾಗಿ ಬಂದಿರುವ ಶ್ರೀ ಐವನ್ ಡಿ’ಸೋಜ ಕರ್ನಾಟಕ ವಿಧಾನ ಪರಿಷತ್ ಸದಸ್ಯರು ಆಶ್ರಮದ ಮುಖ್ಯದ್ವಾರದ ಬದಿಯಲ್ಲಿ ಇರುವ ಸಂತ ಆಂತೋನಿಯವರ ಪ್ರತಿಮೆಯ ಬಳಿ ಎಲ್ಲಾ ಜಾತಿ-ಮತದವರು ಒಂದೊತ್ತು ನಿಂತು ಪ್ರಾರ್ಥನೆ ಮಾಡುತ್ತಾರೆ ಮತ್ತು ಹೀಗೆ ಮಾಡುವುದರ ಮುಖಾಂತರ ತಮ್ಮ ಪೂರ್ತಿ ದಿವಸ ನೆಮ್ಮದಿಯಿಂದ ಸಾಗುತ್ತದೆ ಎಂದು ಹೇಳಿದನ್ನು ತಾನು ಕೇಳಿದ್ದೇನೆ ಎಂದು ಹೇಳಿದರು. ಪ್ರಸ್ತುತ ಧಾರವಾಹಿ ಇನ್ನೂ ಹೆಚ್ಚು ಜನರಿಗೆ ಸಂತ ಆಂತೋನಿಯವರ ಹಿರಿಮೆಯ ಬಗ್ಗೆ ಪರಿಚಯ ಮಾಡಿಕೊಡಲಿ ಎಂದು ಶುಭ ಹಾರೈಸಿದರು.
ಇನ್ನೋರ್ವ ಗೌರವ ಅತಿಥಿಯಾಗಿ ಆಗಮಿಸಿದ ಶ್ರೀ ಆಶ್ವಿನ್ ಪಿರೇರ ‘ಅಸತೋಮ ಸದ್ಗಮಯ’ ಚಲನ ಚಿತ್ರದ ನಿರ್ಮಾಪಕರು ಜೊತೆಗೆ ಸಂತ ಆಂತೋನಿಯವರು ಪವಾಡಗಳನ್ನು ಮಾಡಿದ ಸತ್ಪುರುಷ. ಅವರ ಹೆಸರಲ್ಲಿ ಈ ಆಶ್ರಮದಲ್ಲಿ 400 ಜನ ನಿರ್ಗತಿಕರು ಆಶ್ರಯ ಪಡೆಯುತ್ತಿದ್ದಾರೆ ಮತ್ತು ಅವರ ಆರೈಕೆಯನ್ನು ಉಚಿತವಾಗಿ ಮಾಡಲಾಗುತ್ತಿದೆ. ಇದು ಸಂತ ಆಂತೋನಿಯವರು ನಮ್ಮ ಮಧ್ಯೆ ಇವತ್ತು ಮಾಡುವ ಪವಾಡಕ್ಕೆ ಜ್ವಲಂತ ಉದಾಹರಣೆ ಎಂದರು. ಮುಂದುವರಿಸಿ ಧಾರವಾಹಿಗೆ ಶುಭಕೋರುತ್ತ ಧಾರವಾಹಿಯ ಸಂದೇಶ ಕಾಯ್ದು ಕಾಪಾಡಲು ಕರೆಕೊಟ್ಟರು. ಧಾರವಾಹಿ ವೀಕ್ಷಿಸಿದ ಬಳಿಕ ಜನರಿಗೆ ಸಂದೇಶ ತಲುಪುವ ಕೆಲಸ ಧಾರವಾಹಿಯಿಂದ ಆಗಬೇಕು ವಿನ: ಕೇವಲ ಮನರಂಜನೆಯಿಂದ ಮುಗಿಯಕೂಡದು ಎಂದು ಕಿವಿ ಮಾತು ಹೇಳಿದರು ಹಾಗೂ ಆ ಕೆಲಸ ಈ ಧಾರವಾಹಿಯಲ್ಲಿ ಖಂಡಿತವಗಿಯೂ ಆಗುವುದೆಂದ ತನಗೆ ಭರವಸೆ ಇದೆ ಎಂದರು.
ಚಲನ ಚಿತ್ರದ ಖ್ಯಾತ ನಟ ಮತ್ತು ಈ ಧಾರವಾಹಿಯಲ್ಲಿ ನಟಿಸಲಿರುವ ರಮೇಶ್ ಭಟ್ ಮತ್ತು ಆಶಾ ಲತಾ ಇವರ ಶುಭ ಹಾರೈಕೆಯನ್ನು ಟಿ.ವಿ. ಪರದೆಯಲ್ಲಿ ತೋರಿಸಲಾಯ್ತು.
ಫಾ. ಒನಿಲ್ ಡಿ’ಸೋಜ ಸಂತ ಆಂತೋನಿ ಆಶ್ರಮದ ನಿರ್ದೇಶಕ ಗಣ್ಯರಿಗೆ ಮತು ನೆರೆದಿರುವ ಅತಿಥಿಗಳಿಗೆ ಸ್ವಾಗತ ಕೋರಿ ಧಾರವಾಹಿ ನಿರ್ಮಿಸುವ ಉದ್ದೇಶವನ್ನು ವಿವರಿಸಿದರು.
ಧಾರವಾಹಿಯ ನಿರ್ದೇಶಕರಾದ ಶ್ರೀ ವಿನ್ಸೆಂಟ್ ಫೆರ್ನಾಂಡಿಸ್ ಮತ್ತು ಸಂಭಾಷಣೆ ಕೃತಿ ಬರೆದಿರುವ ಶ್ರೀ ಜೊನ್ ಎಮ್. ಪೆರ್ಮಾನ್ನೂರು ವೇದಿಕೆಯ ಮೇಲಿ ಉಪಸ್ಥಿತರಿದ್ದರು.
ಮೊನ್ಸಿಂಜೊರ್ ಡೆನಿಸ್ ಮೊರಾಸ್ ಪ್ರಭು, ಫಾ, ಫ್ರಾನ್ಸಿಸ್ ಡಿ’ಸೋಜ, ಫಾ. ಹೆರಾಲ್ಡ್ ಮಸ್ಕರೇನ್ಹಸ್, ಫಾ. ಪೀಟರ್ ಡಿ’ಸೋಜ. ಫಾ. ರೊನಾಲ್ಡ್ ಡಿ’ಸೋಜ, ಮಾಜಿ ಮೇಯರ್ ಶ್ರೀಮತಿ ಜೆಸಿಂತ ಆಲ್ಫ್ರೆಡ್, ಕೊರ್ಪರೇಟರ್ ಅಪ್ಪಿ, ಧಾರವಾಹಿಯ ನಟ-ನಟಿಯರು ಹಾಗೂ ನೂರಾರು ಆಹ್ವಾನಿತ ಅತಿಥಿಗಳು ಹಾಜರಿದ್ದರು.
ಶ್ರೀಮತಿ ಲವಿಟಾ ಮಿನೇಜಸ್ ಕಾರ್ಯಕ್ರಮ ನಿರೂಪಿಸಿದರು ಹಾಗೂ ಫಾ. ತ್ರಿಶಾನ್ ಡಿ’ಸೋಜ ವಂದಿಸಿದರು.