ದೇಹವನ್ನು ದೇವರು ಮತ್ತು ದೇಶಕ್ಕಾಗಿ ಮುಡುಪಾಗಿರಿಸಿ: ಅದಮಾರುಶ್ರೀ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಎ.08: ಸಂಸ್ಕಾರ ಮತ್ತು ಸಾಂಸ್ಕೃತಿಕವಾಗಿ ಬದುಕನ್ನು ಬಾಳುತ್ತಾ ಸಂಸಾರವನ್ನು ಚೆನ್ನಾಗಿ ಮತ್ತು ಸಮೃದ್ಧಿಯುತವಾಗಿ ಕಳೆಯಲೆಂದೇ ಇಂತಹ ಪ್ರವಚನ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಇಂತಹ ಪ್ರವಾಚಗಳಿಂದ ಬದುಕಿನ ಅರಿವಿನ ಜ್ಞಾನೋದಯವಾಗುವುದು. ಇದಕ್ಕೆಲ್ಲಾ ಭಗವಂತನ ಕೃಪೆಯೇ ಪ್ರಧಾನವಾದುದು. ಭಾರತೀಯರಾದ ನಾವು ಧರ್ಮಶ್ರದ್ಧೆ ಜೀವನದಲ್ಲಿ ರೂಢಿಸಿ ದೇಹವನ್ನು ದೇವರು ಮತ್ತು ದೇಶಕ್ಕಾಗಿ ಮುಡುಪಾಗಿರಿಸಬೇಕು ಎಂದು ಉಡುಪಿ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮಿಜಿ ನುಡಿದರು.
ಇಂದಿಲ್ಲಿ ಭಾನುವಾರ ಸಂಜೆ ಅಂಧೇರಿ ಪಶ್ಚಿಮದ ಇರ್ಲಾ ಅಲ್ಲಿನ ಶ್ರೀ ಅದಮಾರು ಮಠದ ಮುಂಬಯಿ ಶಾಖೆಯಲ್ಲಿ 2019ನೇ ವಾರ್ಷಿಕ ಶ್ರೀರಾಮನವಮಿ ಉತ್ಸವದ ಪೂರ್ವ ಸಿದ್ಧತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ವಾರ್ಷಿಕ ರಾಮಾಯಣ ಪ್ರವಚನ ನಡೆಸಿ ನೆರೆದ ಸದ್ಭಕ್ತರನ್ನು ಹರಸಿ ವಿಶ್ವಪ್ರಿಯತೀರ್ಥರು ತಿಳಿಸಿದರು.
ಅಪ್ಪಅಮ್ಮನನ್ನು ಹೀಯಾಳಿಸದೆ ಕಡೆಗಣಿಸದಿರಿ ಅವರ ಜೀವನಕ್ಕೆ ತೇಜಸ್ಸು ನೀಡಿ ಬಾಳು ಹಸನಾಗಿಸಿ. ಅದೇ ಸಂತಸ ನಿಮ್ಮ ಮಕ್ಕಳೂ ತಮಗೆ ತೃಪ್ತಿಕರವಾಗಿಸುವರು. ಜೊತೆಗೆ ನಮ್ಮ ದೇಶವನ್ನೇ ದ್ವೇಷಿಸುವವರನ್ನು ಸರಿ ದಾರಿಯತ್ತ ಸೆಳೆದು ಭವ್ಯ ರಾಷ್ಟ್ರದದ ಕನಸು ನನಸಾಗಿಸೋಣ. ಸಮುಪೇಕ್ಷಿತ ಭಾವಜ ಆರಾಧನೆ ಮಾಡುತ್ತಾ ಜೀವನ ಬೆಳಗಿಸೋಣ ಎಂದೂ ಅದಮಾರುಶ್ರೀಗಳು ಹಿತೋಪದೇಶಯಿತ್ತರು.
ಕಾರ್ಯಕ್ರಮದಲ್ಲಿ ಹಿರಿಯ ಧಾರ್ಮಿಕ ಮತ್ತು ಸಾಮಾಜಿಕ ಮುಂದಾಳುಗಳಾದ ಸಾಬಕ್ಕ ಖೇಡ್ಕರ್, ವಾಸುದೇವ ಉಡುಪ, ಸುಧೀರ್ ಎಲ್. ಶೆಟ್ಟಿ, ಲಕ್ಷಿ ್ಮೀಶ್ ಆಚಾರ್ಯ, ಜನಾರ್ದನ ಅಡಿಗ, ಪಿ.ವಿ ಐತಾಳ್, ಜಗನ್ನಾಥ್ ಪುತ್ರನ್, ಶ್ರೀನಿವಾಸ್ ಭಟ್ ಪರೇಲ್, ಡಾ| ಎನ್.ಆರ್ ರಾವ್, ಎನ್.ಹೆಚ್ ಹುನ್ನೂರು, ಓಂ ಶ್ರೀಕೃಷ್ಣಾಚಾರ್ಯ, ಡಾ| ಜಿ.ವಿ ಕುಲ್ಕರ್ಣಿ, ಎ.ಭುಜಂಗ ರಾವ್, ತಾರಾ ರಾವ್ ಕದ್ರಿ (ಖಾರ್), ವಾಣಿ ರಾಜೇಶ್ ಭಟ್ ಸೇರಿದಂತೆ ಪುರೋಹಿತರು, ಗಣ್ಯರನೇಕರು ಉಪಸ್ಥಿತರಿದ್ದರು.
ಪ್ರವಚನ ಕಾರ್ಯಕ್ರಮದ ಆದಿಯಲ್ಲಿ ಗುರು ರೇವತಿ ಶ್ರೀನಿವಾಸನ್ ರಾಘವನ್ ನಿರ್ದೇಶನದಲ್ಲಿ ಕು| ಪ್ರಿಯಾಂಜಲಿ ರಾವ್ ನೇತೃತ್ವದ ಪ್ರತಿಭಾನ್ವಿತ ಕಲಾವಿದರು ನೃತ್ಯಾವಳಿಗಳನ್ನು ಪ್ರಸ್ತುತ ಪಡಿಸಿದರು. ಶ್ರೀಗಳು ಮಠದಲ್ಲಿನ ಶ್ರೀದೇವರಿಗೆ ಪೂಜೆ ನೆರವೇರಿಸಿ ಪ್ರವಚನ ನಡೆಸಿ ವಿಶ್ವಪ್ರಿಯತೀರ್ಥರು ಸೇವಾಥಿರ್üಗಳಾದ ಹೇಮಾ ಅರುಣ್ ಹಳೆಗೇರಿ ದಂಪತಿ ಮತ್ತು ನೃತ್ಯ ತಂಡಕ್ಕೆ ಮಂತ್ರಾಕ್ಷತೆ, ಪ್ರಸಾದವನ್ನಿತ್ತು ವಿಶೇಷವಾಗಿ ಗೌರವಿಸಿದರು ಹಾಗೂ ಉಪಸ್ಥಿತ ಭಕ್ತರಿಗೆ ಅನುಗ್ರಹಿಸಿದರು.
ರಾಮನವಮಿ ಪೂರ್ವ ಸಿದ್ಧತೆಯಾಗಿಸಿ ಎ.13ನೇ ಶನಿವಾರ ರಾಮ ನವಮಿ ದಿನ ತನಕ ಅದಮಾರು ಶ್ರೀಗಳು ಪ್ರವಚನ ನೀಡಲಿದ್ದಾರೆ. ರಾಮನವಮಿ ದಿನ ಬೆಳಿಗ್ಗೆ ಪಂಚಾಮೃತ ಅಭಿಷೇಕ, ಪೂರ್ವಾಹ್ನ ಸಾಂಸ್ಕೃತಿಕ ಕಾರ್ಯಕ್ರಮ. ಮಧ್ಯಾಹ್ನ 11.30 ಗಂಟೆಗೆ ಮಹಾಪೂಜೆ, 12.30 ಗಂಟೆಯಿಂದ ತೀರ್ಥ ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ. ಸಂಜೆ 6.00 ಗಂಟೆಯಿಂದ ಪಲ್ಲಕ್ಕಿ ಉತ್ಸವ, 7.00 ಗಂಟೆಗೆ ವಿಶ್ವಪ್ರಿಯತೀರ್ಥ ಸ್ವಾಮಿಜಿ ಅವರಿಂದ ವಿಶೇಷ ಪ್ರವಚನ, ರಾತ್ರಿ 8.00 ಗಂಟೆಗೆ ಮಹಾಪೂಜೆ. ರಾತ್ರಿ 8.30 ಗಂಟೆ ನಂತರ ಅನ್ನಸಂತರ್ಪಣೆ ಕಾರ್ಯಕ್ರಮಗಳು ನಡೆಯಲಿದೆ.
ಆ ಪ್ರಯುಕ್ತ ಮಹಾನಗರದಲ್ಲಿನ ಭಕ್ತರೆಲ್ಲರೂ ಎಲ್ಲಾ ಕಾರ್ಯಕ್ರಮಗಳಲ್ಲಿ ಸಹಭಾಗಿಗಳಾಗಿ ಸಹಕರಿಸುವಂತೆ ಶ್ರೀ ಅದಮಾರು ಮಠ ಮುಂಬಯಿ ಶಾಖೆಯ ದಿವಾಣ ಲಕ್ಷಿ ್ಮೀನಾರಾಯಣ ಮುಚ್ಚಿಂತ್ತಾಯ ಮತ್ತು ವ್ಯವಸ್ಥಾಪಕ ಪಡುಬಿದ್ರಿ ವಿ.ರಾಜೇಶ್ ರಾವ್ ತಿಳಿಸಿದ್ದಾರೆ.