ಭಾರತೀಯರು ಸ್ವಸಂಸ್ಕೃತಿ ಮರೆಯಬಾರದು : ತೋನ್ಸೆ ಆನಂದ ಶೆಟ್ಟಿ
(ಚಿತ್ರ / ವರದಿ: ರೊನಿಡಾ ಮುಂಬಯಿ)
ಮುಂಬಯಿ, ಎ.14: ಎಲ್ಲಾ ಬಂಟ ಬಂಧುಗಳಿಗೆ ಯುಗಾದಿ ಹಬ್ಬದ ಶುಭಾಶಯಗಳು. ಯುವ ಪೀಳಿಗೆಗೆ ನಾವು ಮನವರಿಕೆಯಾಗುವಂತೆ ಯುಗಾದಿ ಹಬ್ಬವನ್ನು ಆಚರಿಸುತ್ತಿದ್ದೇವೆ. ಭಾರತೀಯರಾದ ನಾವು ನಮ್ಮ ಸ್ವಸಂಸ್ಕೃತಿಯನ್ನು ಮರೆಯಬಾರದು. ಸಂಸ್ಕೃತಿಯನ್ನು ಉಳಿಸಿ ಯುವ ಜನತೆಗೆ ಪ್ರೇರಪಣೆ ನೀಡಿ ಸಂಸ್ಕೃತಿ ಬೆಳೆಸಬೇಕು. ಅದೇ ರೀತಿ ನಮ್ಮ ದೇಶಕ್ಕೆ ಸಮರ್ಥ ನಾಯಕನನ್ನು ಅರಿಸಿ ಈ ದೇಶವನ್ನು ಕಾಪಾಡಬೇಕು ಎಂದು ಫೆಡರೇಶನ್ ಆಫ್ ವರ್ಲ್ಡ್ ಬಂಟ್'ಸ್ ಅಸೋಸಿಯೇಶನ್ಸ್ನ ನಿರ್ದೇಶಕ, ಆರ್ಗ್ಯಾನಿಕ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ನ ಆಡಳಿತ ನಿರ್ದೇಶಕ ತೋನ್ಸೆ ಆನಂದ ಎಂ.ಶೆಟ್ಟಿ ತಿಳಿಸಿದರು.
ಬಂಟರ ಸಂಘ ಬೆಂಗಳೂರು ಇಂದಿಲ್ಲಿ ಭಾನುವಾರ ದಿನಪೂರ್ತಿಯಾಗಿಸಿ ಬೆಂಗಳೂರು ವಿಜಯನಗರದಲ್ಲಿನ ಬಂಟರ ಭವನದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹದ ದಿ| ಅತ್ತಾವರ ಬಾಲಕೃಷ್ಣ ಶೆಟ್ಟಿ (ಎ.ಬಿ ಶೆಟ್ಟಿ) ವೇದಿಕೆಯಲ್ಲಿ ಬಿಸು ಸಡಗರದ ಬಿಸು ಪರ್ಬ-2019 ಸಂಭ್ರಮ ಉದ್ಘಾಟಿಸಿ ಆನಂದ ಶೆಟ್ಟಿ ಮಾತನಾಡಿದರು.
ಬಂಟರ ಸಂಘ ಬೆಂಗಳೂರು ಅಧ್ಯಕ್ಷ ಆರ್.ಉಪೇಂದ್ರ ಶೆಟ್ಟಿ ಅಧ್ಯಕ್ಷತೆಯಲ್ಲಿ ನೇರವೇರಿದ ಸಮಾರಂಭದಲ್ಲಿ ಪ್ರಧಾನ ಅಭ್ಯಾಗತರಾಗಿ ಶಶಿರೇಖಾ ಆನಂದ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಅಧ್ಯಕ್ಷರು ಅಜಿತ್ ಕುಮಾರ್ ರೈ ಮಾಲಾಡಿ ಮತ್ತಿತರರು ವೇದಿಕೆಯಲ್ಲಿದ್ದರು.
ಬಂಟರ ಸಂಘ ಬೆಂಗಳೂರು ಗೌ| ಕಾರ್ಯದರ್ಶಿ ಮಧುಕರ ಎಂ.ಶೆಟ್ಟಿ, ಬಂಟರ ಸಂಘದ ಮಹಿಳಾ ಉಪ ಕಾರ್ಯಧ್ಯಕ್ಷೆ ಅಮೃತಾ ಶೆಟ್ಟಿ, ಜತೆ ಕಾರ್ಯದರ್ಶಿ ಸೌಮ್ಯ ಪ್ರಿಯ ಹೆಗ್ಡೆ, ಭೋಜರಾಜ್ ಶೆಟ್ಟಿ ಮತ್ತಿತರ ಪದಾಧಿಕಾರಿಗಳು ಸದಸ್ಯರನೇಕರು ಉಪಸ್ಥಿತರಿದ್ದು. ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ವಿಜಯ್ ಜೆ.ಶೆಟ್ಟಿ ಹಾಲಾಡಿ ಸ್ವಾಗತಿಸಿದರು. ದೀಪಕ್ ಶೆಟ್ಟಿ ಮತ್ತಿ ರಶ್ಮಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಸಮಿತಿ ಸಂಚಾಲಕ ಪಿ. ಪ್ರಸಾದ್ ಶೆಟ್ಟಿ ಧನ್ಯವಾದಗೈದರು.