ಶಾರದಾ ಅಂಬೇಸಂಗೇ ಅವರಿಗೆ `ಜೀವನಾಡಿ ಕರ್ನಾಟಕ ಸಾಹಿತ್ಯ ರತ್ನ' ಪ್ರಶಸ್ತಿ ಪ್ರದಾನ
ಮುಂಬಯಿ, ಆ.24: ಮುಂಬಯಿ ಇಲ್ಲಿನ ಮುಂಬಯಿ ಕವಿ, ಲೇಖಕಿ, ಸೃಜನಾ ಬಳಗದ ಸಂಚಾಲಕಿ ಶಾರದಾ ಅಂಬೇಸಂಗೇ ಅವರಿಗೆ ವಿಜಾಪುರದ ಜೀವನಾಡಿ ಕರ್ನಾಟಕ ಸಾಹಿತ್ಯ ವೇದಿಕೆಯ 9ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಮತ್ತು ಕವಿ ಮಧುರ ಚೆನ್ನರ 117 ನೇ ಜನ್ಮದಿನದ ಪ್ರಯುಕ್ತ `ಜೀವನಾಡಿ ಕರ್ನಾಟಕ ಸಾಹಿತ್ಯ ರತ್ನ' ರಾಜ್ಯ ಪ್ರಶಸ್ತಿ ಪ್ರದಾನಿಸಲಾಯಿತು .
ವಿಜಾಪುರದ ಪ್ರೆಸಡೆನ್ಸಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನಿಸಲಾಗಿದ್ದು, ಹಲವಾರು ಕನ್ನಡ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಾಹಿಸುತ್ತಿರುವ ಇವರು ಅನೇಕ ಕನ್ನಡಪರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಿದ್ದು ಕನ್ನಡಾಂಬೆಯ ಸೇವೆ ಗೈಯುತ್ತಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಹೊರನಾಡ ಕನ್ನಡಿಗರ ದ್ವಿತೀಯ ರಾಷ್ಟ್ರೀಯ ಸಮಾವೇಶದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. `ಕಾಡಿ ಬೆಡಲಿಲ್ಲ' ಎಂಬ ಕವನ ಸಂಕಲನ (ಅಭಿಜಿತ್ ಪ್ರಕಾಶನದಿಂದ) ಮತ್ತು `ಮಹಿಳಾ ಜಾನಪದ' ಸಂಪಾದಕೀಯ (ಸೃಜನಾ ಬಳಗದ ಪ್ರಕಾಶನ) ಪ್ರಕಟಣೆಯಾಗಿವೆ ಮತ್ತು ಸದ್ಯದ `ಸಂಗಮ' ಪತ್ರಿಕೆಯ ಸಂಪಾದಕ ಮಂಡಳಿಯಲ್ಲಿ (ಬಸವೇಶ್ವರ ಫೀಲಾಸಿಫಕಲ್ ಸೊಸೈಟಿ ಚೆಂಬೂರು) ಇದ್ದಾರೆ. ಸೃಜನಾ ಬಳಗದ ಕಾರ್ಯದರ್ಶಿಯಾಗಿ, ಸಹಸಂಚಾಲಕಿಯಾಗಿ ಕಾರ್ಯನಿರ್ವಹಿಸಿದ್ದು ಸದ್ಯದ ಕಾರ್ಯಕಾರಿ ಸಮಿತಿಯ ಸಂಚಾಲಕಿ ಆಗಿದ್ದಾರೆ. ಇವರ ಕವನಗಳು ಲೇಖನಗಳು ಕರ್ನಾಟಕದ ಮತ್ತು ಮುಂಬಯಿ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಹಲವಾರು ಕವಿ ಗೋಷ್ಠಿಯಲ್ಲಿ, ಕಾರ್ಯಕ್ರಮಗಳಲ್ಲಿ ಅತಿಥಿಯಾಗಿ ಭಾಗವಹಿಸಿದ್ದಾರೆ.