ಯೋಜನೆಗಳು ಪ್ರಯೋಜನಕಾರಿಯಾಗಿ ಉತ್ಸಾದನಾ ಮಟ್ಟಕ್ಕೆ ತಲುಪಬೇಕು.
ಉಜಿರೆ: ನಮ್ಮ ಯೋಚನೆಗಳು ಮತ್ತು ಯೋಜನೆಗಳು ಸಮಾಜಕ್ಕೆ ಉಪಯುಕ್ತವಾಗುವಂತೆ ಉತ್ಪಾದನಾ ಮಟ್ಟಕ್ಕೆ ತಲುಪಿದಾಗ ಉನ್ನತ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಹೇಳಿದರು.
ಅವರು ಶನಿವಾರ ಉಜಿರೆಯಲ್ಲಿ ಎಸ್.ಡಿ.ಎಂ. ಎಂಜಿನಿಯರಿಂಗ್ ಕಾಲೇಜಿನಲ್ಲಿ ಬೆಂಗಳೂರಿನ ಡಿಲೈಟ್ ಸಂಸ್ಥೆಯ ಸಂಶೋಧನೆ ಮತ್ತು ಅಭಿವೃದ್ಧಿ ಘಟಕದ ನೇತೃತ್ವದಲ್ಲಿ ಆಯೋಜಿಸಿದ ಸ್ವಚ್ಛಭಾರತ ಅಭಿಯಾನದಡಿ ತ್ಯಾಜ್ಯ ವಿಭಜನೆ ಬಗ್ಯೆ ಯೋಜನೆಗಳನ್ನು ರೂಪಿಸುವ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮ ಜ್ಞಾನವು ಕೇವಲ ಮಾಹಿತಿ ಸಂಗ್ರಹಕ್ಕೆ ಸೀಮಿತವಾಗಬಾರದು. ಮನದಲ್ಲಿ ಮತ್ತು ಮನೆಯಲ್ಲಿ ಒಳ್ಳೆದು ಮತ್ತು ಕೆಟ್ಟದ್ದನ್ನು ವಿಭಜಿಸುವಂತೆ ಅಂತರಂಗ ಮತ್ತು ಬಹಿರಂಗದಲ್ಲಿ ತ್ಯಾಜ್ಯ ವಿಭಜನೆ ಮಾಡಬೇಕು. ನಾವು ರೂಪಿಸುವ ಯೋಜನೆಗಳು ಸಾರ್ವಜನಿಕ ಸ್ಥಳಗಳಲ್ಲಿಯೂ ಸಮಾಜಕ್ಕೆ ಉಪಯುಕ್ತವಾಗುವಂತೆ ಮೂಡಿ ಬಂದು ಉತ್ಪಾದನಾ ಹಂತಕ್ಕೆ ತಲುಪಬೇಕು. ತ್ಯಾಜ್ಯ ವಿಭಜನೆ ಎಲ್ಲರ ಸಾಮಾಜಿಕ ಬದ್ಧತೆ ಮತ್ತು ಹೊಣೆಗಾರಿಕೆಯಾಗಿದೆ. ಯುವಜನತೆ, ವಿಶೆಷವಾಗಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಈ ಬಗ್ಯೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಅವರು ಸಲಹೆ ನೀಡಿದರು. ಯೋಜನೆಗು ಕಾಲಮಿತಿಗೆ ಸೀಮಿತವಾಗದೆ ನಿರಂತರವಾಗಿರಬೇಕು. ಸ್ವಚ್ಛತಾ ಅಭಿಯಾನದಲ್ಲಿ ಮಾಧ್ಯಮದವರ ಪಾತ್ರವೂ ಮುಖ್ಯವಾಗಿದ್ದು ಅವರು ಸಾಮಾಜಿಕ ಅರಿವು ಜಾಗೃತಿ ಮೂಡಿಸಬೇಕು ಎಂದು ಅವರು ಹೇಳಿದರು.
ಬೆಂಗಳೂರಿನ ಡಿಲೈಟ್ ಸಂಸ್ಥೆಯ ನಿರ್ದೇಶಕ ಅರುಣ್ ರಾಜ್ ಪುರೋಹಿತ್ ಪ್ರಾಸ್ತಾವಿಕವಾಗಿ ಮಾತನಾಡಿ, ತ್ಯಾಜ್ಯ ನಿರ್ವಹಣೆಗೆ ತಮ್ಮ ಸಂಸ್ಥೆ ಉತ್ತಮ ಪ್ರಯತ್ನ ಮಾಡುತ್ತಿದ್ದು ತಾಂತ್ರಿಕ ಜ್ಞಾನದ ಬಳಕೆಯಿಂದ ಈ ಸಮಸ್ಯೆ ಪರಿಹಾರವಾಗಬಹುದು ಎಂಬ ಆಶಾಭಾವನೆ ವ್ಯಕ್ತಪಡಿಸಿದರು.
ಸ್ವಚ್ಛ ಮನಸ್ಸು ಮತ್ತು ಸ್ವಚ್ಛ ಪರಿಸರ ಕಾಪಾಡುವ ಉದ್ದೇಶದಿಂದ ಶೂನ್ಯ ತ್ಯಾಜ್ಯ ನಿರ್ವಹಣೆಗೆ ಪ್ರಯತ್ನಿಸಲಾಗುವುದು ಎಂದು ಅವರು ಭರವಸೆ ನೀಡಿದರು. ತ್ಯಾಜ್ಯ ವಿಭಜನೆಗೆ ಹೊಸ ಚಿಂತನೆಯೊಂದಿಗೆ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಪ್ರಯತ್ನಿಸಬೇಕು ಎಂದು ಅವರು ಸಲಹೆ ನೀಡಿದರು.
ಬೆಂಗಳೂರಿನ ಸಂತೋಷ್ ಭೂಷಣ್ ಮತ್ತು ರಾಘವೇಂದ್ರ ಗಾಣಿಗ ಉಪಸ್ಥಿತರಿದ್ದರು.
ಎಸ್.ಡಿ.ಎಂ. ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಟಿ. ಅಶೋಕ ಕುಮಾರ್ ಸ್ವಾಗತಿಸಿದರು. ಪ್ರೊ. ರಾಮಕೃಷ್ಣ ಹೆಗ್ಡೆ ಧನ್ಯವಾದವಿತ್ತರು. ಕುಮಾರಿ ಯಸ್ತಿಕಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಮಂಗಳೂರು ವಲಯದ ಎಂಜಿನಿಯರಿಂಗ್ ಕಾಲೇಜುಗಳಿಂದ 25 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸುತ್ತಿವೆ.
ಕ್ರೀಡಾಕೂಟ ಮುಂದೂಡಿಕೆ
ಉಜಿರೆ: ಜಡಿಮಳೆ ಹಾಗೂ ಪ್ರತಿಕೂಲ ಹವಾಮಾನದಿಂದಾಗಿ ಕೊಯ್ಯೂರು ಗ್ರಾಮದ ಸರ್ಕಾರಿ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಮತ್ತು ಶನಿವಾರ (ಇದೇ 18 ಮತ್ತು 19) ನಡೆಸಲು ಯೋಜಿಸಿದ್ದ ಬೆಳ್ತಂಗಡಿ ತಾಲ್ಲೂಕು ಮಟ್ಟದ ಕ್ರೀಡಾಕೂಟವನ್ನು ಮುಂದೂಡಲಾಗಿದೆ.
ಇದೇ 23 ಮತ್ತು 24 ರಂದು ಕ್ರೀಡಾಕೂಟ ಅದೇ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸತೀಶ್, ಪಿ. ತಿಳಿಸಿದ್ದಾರೆ.