ಮುಂಬಯಿ, ಅ.20: ಕೂಟ ಮಹಾಜಗತ್ತು ಸಾಲಿಗ್ರಾಮ (ರಿ.) ಮುಂಬಯಿ ಅಂಗ ಸಂಸ್ಥೆಯು ವಾರ್ಷಿಕ ಶ್ರೀ ಸತ್ಯನಾರಾಯಣ ಪೂಜೆಯನ್ನು ಇಂದಿಲ್ಲಿ ಭಾನುವಾರ ಪೂರ್ವಾಹ್ನ ಸಾಂತಾಕ್ರೂಜ್ ಪೂರ್ವದಲ್ಲಿನ ಶ್ರೀ ಪೇಜಾವರ ಮಠ ಮುಂಬಯಿ ಶಾಖೆಯ ಶ್ರೀ ವಿಶ್ವೇಶತೀರ್ಥ ಸಭಾಗೃಹದಲ್ಲಿ ಧಾರ್ಮಿಕ ಮತ್ತು ಸಂಪ್ರದಾಯಿಕ ಪೂಜಾಧಿಗಳೊಂದಿಗೆ ನೆರವೇರಿಸಿತು.
ಶ್ರೀ ಪೇಜಾವರ ಮಠದ ಶ್ರೀಕೃಷ್ಣ ದೇವರ ಸನ್ನಿಧಿಯಲ್ಲಿ ಬೆಳಿಗ್ಗೆ ಪೂಜೆ ನೆರವೇರಿಸಿದ ಬಳಿಕ ಪುರೋಹಿತ ವಿದ್ವಾನ್ ಸುಬ್ರಹ್ಮಣ್ಯ ಐತಾಳ್ ತನ್ನ ಪೌರೋಹಿತ್ಯದಲ್ಲಿ ಸತ್ಯನಾರಾಯಣ ಪೂಜೆ ನೆರವೇರಿಸಿ ನೆರೆದ ಸದ್ಭಕ್ತರಿಗೆ ಪ್ರಸಾದವನ್ನಿತ್ತು ಹರಸಿದರು. ಎ.ಸೂರ್ಯನಾರಾಯಣ ಐತಾಳ್ ಮತ್ತು ಪದ್ಮಾವತಿ ಎಸ್.ರಾವ್ ದಂಪತಿ ಪೂಜಾಧಿಗಳ ಯಜಮಾನತ್ವ ವಹಿಸಿದ್ದರು.
ನಾವು ಬರೇ ಪೂಜಾಧಿಗಳಲ್ಲಿ ಪಾಲ್ಗೊಂಡರೆ ಗುರುಭಕ್ತರೆನಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮಲ್ಲಿನ ಸ್ವಾರ್ಥ ತೊರೆದು ಸಜ್ಜನರೆನಿಸಿ ಪೂಜಾಕೈಂಕರ್ಯಗಳನ್ನು ಕೈಗೊಂಡಾಗ ಪುಣ್ಯಕ್ಕೆ ಭಾಜನರಾಗ ಬಹುದು. ಆಧ್ಯಾತ್ಮಿಕವಾಗಿ ನಾವು ಬಲಯುತರಾದಾಗ ಶ್ರದ್ಧಾಭಕ್ತಿಯು ತನ್ನೀಂತಾನೇ ಮೈಗೂಡುವುದು. ಆ ಮೂಲಕ ಸಧ್ಬಕ್ತರೆಣಿಸಲು ಅರ್ಹರಾಗಬಲ್ಲೆವು ಎಂದು ಕೂಟದ ಮುಂಬಯಿ ಅಂಗ ಸಂಸ್ಥೆಯ ಅಧ್ಯಕ್ಷ ಯು.ಎನ್ ಐತಾಳ್ ತಿಳಿಸಿದರು.
ಧಾರ್ಮಿಕ ಸೇವೆಗಳು ಪರಿಶುದ್ಧ ಹೃನ್ಮನಗಳಿಂದ ಸಲ್ಲಿಸಿದಾಗಲೇ ಮನುಕುಲದ ಮತ್ತು ಸಮಾಜದ ಪರಿಶುದ್ಧತಾ ಉದ್ಧಾರ ಸಾಧ್ಯವಾಗುವುದು. ಎಲ್ಲಿ ಪಾವಿತ್ರ್ಯತೆ ಇರುವುದೋ ಅಲ್ಲೇ ಪರಿಶುದ್ಧತೆ ಒಳ್ಳೆಯ ಮನೋಭಾವ ಬೆಳಗುವುದು. ನಿಷ್ಕಲಂಕ ಸೇವೆಯಿಂದ ಮಾತ್ರ ಮನಶುದ್ಧಿ, ಆತ್ಮಶುದ್ಧಿ ಸಾಧ್ಯವಾಗಿದ್ದು ನಮ್ಮ ಯಾವುದೇ ಪೂಜೆಗಳು ನಿರ್ಮಲತ್ವವಾಗಿ ಈಡೇರಿಸಿ ಸಮೃದ್ಧಿಯ ಬಾಳಿಗೆ ಕಾರಣಕರ್ತರಾಗೋಣ ಎಂದು ಸುಬ್ರಹ್ಮಣ್ಯ ಐತಾಳ್ ತಿಳಿಸಿ ಅನುಗ್ರಹಿಸಿದರು.
ಕಾರ್ಯಕ್ರಮದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಕೆ.ನಾರಾಯಣ ರಾವ್, ಪಿ.ನಾಗೇಶ್ ರಾವ್ ಸೇರಿದಂತೆ ಹಲವು ಗಣ್ಯರು, ಕೂಟದ ಸದಸ್ಯರನೇಕರು ಉಪಸ್ಥಿತರಿದ್ದರು. ಕೂಟದ ಕಾರ್ಯದರ್ಶಿ ಹಾಗೂ ಕೂಟ ಬ್ರಾಹ್ಮಣರ ತ್ರೈಮಾಸಿಕದ ಮುಖವಾಣಿ ಗುರು ನರಸಿಂಹವಾಣಿ ಸಂಪಾದಕ ರಮೇಶ್ ಎಂ.ರಾವ್ ಸ್ವಾಗತಿಸಿ ವಂದಿಸಿದರು.