ಮುಂಬಯಿ, ಜ.25: ಬಡಮಕ್ಕಳಿಗಾಗಿ ಸ್ವಂತ ದುಡಿಮೆಯಲ್ಲಿ ಶಾಲೆ ನಿರ್ಮಿಸಿದ, ನೂರಾರು ಮಕ್ಕಳ ವಿದ್ಯಾರ್ಜನೆಗೆ ನೆರವಾದ ದಕ್ಷಿಣ ಕನ್ನಡದ ಕಿತ್ತಳೆ ವ್ಯಾಪಾರಿ, ಮಂಗಳೂರು ಹರೇಕಳ ಇಲ್ಲಿನ ಸಮಾಜ ಸೇವಕ, ಶಿಕ್ಷಣಪ್ರೇಮಿ ಅಕ್ಷರ ಸಂತ ಪ್ರಸಿದ್ಧಿಯ ಹರೇಕಳ ಹಾಜಬ್ಬ ಇವರಿಗೆ ಕೇಂದ್ರ ಸರಕಾರ ಇಂದು ರಾಷ್ಟ್ರದ ಪ್ರತಿಷ್ಠ ಗೌರವದಲೊಂದಾದ ದೇಶದ ನಾಲ್ಕನೆ ಅತ್ಯುನ್ನತ ಪುರಸ್ಕಾರ ಪದ್ಮಶ್ರೀ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
1999ರಲ್ಲಿ ಹರೇಕಳದಲ್ಲಿ ದಕ್ಷಿಣ ಕನ್ನಡ ಕಿರಿಯ ಪ್ರಾಥಮಿಕ ಪಾಠ ಶಾಲೆ ಶುರುವಾಗುತ್ತೆ. ಶಾಲೆ ಕಟ್ಟಿ ಸುಮ್ಮನಾಗದ ಹಾಜಬ್ಬ ಶಾಲೆಯ ಕಸ ಗುಡಿಸೋದು, ತೊಳೆಯೋ ಕೆಲಸವನ್ನ ತಾವೇ ಮಾಡುತ್ತಾರೆ. ಈ ನಡುವೆ ಹಾಜಬ್ಬರಿಗೆ ಮತ್ತೊಂದು ಆಸೆ ಹುಟ್ಟಿಕೊಳ್ಳುತ್ತೆ. ಐದನೆ ತರಗತಿಯವರೆಗೂ ಇರೋ ಶಾಲೆಯನ್ನ ಏಳನೇ ತರಗತಿಯವರೆಗೂ ವಿಸ್ತರಿಸೋದು. ಹಿಂದಿನಂತೆಯೇ ಮತ್ತೇ ಹಾಜಬ್ಬ ಮತ್ತೆ ಕಿತ್ತಳೆ ಹಣ್ಣನ್ನ ಮಾರೋದಕ್ಕೇ ಶುರು ಮಾಡಿ 7ನೇ ತರಗತಿ ವರೆಗೂ ಶಾಲೆಯನ್ನ ವಿಸ್ತರಣೆ ಮಾಡುತ್ತಾರೆ. ಹೀಗೆ ದಿನ ಕಳೆದಂತೆ ಮತ್ತೆ ಹಾಜಬ್ಬಣ್ಣ ಅವ್ರಿಗೆ ಅರಿವಾಗೋದು ಮಕ್ಕಳಿಗೆ 7ನೇ ತರಗತಿ ವರೆಗೂ ಶಿಕ್ಷಣ ಸಾಲದು ಕನಿಷ್ಟ 10ನೇ ತರಗತಿ ವರೆಗಾದ್ರೂ ಶಿಕ್ಷಣ ಬೇಕೆ ಬೇಕು ಅಂತ ನಿರ್ಧಾರ ಮಾಡಿದ್ರು. ಅಷ್ಟರಲ್ಲೇ ಆಗಲೇ ಹಾಜಬ್ಬ ಸಾಧನೆಯನ್ನ ಗುರುತಿಸಿದ ಹಲವಾರು ಸಂಘ ಸಂಸ್ತೆಗಳು ಹಾಜಬ್ಬ ಅವ್ರನ್ನ ಕರೆದು ಸನ್ಮಾನ ಮಾಡಲು ಶುರು ಮಾಡಿರುತ್ತೆ. ಸನ್ಮಾನದ ಜೊತೆಯಲ್ಲಿ ಸಂಘ ಸಂಸ್ಥೆಗಳು ಒಂದಿಷ್ಟು ಹಣವನ್ನು ನೀಡಿದ್ದರು. ಆ ಹಣವನ್ನ ಉಪಯೋಗಿಸಿಕೊಂಡು ಹಾಜಬ್ಬ ಅವರು 10ನೇ ತರಗತಿಯವರೆಗೂ ಶಾಲೆಯನ್ನ ವಿಸ್ತರಿಸಿದ್ದರು.
ಒಂದು ಸರ್ಕಾರ ಮಾಡದ ಕೆಲಸವನ್ನ ಹಾಜಬ್ಬ ಕಿತ್ತಳೆ ಹಣ್ಣು ಮಾರಿ ಸಾಧಿಸಿ ತೋರಿಸಿದ್ದಾರೆ. ಮಕ್ಕಳ ಶಿಕ್ಷಣಕ್ಕಾಗಿ ಮಾಡಿದ ಶ್ರಮವನ್ನ ಖಾಸಗಿ ಶಾಲೆ ಮಾಡಿದ್ರೆ ಹಾಜಬ್ಬ ಅವರು ಇವತ್ತು ಕೋಟಿ ಕೋಟಿ ಸಂಪಾದನೆ ಮಾಡಿಕೊಳ್ಳಬಹುದಿತ್ತು. ಆದ್ರೆ ಹಾಜಬ್ಬ ಅವ್ರು ಯಾವತ್ತೂ ಈ ರೀತಿ ಯೋಚನೆಯನ್ನೂ ಮಾಡಲಿಲ್ಲ. ಮಕ್ಕಳ ಶಿಕ್ಷಣಕ್ಕಾಗಿ ತಮ್ಮ ಕುಟುಂಬವನ್ನು ಲೆಕ್ಕಿಸದೆ ಕೆಲಸ ಮಾಡಿದ ಹಾಜಬ್ಬರ ಶ್ರಮ ಇಂದು ಅದೆಷ್ಟೋ ಮಕ್ಕಳ ಜೀವನಕ್ಕೇ ಆಶಾ ಕಿರಣವಾಗಿದೆ. ಮುಂಬಯಿ ಇಲ್ಲಿನ ಚೆಂಬೂರು ಕರ್ನಾಟಕ ಸಂಘ ಇದರ ಪ್ರತಿಷ್ಠಿತ `ರಾಷ್ಟ್ರೀಯ ಕನ್ನಡರತ್ನ ಪ್ರಶಸ್ತಿ-2017' ವಾರ್ಷಿಕ ಪುರಸ್ಕಾರಕ್ಕೆ ಭಾಜನರಾಗಿದ್ದರು.