ಕೆ.ಆರ್.ಪೇಟೆ,ಮಾ.28: ಕೊರೋನಾ ಸೋಂಕು ನಿಯಂತ್ರಣಕ್ಕೆ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕು. ಇಂತಹ ಸಂಕಷ್ಟದ ಸಮಯದಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡುವ ಮೂಲಕ ಕೊರೋನಾ ಸೋಂಕು ತಡೆಗೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಪೌರಾಡಳಿತ ಹಾಗೂ ತೋಟಗಾರಿಕಾರ ಸಚಿವ ಕೆ.ಸಿ.ನಾರಾಯಣಗೌಡ ಅಧಿಕಾರಿಗಳಿಗೆ ಆದೇಶ ನೀಡಿದರು.
ಪಟ್ಟಣದ ದುಂಡಶೆಟ್ಟಿ-ಲಕ್ಷ್ಮಮ್ಮ ಸ್ಮಾರಕ ಸರ್ಕಾರಿನ ಆಸ್ಪತ್ರೆಯಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ವಿದೇಶಗಳಿಂದ ಬಂದಿರುವ ವ್ಯಕ್ತಿಗಳ ಬಗ್ಗೆ ಮಾಹಿತಿ ಪಡೆದು ಕೊಂಡರು. ಕಡ್ಡಾಯವಾಗಿ 15ದಿನಗಳ ಹೋಂ ಕ್ವಾರಂಟೈನ್ ನಲ್ಲಿರುವಂತೆ ನಿಗಾ ವಹಿಸಬೇಕು. ಮನೆಯಿಂದ ಹೊರಗೆ ಓಡಾಡಲು ಬಿಡಬಾರದು ಎಂದು ತಾಲೂಕು ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು. ಮೋಟಾರ್ ಬೈಕುಗಳಲ್ಲಿ ಅನಗತ್ಯವಾಗಿ ಪಟ್ಟಣ ಹಾಗೂ ಹೊರಗಡೆ ಸುತ್ತುವ ಯುವಕರನ್ನು ನಿಯಂತ್ರಿಸಬೇಕು. ಅಗತ್ಯಬಿದ್ದರೆ ಮೋಟಾರ್ ಬೈಕುಗಳನ್ನು ಸೀಜ್ ಮಾಡುವ ಮೂಲಕ ಕೊರೋನಾ ತಡೆಗೆ ಕಾರ್ಯಕ್ರಮ ರೂಪಿಸಬೇಕು ಎಂದು ಸರ್ಕಲ್ ಇನ್ಸ್ಪೆಕ್ಟರ್ ಕೆ.ಎನ್.ಸುಧಾಕರ್ ಅವರಿಗೆ ಆದೇಶ ನೀಡಿದರು.
ಕೊರೋನಾ ತುರ್ತು ಸಂದರ್ಭದಲ್ಲಿಯೂ ಕೇಂದ್ರ ಸ್ಥಾನದಲ್ಲಿ ವಾಸವಿದ್ದು ಅಗತ್ಯ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಬೇಕು. ಗ್ರಾಮ ಪಂಚಾಯಿತಿಗಳಿಗೆ ಬೇಟಿ ನೀಡಿ ನಿತ್ಯ ಮಾಹಿತಿ ಸಂಗ್ರಹಿಸಬೇಕು. ಪಿಡಿಓಗಳು ಕೊರೋನಾ ನಿಯಂತ್ರಣವಾಗುವವರೆವಿಗೂ ಗ್ರಾಮ ಪಂಚಾಯಿತಿ ಕಚೇರಿಯಲ್ಲಿದ್ದು ಜನರ ಕೆಲಸ ಮಾಡಿಕೊಡಬೇಕು. ಗ್ರಾಮಗಳ ಸ್ವಚ್ಚತೆಗೆ ಆಧ್ಯತೆ ನೀಡಬೇಕು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕಾರ್ಯವೈಖರಿಯ ನಿತ್ಯ ಪರಿಶೀಲನೆ ನಡೆಸಬೇಕು ಎಂದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ವೈ.ಎನ್.ಚಂದ್ರಮೌಳಿ ಅವರಿಗೆ ಸೂಚನೆ ನೀಡಿದರು.
ಇದೇ ವೇಳೆ ಮನೆ ಮನೆ ಬಳಿ ಹೋಗಿ ಗ್ರಾಹಕರಿಗೆ ತರಕಾರಿ ಮಾರುವ ಮೊಬೈಲ್ ಮಾರಾಟದ ವ್ಯವಸ್ಥೆಯ ವಾಹನಕ್ಕೆ ತೋಟಗಾರಿಕಾ ಸಚಿವ ನಾರಾಯಣಗೌಡ ಅವರು ಚಾಲನೆ ನೀಡಿದರು. ಬಳಿಕ ಮಾತನಾಡಿ ತಳ್ಳುವ ಗಾಡಿಯಲ್ಲಿ ಮನೆ ಮನೆ ಬಳಿಗೆ ಹೋಗಿ ತರಕಾರಿ ಮಾರಾಟ ಮಾಡಲು ಸಣ್ಣ ವ್ಯಾಪಾರಿಗಳಿಗೆ ಅವಕಾಶ ಮಾಡಿಕೊಡಬೇಕು. ತರಕಾರಿ ಬೆಲೆಗಳನ್ನು ಹೆಚ್ಚಿನ ಬೆಲೆ ಮಾರಾಟ ಮಾಡದಂತೆ ನೋಡಿಕೊಳ್ಳಬೇಕು ತರಕಾರಿಗಳು ಹಾಗೂ ಅಗತ್ಯ ವಸ್ತುಗಳನ್ನು ಮನೆ ಮನೆಗೆ ತಲುಪಿಸುವಂತೆ ತೋಟಗಾರಿಕೆ ಸಹಾಯಕ ನಿರ್ದೇಶಕ ಡಾ.ಲೋಕೇಶ್ ಅವರಿಗೆ ಆದೇಶ ನೀಡಿದರು. ಎಂದು ಸಚಿವ ನಾರಾಯಣಗೌಡರು ಸಲಹೆ ನೀಡಿದರು.
ಸಭೆಯಲ್ಲಿ ಪಾಂಡವಪುರ ಉಪವಿಭಾಗಾಧಿಕಾರಿ ಎಂ.ಶೈಲಜಾ, ತಹಸೀಲ್ದಾರ್ ಎಂ.ಶಿವಮೂರ್ತಿ, ತಾಲೂಕು ಆರೋಗ್ಯಾಧಿಕಾರಿ ಡಾ.ಹೆಚ್.ಟಿ.ಹರೀಶ್, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಜಯಪ್ರಕಾಶ್, ಪುರಸಭೆಯ ಮುಖ್ಯಾಧಿಕಾರಿ ಸತೀಶ್ ಕುಮಾರ್, ವೃತ್ತ ನಿರೀಕ್ಷಕ ಕೆ.ಎನ್.ಸುಧಾಕರ್, ತಾ.ಪಂ.ಇಓ ವೈ.ಎನ್.ಚಂದ್ರಮೌಳಿ, ತೋಟಗಾರಿಕಾ ಸಹಾಯಕ ನಿರ್ದೇಶಕ ಲೋಕೇಶ್, ಸಬ್ ಇನ್ಸ್ಪೆಕ್ಟರ್ ಬಿ.ಪಿ.ಬ್ಯಾಟರಾಯಗೌಡ, ಡಾ.ಮರುಳೇಶ್, ಅಗ್ನಿಶಾಮಕ ಅಧಿಕಾರಿ ಶ್ರೀನಿವಾಸರಾವ್ ಸೇರಿದಂತೆ ತಾಲೂಕು ಮಟ್ಟದ ಹಲವು ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.