ಮುಂಬಯಿ (ಆರ್ಬಿಐ), ಆ.31: ಗೋವಿಂದಪ್ಪ ಬೆಸ್ಕೂರ್ ಮತ್ತು ಸೀತಾದೇವಿ ಇವರ ಸುಪುತ್ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ, ಗಲ್ಫ್ಕನ್ನಡಿಗ ವೆಬ್ಸೈಟ್ನ ಮಾಜಿ ಸಂಪಾದಕ ಲಯನ್ ಬಿ.ಜಿ ಮೋಹನ್ದಾಸ್ (70.) ಇಂದಿಲ್ಲಿ ಸೋಮವಾರ ಉಡುಪಿ ಇಲ್ಲಿನ ಮಣಿಪಾಲ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಮೃತರು ಪತ್ನಿ, ಮಗ, ಮಗಳು ಮತ್ತು ಸೊಸೆ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮಣಿಪಾಲ್ ವಿಶ್ವವಿದ್ಯಾಲಯದ ಮಣಿಪಾಲ್ ಕಾಲೇಜ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್ನಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ (ಬಿಫಾರ್ಮ್ ಮತ್ತು ಎಂಪಾರ್ಮ್) ಮಾಡಿ ಕಸ್ತೂರ್ಬಾ ಆಸ್ಪತ್ರೆಯಲ್ಲೇ ಅದರ ಮೊದಲ ಮುಖ್ಯ ಔಷಧಿಕಾರಿ ಆಗಿ ಕೆಲಸ ಪ್ರಾರಂಭಿಸಿದರು ಬಳಿಕ ಎಂಫಾರ್ಮ್ ಅನ್ನು ಪೂರೈಸಿದ್ದರು. ನಂತರ ಭದ್ರಾವತಿಯ ವಿಐಎಸ್ಎಲ್ನಲ್ಲಿ ಕೆಲಸ ಮಾಡಿ ಆಮೇಲೆ ಮಣಿಪಾಲ್ ಕಾಲೇಜ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡಿ ಬಳಿಕ ಸೌದಿ ಅರೇಬಿಯಾ ನಂತರ ದುಬೈ, ಅಜ್ಮಾನ್ನಲ್ಲಿ ಶ್ರಮಿಸಿದ್ದರು.
ಮಣಿಪಾಲ್ ಜೇಸಿಸ್, ಲಯನ್ಸ್ ಕ್ಲಬ್ಗಳಲ್ಲಿ ಜವಾಬ್ದಾರಿ ನಿಭಾಯಿಸಿದ್ದ ಮೋಹನದಾಸ್ ಇವರಿಗೆ 2002ರಲ್ಲಿ ಮಣಿಪಾಲ್ ವಿಶ್ವವಿದ್ಯಾಲಯದ ಎಂಸಿಒಪಿಎಸ್ ಅಸಾಧಾರಣ ಸಾಧಕ ಅಲುಮ್ನಿ ಪ್ರಶಸ್ತಿ ನೀಡಲಾಯಿತು. ವಿಶ್ವ ಮಾನವ ಪ್ರಶಸ್ತಿ ಮತ್ತು ಕರ್ನಾಟಕ ಸಂಘ ಅಬುಧಾಬಿ ಅವರ ಪ್ರಥಮ ದಾ.ರಾ ಬೇಂದ್ರೆ ಪ್ರಶಸ್ತಿ ಶಾರ್ಜಾ ಕರ್ನಾಟಕ ಸಂಘ ಅವರಿಂದ ಮಯೂರ ಪ್ರಶಸ್ತಿ, ಕಾಂತವರ ಕರ್ನಾಟಕ ಸಂಘವು 2017ರಲ್ಲಿ `ಅನ್ಶುಮಾಲಿ' ಬರೆದ `ಗಲ್ಫ್ ಕನ್ನಡಿಗ-ಬಿ ಜಿ ಮೋಹನ್ದಾಸ್' ಎಂಬ ಪುಸ್ತಕವನ್ನು ಪ್ರಕಟಿಸಿತ್ತು. 2019ರಲ್ಲಿ ಕರ್ನಾಟಕ ರಾಜ್ಯ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದ ಇವರು ಪಡೆದ ಮೊದಲ ಬೈಂದೂರಿಯನ್ ಮತ್ತು ಪ್ರಶಸ್ತಿ ಪಡೆದ 4ನೇ ಕೊಲ್ಲಿ ಕನ್ನಡಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊೈಲಿ, ಹರೀಶ್ ಶೇರಿಗಾರ್ ದುಬಾಯಿ ನಾರಾಯಣ ದೇವಾಡಿಗ ದುಬಾಯಿ, ವಾಲ್ಟರ್ ನಂದಾಳಿಕೆ, ದೇವಾಡಿಗ ಸಂಘದ ಅಧ್ಯಕ್ಷ ರವಿ ಎಸ್.ದೇವಾಡಿಗ, ಮಾಜಿ ಅಧ್ಯಕ್ಷರಾದ ಧರ್ಮಪಾಲ್ ಯು.ದೇವಾಡಿಗ, ಹಿರಿಯಡ್ಕ ಮೋಹನ್ದಾಸ್ ಸೇರಿದಂತೆ ನೂರಾರುಉ ಗಣ್ಯರು ಸಂತಾಪ ಸೂಚಿಸಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.