ರಾಜ್ಯದ 31 ಜಿಲ್ಲೆಗಳಲ್ಲಿ ಖೇಲೊ ಇಂಡಿಯಾ ಕೇಂದ್ರಗಳ ಸ್ಥಾಪನೆ
ಮುಂಬಯಿ (ಆರ್ ಬಿಐ). ಮೇ. 25: ರಾಜ್ಯಕ್ಕೆ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅವರು ಆಗಮಿಸಿದ್ದ ವೇಳೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ಕೆ.ಸಿ ನಾರಾಯಣ ಗೌಡ ಅವರು ರಾಜ್ಯದಲ್ಲಿ ಕ್ರೀಡಾಪಟುಗಳಿಗೆ ಅನುಕೂಲವಾಗುವಂತೆ ರಾಜ್ಯದ 31 ಜಿಲ್ಲೆಗಳಲ್ಲಿ ಖೇಲೊ ಇಂಡಿಯಾದ ಕೇಂದ್ರಗಳನ್ನು ಪ್ರತಿ ಜಿಲ್ಲೆಯಲ್ಲಿ ಸ್ಥಾಪಿಸುವಂತೆ ಮನವಿ ಮಾಡಿದ್ದರು. ಸಚಿವರ ಮನವಿಗೆ ಸ್ಪಂದಿಸಿದ ಕೇಂದ್ರ ಸರ್ಕಾರ ಈಗ ರಾಜ್ಯದಲ್ಲಿ ಖೇಲೊ ಇಂಡಿಯಾದ ಕೇಂದ್ರಗಳನ್ನು ಸ್ಥಾಪಿಸಲು ಅನುಮೋದನೆ ನೀಡಿದೆ. ಇದು ನಿಜಕ್ಕೂ ರಾಜ್ಯದ ಕ್ರೀಡಾಪಟುಗಳಿಗೆ ಸಂತಸದ ಸುದ್ದಿ, ಇದರ ಲಾಭವನ್ನು ಪ್ರತಿಯೊಬ್ಬ ಕ್ರೀಡಾಪಟುವು ಪಡೆದುಕೊಳ್ಳಬೇಕು ಎಂದು ಸಚಿವ ನಾರಾಯಣ ಗೌಡ ಕೋರಿದ್ದಾರೆ.
ಒಂದು ಜಿಲ್ಲೆ ಒಂದು ಕ್ರೀಡೆ ಎಂಬ ಪರಿಕಲ್ಪನೆ ಅಡಿಯಲ್ಲಿ ಕ್ರೀಡೆ ಹಾಗೂ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ಖೇಲೊ ಇಂಡಿಯಾ ಯೋಜನೆ ಅಡಿಯಲ್ಲಿ ಪ್ರತಿ ಜಿಲ್ಲೆಯಲ್ಲೂ ಖೇಲೊ ಇಂಡಿಯಾ ಕೇಂದ್ರ ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಸಂಬಂಧ ಕೇಂದ್ರದ ಕ್ರೀಡಾ ಸಚಿವರು ಬೆಂಗಳೂರಿಗೆ ಆಗಮಿಸಿದ್ದಾಗ, ಸಚಿವ ಗೌಡ ಈ ಬಗ್ಗೆ ಸಮಗ್ರವಾಗಿ ಚರ್ಚಿಸಿದ್ದರು. ನಮ್ಮ ರಾಜ್ಯದ 31 ಜಿಲ್ಲೆಗಳಲ್ಲೂ ಖೇಲೊ ಇಂಡಿಯಾ ಕೇಂದ್ರಗಳನ್ನು ಸ್ಥಾಪಿಸುವುದುಕ್ಕೆ ಅನುದಾನ ಕಲ್ಪಿಸಬೇಕು ಎಂದು ಮನವಿ ಮಾಡಿದ್ದರು. ಅಂದು ಸಚಿವರಿಗೆ ನೀಡಿದ ಭರವಸೆಯಂತೆ ಈಗ ಕೇಂದ್ರಗಳ ಸ್ಥಾಪನೆಗೆ ಅನುಮೋದನೆ ನೀಡಿ, ಅನುದಾನವನ್ನು ಒದಗಿಸಿ ಅಧಿಸೂಚನೆ ಹೊರಡಿಸಿದೆ.
ಕ್ರೀಡಾಪಟುಗಳ ಆಯ್ಕೆ ಮತ್ತು ಗುಣಮಟ್ಟದ ತರಬೇತಿ ನೀಡುವ ಉದ್ದೇಶದಿಂದ ಈ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಮಾಜಿ ಛಾಂಪಿಯನ್ ಗಳು ಈ ಕೇಂದ್ರದಲ್ಲಿ ತರಬೇತುದಾರರಾಗಿ ಕಾರ್ಯನಿರ್ವಹಿಸಲಿದ್ದಾರೆ. ಕ್ರೀಡಾಪಟುಗಳನ್ನು ಗುರುತಿಸಿ ಆಯ್ಕೆ ಮಾಡುವ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ. ಸಚಿವಾಲಯದ ಮಾರ್ಗಸೂಚನೆಯಂತೆ ತರಬೇತುದಾರರು ಕಾರ್ಯನಿರ್ವಹಿಸಬೇಕು. ಅಲ್ಲದೆ ಪ್ರತಿ ಕೇಂದ್ರದಲ್ಲಿ ಪುರುಷ ಹಾಗೂ ಮಹಿಳಾ ತರಬೇತುದಾರರು ಕಡ್ಡಾಯವಾಗಿ ಇರಬೇಕು. ಆಯ್ಕೆಯಾಗಿ ತರಬೇತಿ ಪಡೆಯುವ ಪ್ರತಿ ಕ್ರೀಡಾಪಟುವು ಕಡ್ಡಾಯವಾಗಿ ನೊಂದಣಿ ಮಾಡಿಕೊಳ್ಳಬೇಕು. ಖೇಲೋ ಇಂಡಿಯಾ ಕೇಂದ್ರಗಳನ್ನು ಸ್ಥಾಪಿಸಲು ಹಾಗೂ ಕ್ರೀಡಾ ಸೌಕರ್ಯಗಳ ಉನ್ನತೀಕರಣಕ್ಕಾಗಿ 5 ಲಕ್ಷ ರೂ ಮತ್ತು ತರಬೇತುದಾರರು ತಾಂತ್ರಿಕ ಸಿಬ್ಬಂದಿಗಳ ಗೌರವಧನಕ್ಕಾಗಿ ಮತ್ತು ಕ್ರೀಡಾ ಉಪಕರಣಗಳ ಪೂರೈಕೆಗೆ ವಾರ್ಷಿಕ 5 ಲಕ್ಷ ರೂ.ಗಳನ್ನು ನೀಡಲಿದೆ. ಈ ಯೋಜನೆಯು ಮುಂದಿನ 4 ವರ್ಷಗಳ ಅವಧಿಗೆ ಜಾರಿಯಲ್ಲಿರಲಿದೆ.
ಈ ಕೇಂದ್ರದ ಮೂಲಕ ಕ್ರೀಡಾಪಟುಗಳು ಉತ್ತಮ ತರಬೇತಿ ಪಡೆದು, ಸಾಧನೆ ಮಾಡಲು ಅವಕಾಶ ಇದೆ. ಕ್ರೀಡಾಪಟುಗಳು ಇದನ್ನು ಸದುಪಯೋಗಪಡಿಸಿಕೊಂಡು ರಾಜ್ಯಕ್ಕೆ, ದೇಶಕ್ಕೆ ಕೀರ್ತಿ ತರಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣಗೌಡ ಮನವಿ ಮಾಡಿದ್ದಾರೆ. ಅಲ್ಲದೆ ರಾಜ್ಯದಲ್ಲಿ ಖೇಲೋ ಇಂಡಿಯಾ ಕೇಂದ್ರಗಳನ್ನು ಪ್ರಾರಂಭಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಸನ್ಮಾನ್ಯ ಪ್ರಧಾನಮಂತ್ರಿಯವರಾದ ನರೇಂದ್ರ ಮೋದಿ ಅವರಿಗೂ, ಕೇಂದ್ರ ಕ್ರೀಡಾ ಸಚಿವ ಕಿರಣ ರಿಜಿಜು, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಡಿ.ವಿ. ಸದಾನಂದ ಗೌಡ ಅವರನ್ನು ಸಚಿವ ನಾರಾಯಣಗೌಡ ಅಭಿವಂದಿಸಿದ್ದಾರೆ.