ಗೋರೆಗಾಂವ್ ಕರ್ನಾಟಕ ಸಂಘಕ್ಕೆ ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಗರಿ
ಮುಂಬಯಿ (ಆರ್ಬಿಐ), ನ.04: ಕನ್ನಡ ಸಾಹಿತ್ಯ ಪರಿಷತ್ತು ಇದರ ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಇವರ ಸಂಸ್ಥಾಪಕತ್ವದ ಕೇರಳದ ಕನ್ನಡ ಪರ ಸಂಘಟನೆಗಳ ಒಕ್ಕೂಟ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ.) ಸಂಸ್ಥೆಯು ಮಹಾರಾಷ್ಟ್ರ ರಾಜ್ಯದ ಮುಂಬಯಿ ಇಲ್ಲಿ ಸೇವಾ ನಿರತ ಗೋರೆಗಾಂವ್ ಕರ್ನಾಟಕ ಸಂಘ ಇದರ ಅನುಪಮ ಸೇವೆಯನ್ನು ಗುರುತಿಸಿ ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನಿಸಲಿದೆ ಎಂದು ಸಾಂಸ್ಕೃತಿಕ ಅಕಾಡೆಮಿಯ ಸಂಘಟಕರು ತಿಳಿಸಿದ್ದಾರೆ.
ಕೇರಳದ ಕನ್ನಡಪರ ಸಂಘಟನೆಗಳ ಒಕ್ಕೂಟವಾದ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯು ಕೇರಳದಲ್ಲಿ ಕನ್ನಡ ಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಹಾಗೂ ಕಲೆಗಳ ಅಭಿವೃದ್ಧಿಗಾಗಿ ಅವಿರತ ಶ್ರಮಿಸುತ್ತಿದೆ. ಇಲ್ಲಿನ ವಿವಿಧ ಕನ್ನಡಪರ ಸಂಘಟನೆಗಳ ಸಹಯೋಗದೊಂದಿಗೆ ದಿನಾಂಕ 19.11.2023ರ ಭಾನುವಾರ ಕಾಸರಗೋಡು ಇಲ್ಲಿ ಗಡಿನಾಡ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಚರಿಸುತ್ತಿದ್ದು ಅಂದು ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನಿಸಿ ಗೌರವಿಸಲಿದೆ.
ಈ ಕಾರ್ಯಕ್ರಮದಲ್ಲಿ ಕೇರಳದ ವಿವಿಧ ಜಿಲ್ಲೆಗಳಲ್ಲಿ ನೆಲೆಸಿರುವ ಅನೇಕ ಕನ್ನಡಿಗರು ಭಾಗವಹಿಸಲಿದ್ದು ಹಾಗೂ ಕರ್ನಾಟಕದ ಅನೇಕ ಜಾನಪದ, ಯಕ್ಷಗಾನ ಹಾಗೂ ಇನ್ನಿತರ ಕಲಾರೂಪಕಗಳು ಪ್ರದರ್ಶನ ಗೊಳ್ಳಲಿದೆ. ತಮ್ಮ ಸಂಸ್ಥೆಯು ಮುಂಬೈ ಮಹಾನಗರದಲ್ಲಿ ನಡೆಸುತ್ತಿರುವ ಕನ್ನಡಪರ ಚಟುವಟಿಕೆಯನ್ನು ಗುರುತಿಸಿ ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಿದೆ. ಆ ಪೈಕಿ ಮುಂಬಯಿ ಇಲ್ಲಿ ಸೇವಾ ನಿರತ ಗೋರೆಗಾಂವ್ ಕರ್ನಾಟಕ ಸಂಘ ಒಂದಾಗಿದ್ದು ಸಂಘದ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಅವರನ್ನು ಆಹ್ವಾನಿಸಿದ್ದು ಪ್ರಶಸ್ತಿ ಪ್ರದಾನಿಸಲಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಿ, ಪ್ರಶಸ್ತಿ ಸ್ವೀಕರಿಸಿ ಹೊರನಾಡಿನಲ್ಲಿ ನಾವು ನಡೆಸುತ್ತಿರುವ ಕನ್ನಡಪರ ಚಟುವಟಿಕೆಗಳನ್ನು ಬೆಂಬಲಿಸಬೇಕಾಗಿ ಈ ಮೂಲಕ ಸಂಘಟಕರು ವಿನಂತಿಸಿದ್ದಾರೆ.