(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಎ.04: ಅಂಧೇರಿ ಪಶ್ಚಿಮದ ಇರ್ಲಾದಲ್ಲಿನ ಶ್ರೀ ಅದಮಾರು ಮಠದಲ್ಲಿ ಇಂದಿಲ್ಲಿ ಮಂಗಳವಾರ ಕೌಸಲ್ಯಾ ಸುಪ್ರಜಾ, ಮರ್ಯಾದಾ ಪುರುಷೋತ್ತಮ, ಏಕಪತ್ನೀವ್ರತಸ್ಥ, ಅಯೋಧ್ಯೆಯ ಚಕ್ರವರ್ತಿ ಶ್ರೀರಾಮಚಂದ್ರನ ಹುಟ್ಟುಹಬ್ಬವನ್ನು ಶ್ರೀ ರಾಮನವಮಿ ಯನ್ನಾಗಿಸಿ ಅದ್ದೂರಿಯಾಗಿ ಆಚರಿಸಲಾಯಿತು. ಉಡುಪಿ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮಿಜಿ ಶ್ರೀ ರಾಮ ದೇವರಿಗೆ ವಿಶೇಷ ಪೂಜೆ ನೆರವೇರಿಸಿ ನೆರೆದ ಸದ್ಭಕ್ತರಿಗೆ ಅನುಗ್ರಹಿಸಿದರು.
ಏಳು ದಿನಗಳ ಕಾಲಾವಧಿಯಲ್ಲಿ ವಿಶೇಷ ಪೂಜೆ, ಹವನ ಸಾಂಸ್ಕೃತಿಕ ಕಾರ್ಯಕ್ರಮಗಳು, ಭಜನೆ, ಭಕ್ತಿ ಸಂಗೀತ, ನೃತ್ಯ ಹರಿಕತೆ ಸೇರಿದಂತೆ ಇತರ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಶ್ವಪ್ರಿಯಶ್ರೀಗಳು ವಿಶೇಷ ಮಹಾಪೂಜೆ ನೆರವೇರಿಸಿ ದಕ್ಷಿಣೆ, ಪ್ರಸಾದವನ್ನಿತ್ತರು. ನಂತರ ಮಠದಲ್ಲಿ ಶ್ರೀ ರಾಮೋತ್ಸವ ಸಂಭ್ರಮದ ಸಿದ್ಧತೆಯಾಗಿಸಿ ಆಯೋಜಿಸಲಾಗಿದ್ದ 2017ನೇ ವಾರ್ಷಿಕ ಸಪ್ತದಿನಗಳ ರಾಮಾಯಣ ಪ್ರವಚನದ ಕೊನೆಯ ಪ್ರವಚನಗೈದು ಪ್ರಾಚೀನ ಭಾರತದ ಮೇರು ಕೃತಿ ವಾಲ್ಮೀಕಿ ವಿರಚಿತ ರಾಮಾಯಣದ ಕಥಾನಾಯಕನನ್ನು ಸ್ಮರಿಸಿದ ಶ್ರೀಗಳು ಶ್ರೀರಾಮನ ಜೀವನ ಸಂದೇಶನೀಡಿದರು.
ಶ್ರೀ ಅದಮಾರು ಮಠದಲ್ಲಿನ 18ನೇ ವಾರ್ಷಿಕ ಶ್ರೀ ರಾಮನವಮಿ ಉತ್ಸವ ಸಮಾರಂಭದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿಸಲ್ಪಟ್ಟವು. ಬೆಳಿಗ್ಗೆ ಪಂಚಾಮೃತ ಅಭಿಷೇಕ, ಪೂರ್ವಾಹ್ನ ವಾಗ್ದೇವಿ ಭಜನಾ ಮಂಡಳಿಯು ಭಜನೆ ನಡೆಸಿತು. ಮಧ್ಯಾಹ್ನ ಮಹಾಪೂಜೆ, ತೀರ್ಥಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ಸಂಜೆ ಪಲ್ಲಕ್ಕಿ ಉತ್ಸವ ನಡೆಸಲ್ಪಟ್ಟವು. ಅನೇಕ ಪುರೋಹಿತರು, ಗಣ್ಯರು, ಮಹಾನಗರ ದಲ್ಲಿನ ಬಹುಸಂಖ್ಯಾಕ ಭಕ್ತರು ರಾಮದೇವರನ್ನು ಮನಸಾ ನೆನೆಸಿ ಕೊಂಡರು. ಮಠದ ವ್ಯವಸ್ಥಾಪಕ ಪಡುಬಿದ್ರಿ ವಿ.ರಾಜೇಶ್ ರಾವ್ ಸ್ವಾಗತಿಸಿದರು. ಅದಮಾರು ಮಠ ಮುಂಬಯಿ ಶಾಖಾ ದಿವಾನ ಲಕ್ಷಿ ್ಮೀನಾರಾಯಣ ಮುಚ್ಚಿತ್ತಾಂಯ ಕಾರ್ಯಕ್ರಮ ನಿರ್ವಾಹಿಸಿ ವಂದಿಸಿದರು.