ಮಂಗಳೂರು: ಮಂಗಳೂರಿಗೆ ನೀರಿನ ಕೊರತೆ ಎದುರಾಗುತ್ತಿದೆ. ನೀರಿನ ಅಭಾವ ತಲೆದೋರಿದ ಹಿನ್ನೆಲೆ ಮಂಗಳೂರಿನ ಜನ ನೀರಿಗಾಗಿ ಪರದಾಡುತ್ತಿದ್ದಾರೆ. ಸರಕಾರಿ ಸ್ವಾಮ್ಯದ ತೈಲ ಶುದ್ಧೀಕರಣದ ಬೃಹತ್ ಘಟಕ ಎಂಆರ್ಪಿಎಲ್ಗೂ ಸಮಸ್ಯೆ ಎದುರಾಗಿದೆ. ಈಗಾಗಲೇ ಮಂಗಳೂರು ಪಾಲಿಕೆಯಿಂದ ಎಂಆರ್ಪಿಎಲ್ ಗೂ ನೀರಿನ ಸರಬರಾಜಿನಲ್ಲಿ ಕಡಿತಗೊಳಿಸಲಾಗಿದ್ದು, ನೀರಿನ ಲಭ್ಯತೆ ಸಾಕಾಗದಿರುವ ಹಿನ್ನೆಲೆಯಿಂದ ಎ. 15ರಿಂದ ಮೇ 15ರ ವರೆಗೆ ಇಲ್ಲಿನ ಕೆಲವು ಸ್ಥಾವರಗಳು ಕೆಲಸ ಸ್ಥಗಿತಗೊಳಿಸಲಿವೆ.ಪ್ರತೀ ವರ್ಷ ಎಂಆರ್ಪಿಎಲ್ ಬೇರೆ ಬೇರೆ ಸ್ಥಾವರಗಳನ್ನು ಶಟ್ಡೌನ್ ಮಾಡುವ ಮೂಲಕ ನಿರ್ವಹಣೆ ಮಾಡಲಾಗುತ್ತದೆ. ಪ್ರತೀ ದಿನ ಇಲ್ಲಿನ ಯಂತ್ರಗಳು ಕಾರ್ಯ ನಿರ್ವಹಿಸುವ ಕಾರಣದಿಂದ ಅವುಗಳ ನಿರ್ವಹಣೆ ಮಾಡುವುದು ಅನಿವಾರ್ಯ. ಆದರೆ, ಮೇ ತಿಂಗಳಿನ ಅನಂತರ ನಡೆಯಬೇಕಾದ ನಿರ್ವಹಣಾ ಕೆಲಸವನ್ನು ಈ ಬಾರಿ ನೀರಿನ ಕೊರತೆಯ ಕಾರಣದಿಂದ ಒಂದು ತಿಂಗಳ ಮೊದಲೇ ಮಾಡಲಾಗುತ್ತಿದೆ.
ಎಂಸಿಎಫ್ ಸ್ಥಗಿತ
ಈ ಮಧ್ಯೆ ದಕ್ಷಿಣ ಭಾರತ ಏಕೈಕ ಯೂರಿಯಾ ಉತ್ಪಾದಿಸುವ ಘಟಕವಾದ ಪಣಂಬೂರಿನ ಎಂಸಿಎಫ್ ಈ ಬಾರಿಯೂ ನೀರಿನ ಸಮಸ್ಯೆಯಿಂದ ಬಾಗಿಲು ಹಾಕಿದೆ. ಕಳೆದ ವರ್ಷವೂ ಭೀಕರ ಜಲ ಕ್ಷಾಮಕ್ಕೆ ಎಂಸಿಎಫ್ ಒಂದು ತಿಂಗಳಿಗೂ ಹೆಚ್ಚು ಕಾಲ ಉತ್ಪಾದನೆ ಸ್ಥಗಿತಗೊಳಿಸಿತ್ತು. ಎಂಸಿಎಫ್ ಕಾರ್ಖಾನೆ ಮಾ. 3ರಿಂದಲೇ ಶಟ್ಡೌನ್ ಆಗಿದೆ. ಎಂಸಿಎಫ್ಗೆ ಮಂಗಳೂರು ಮಹಾನಗರ ಪಾಲಿಕೆ ದಿನಕ್ಕೆ 2 ಎಂಜಿಡಿ ನೀರು ಸರಬರಾಜು ಮಾಡುತ್ತಿತ್ತು. ಆದರೆ ತುಂಬೆಯಲ್ಲಿ ನೇತ್ರಾವತಿ ಒಳ ಹರಿವು ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಮಾ. 3ರಿಂದ ಜಿಲ್ಲಾಡಳಿತ ನೀರು ಸರಬರಾಜನ್ನು ಸ್ಥಗಿತಗೊಳಿಸಿದೆ.