ಮಂಗಳೂರು: ಮಂಗಳೂರಿನ ಉರ್ವ ಪೊಲೀಸ್ ಠಾಣೆಯ ಎಎಸ್ಐ ಐತಪ್ಪ (55) ಅವರ ಮೇಲೆ ಬುಧವಾರ ಮುಂಜಾನೆ ನಗರದ ಲೇಡಿಹಿಲ್ ವೃತ್ತದಲ್ಲಿ ಇಬ್ಬರು ಅಪರಿಚಿತ ಬೈಕ್ ಸವಾರರು ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ನಡೆದಿದೆ. ಘಟನೆಯಿಂದ ತಲೆಗೆ ತೀವ್ರವಾಗಿ ಗಾಯಗೊಂಡಿರುವ ಐತಪ್ಪ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ವಿವರ:
ಐತಪ್ಪ ತನ್ನ ಬೈಕ್ನಲ್ಲಿ ರೌಂಡ್ಸ್ ಕಾರ್ಯಾಚರಣೆ ನಡೆಸುತ್ತಾ ಮುಂಜಾನೆ 3.20ರ ವೇಳೆಗೆ ಲಾಲ್ಬಾಗ್ನಿಂದ ಉರ್ವಸ್ಟೋರ್ ಕಡೆಗೆ ನಿಧಾನವಾಗಿ ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದರು. ಅದೇ ಹೊತ್ತಿಗೆ ಇಬ್ಬರು ಬೈಕ್ ಸವಾರರು ಲಾಲ್ಬಾಗ್ನಿಂದಲೇ ಎಎಸ್ಐ ಅವರನ್ನು ಹಿಂಬಾಲಿಸಿಕೊಂಡು ಬರುತ್ತಿದ್ದರು. ಇದನ್ನು ಗಮನಿಸಿದ ಎಎಸ್ಐ ಮತ್ತಷ್ಟು ನಿಧಾನಗೊಳಿಸಿದ್ದು, ಲೇಡಿಹಿಲ್ ವೃತ್ತ ದಾಟುವಷ್ಟರಲ್ಲಿ ಹಿಂಬಾಲಿಸಿ ಬಂದವರು ಐತಪ್ಪ ಅವರ ಬೈಕ್ನ ಸಮೀಪ ಬಂದರು. ಎಎಸ್ಐ ಅವರು ಬೈಕ್ ನಿಲ್ಲಿಸಿದಾಗ ಹಿಂಬಾಲಿಸಿಕೊಂಡು ಬಂದವರು ಕೂಡ ನಿಲ್ಲಿಸಿದರು.ಬಳಿಕ ಬೈಕ್ ಸವಾರನು "ನೀವು ಯಾವ ಠಾಣೆಯವರು' ಎಂದು ಎಎಸ್ಐ ಬಳಿ ತುಳು ಭಾಷೆಯಲ್ಲಿ ವಿಚಾರಿಸಿ ಹಿಂಬದಿ ಸವಾರ ತನ್ನ ಕೈಯಲ್ಲಿದ್ದ ಕಬ್ಬಿಣದ ಸರಳಿನಿಂದ ಐತಪ್ಪ ತಲೆಗೆ ಹೊಡಿದಿದ್ದಾನೆ. ಆಗ ಐತಪ್ಪ ಕೆಳಗೆ ಬಿದ್ದಿದ್ದು, ಅಷ್ಟರಲ್ಲಿ ಇಬ್ಬರೂ ಅಪರಿಚಿತರು ಬೈಕ್ನಲ್ಲಿ ಪರಾರಿಯಾಗಿದ್ದಾರೆ.
ಪೊಲೀಸ್ ಆಯುಕ್ತ ಎಂ. ಚಂದ್ರಶೇಖರ್ ಅವರು ಡಿಸಿಪಿಗಳಾದ ಕೆ.ಎಂ. ಶಾಂತರಾಜು ಮತ್ತು ಡಾ| ಸಂಜೀವ್ ಪಾಟೀಲ್ ಅವರು ಘಟನಾ ಸ್ಥಳಕ್ಕೆ ಮತ್ತು ಗಾಯಾಳು ಎಎಸ್ಐ ದಾಖಲಾಗಿರುವ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಉರ್ವ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಮತ್ತು ಕರ್ತವ್ಯಕ್ಕೆ ಅಡ್ಡಿ ಪ್ರಕರಣ ದಾಖಲಾಗಿದ್ದು, ಎಸಿಪಿ ಉದಯ ನಾಯಕ್ ನೇತೃತ್ವದಲ್ಲಿ 3 ತಂಡಗಳು ಪ್ರಕರಣದ ತನಿಖೆ ನಡೆಸುತ್ತಿದೆ.