Tuesday 26th, September 2023
canara news

ಉಪನ್ಯಾಸಕಿ ಸೌಮ್ಯ ವಜಾ ಭಂಡಾರ್‍ಕಾರ್ಸ್ ಆಡಳಿತ ಮಂಡಳಿ ನಿರ್ಧಾರ ಸರಿ, ಕಾಲೇಜಿನ ರಕ್ಷಕ-ಶಿಕ್ಷಕ ಸಂಘ ಅಭಿಪ್ರಾಯಪಟ್ಟಿದೆ.

Published On : 08 Apr 2017   |  Reported By : Bernard J Costa


ಭಂಡಾರ್‍ಕಾರ್ಸ್ ಕಾಲೇಜಿನ ಗುತ್ತಿಗೆ ಉಪನ್ಯಾಸಕಿ ಸೌಮ್ಯ ಎಚ್. ಕಾಲೇಜಿಗೆ ಮಾಹಿತಿ ನೀಡದೆ 50 ದಿನ ಅನಧಿಕೃತ ಗೈರು ಹಾಜರಾಗಿರುವುದನ್ನು ಗಂಭೀರವಾಗಿ ಪರಿಗಣಿಸಿದ ಕಾಲೇಜಿನ ಆಡಳಿತ ಮಂಡಳಿ ಅವರನ್ನು ಸೇವೆಯಿಂದ ವಜಾ ಮಾಡಿದ್ದು ಕಾನೂನು ನಿಯಮ ಪ್ರಕಾರ ಸರಿ ಇದೆ ಎಂದು ಭಂಡಾರ್‍ಕಾರ್ಸ್ ಕಾಲೇಜಿನ ರಕ್ಷಕ-ಶಿಕ್ಷಕ ಸಂಘ ಅಭಿಪ್ರಾಯಪಟ್ಟಿದೆ.

ಭಂಡಾರ್‍ಕಾರ್ಸ್ ಕಾಲೇಜಿನ ಪ್ರಾಂಶುಪಾಲರು ಹಾಗೂ ಮೆನೇಜರ್, ಸೌಮ್ಯ ಅವರ ಬಗ್ಗೆ ವಿರುದ್ಧ ತಪ್ಪು ನಿರ್ಧಾರ ಕೈಗೊಳ್ಳಲಿಲ್ಲ ಎಂದು ಕಾಲೇಜಿನಲ್ಲಿ ನಡೆಸಿದ ವಿಚಾರಣೆಯಲ್ಲಿ ತಿಳಿಯಿತು.

ಸೌಮ್ಯ ಎಚ್. ಅವರು ಫೆಬ್ರವರಿ 1ರಿಂದ ಕಾಲೇಜಿಗೆ ಗೈರು ಹಾಜರಾಗಿರುವುದು ವೈದ್ಯಕೀಯ ತುರ್ತು ಕಾರಣಕ್ಕೆ ಇರಬಹುದಾದರೂ ನಮ್ಮ ವಿದ್ಯಾರ್ಥಿಗಳ ಹಾಗೂ ಕಾಲೇಜಿನ ಶೈಕ್ಷಣಿಕ ವ್ಯವಸ್ಥೆಗೆ ಆಗುವ ಸಮಸ್ಯೆಗಳನ್ನು ಗಮನಿಸಿ ಆಡಳಿತ ಮಂಡಳಿ ಅಥವಾ ಪ್ರಾಂಶುಪಾಲರಿಗೆ ಮಾಹಿತಿಯನ್ನು ನೀಡಬಹುದಿತ್ತು. ಈಗ ಮೊಬೈಲ್ ಮೂಲಕ ಮೆಸೇಜ್, ವಾಟ್ಸಪ್ ಮಾಹಿತಿ, ಇಂಟರನೆಟ್ ಸಂವಹನಾ ಮಾಡುವ ವ್ಯವಸ್ಥೆ ಇದ್ದು, 50 ದಿನಗಳಾದರೂ ಲಿಖಿತ ಮಾಹಿತಿ ಅಥವಾ ವಿದ್ಯುನ್ಮಾನ ವ್ಯವಸ್ಥೆ ಮೂಲಕ ಮಾಹಿತಿ ನೀಡಿಲ್ಲ. ಹೀಗಿರುವಾಗ ಯಾವುದೇ ಕಾಲೇಜಿನ ಆಡಳಿತ ಮಂಡಳಿ ಈ ಅನಾಸಕ್ತಿ ಅಥವಾ ಶಿಸ್ತು ಉಲ್ಲಂಘನೆಯನ್ನು ಮಕ್ಕಳ ಹಿತದೃಷ್ಟಿಯಿಂದ ಗಂಭೀರವಾಗಿ ಪರಿಗಣಿಸುವುದು ಸಹಜವಾಗಿದೆ. ಈ ವಿಷಯದಲ್ಲಿ ಪ್ರಾಂಶುಪಾಲರು ಆಡಳಿತ ಮಂಡಳಿ ನಿರ್ಧಾರವನ್ನು ಸಂಬಂಧಪಟ್ಟವರಿಗೆ ತಿಳಿಸುವ ಜವಾಬ್ದಾರಿ ಹೊಂದಿದ್ದಾರೆಯೇ ಹೊರತು ಈ ನಿರ್ಧಾರ ಅವರದ್ದು ಅಥವಾ ಮೆನೇಜರದ್ದು ಆಗಿರುವುದಿಲ್ಲ.

ಕಾಲೇಜಿನ ಪ್ರತಿಯೊಬ್ಬ ಶಿಕ್ಷಕರಿಗೆ, ಶಿಕ್ಷಕೇತರರಿಗೆ ಹಾಗೂ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರ ಕಛೇರಿ ದೂರವಾಣಿ, ಮೊಬೈಲ್ ನಂಬರ ಹಾಗೂ ಅವರ ಇಮೇಲ್ ಐಡಿ ತಿಳಿದಿರುತ್ತದೆ. ಆದರೂ ಈ ಮೂಲಕವಾದರೂ ಗೈರು ಹಾಜರಾತಿ ಬಗ್ಗೆ ತಿಳಿಸಿರುವುದಿಲ್ಲ. ಲಿಖಿತವಾಗಿ ಗೈರು ಹಾಜರಾತಿ ಬಗ್ಗೆ ವಿವರ ಸಲ್ಲಿಸುವ ಅವಕಾಶ ಅವರ ಪತಿಗೂ ಇತ್ತು. ಅವರು ಪತ್ನಿಗೆ ಅಸೌಖ್ಯವಿತ್ತು ಎಂದು ಹೇಳಿದ ಅವಧಿಗಳಲ್ಲಿ ಕೆಲವು ಬಾರಿ ಕಾಲೇಜಿಗೆ ಬಂದಿದ್ದರೂ ಸಹ ಅವರು ಪ್ರಾಂಶುಪಾಲರನ್ನಾಗಲಿ, ಕಛೇರಿ ಮುಖ್ಯಸ್ಥರನ್ನಾಗಲಿ ಭೇಟಿಯಾಗಿಲ್ಲ. ಮುಖತ: ಅಥವಾ ಬರವಣಿಗೆಯಲ್ಲಿ ಮಾಹಿತಿ ನೀಡಿಲ್ಲ.

ಕಾಲೇಜಿನಲ್ಲಿ ಮಹಿಳೆಯರ ಹಿತಾಸಕ್ತಿಕಾಪಾಡಲು ಪ್ರತ್ಯೇಕ ವಿಭಾಗವಿದೆ. ಅದಕ್ಕೂ ಸೌಮ್ಯ ಅವರು ಯಾವುದೇ ಮಾಹಿತಿ ನೀಡಿಲ್ಲ. ಸೌಮ್ಯ ಅವರು ಮಾರ್ಚ 3 ರಂದು ಮಂಗಳೂರು ವಿಶ್ವವಿದ್ಯಾಲಯ, ಮಂಗಳಗಂಗೋತ್ರಿಗೆ ಪ್ರಯಾಣಿಸಿ ಅಲ್ಲಿ ನಡೆದ ಘಟಿಕೋತ್ಸವದಲ್ಲಿ ಪತಿ ಹಾಗೂ ಮಗನೊಂದಿಗೆ ಪಾಲ್ಗೊಂಡ ಸಂಭ್ರಮ ಫೇಸ್ ಬುಕ್‍ನಲ್ಲಿ ಪ್ರಕಟಗೊಂಡಿದೆ. ಒಟ್ಟು 300 ಕಿ.ಮಿ. ಬೈಂದೂರಿನಿಂದ ಕೊಣಜೆಗೆ ಪ್ರಯಾಣಿಸಿ ಬಂದಿದ್ದಾರೆ. ಆದರೆ ಸೌಖ್ಯವಾದ ನಂತರದ 20 ದಿನಗಳಲ್ಲಿ ಅವರು ಕಾಲೇಜಿಗೆ ಬಂದು ಮನವಿ ಸಲ್ಲಿಸುವ ಪ್ರಯತ್ನ ಮಾಡಿಲ್ಲ. ಇದು ಗಂಭೀರವಾದ ವಿಷಯ.

ಭಂಡಾರ್‍ಕಾರ್ಸ್ ಕಾಲೇಜಿನ ಪ್ರಾಂಶುಪಾಲರು, ಆಡಳಿತ ಮಂಡಳಿ ಸಹೋದ್ಯೋಗಿಗಳು ಅವರು ಕಾಲೇಜಿಗೆ ಬರುತ್ತಿರುವಾಗ ಮಾನವೀಯ ದೃಷ್ಟಿಯಿಂದ ಹಲವಾರು ಸೌಲಭ್ಯ ನೀಡಿರುವುದಾಗಿ ತಿಳಿದುಬಂದಿದೆ. ಅಲ್ಲದೆ ಹೆರಿಗೆ ರಜೆ ಮುಂತಾದ ಅನುಕೂಲತೆಗಳನ್ನು ಕಾಲೇಜಿನ ಬೋಧಕ, ಬೋಧಕೇತರ ಮಹಿಳಾ ಸಿಬ್ಬಂದಿಗಳು ಪಡೆಯುತ್ತಿದ್ದಾರೆ. ಸೌಮ್ಯ ಎಚ್. ಅವರು ಯಾವುದೇ ಮನವಿ, ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸದೇ ಗೈರು ಹಾಜರಾಗಿ ಅನಂತರ ಕಾಲೇಜಿನ ಪ್ರಾಂಶುಪಾಲರೇ ನನ್ನನ್ನು ಹಿಂಸಿಸಿದರು ಎಂದು ಹೇಳುವುದು ಸತ್ಯವಲ್ಲಎಂದು ತಿಳಿಯಲಾಗಿದೆ.

ಕಾಲೇಜಿನ ವಜಾ ನೋಟಿಸು ತಲುಪಿದ ನಂತರವಾದರೂ ಸೌಮ್ಯ ಅವರು ಕಾಲೇಜಿನ ಆಡಳಿತ ಮಂಡಳಿ ಅಥವಾ ಪ್ರಾಂಶುಪಾಲರನ್ನು ಭೇಟಿ ಮಾಡಿ ಮಾತನಾಡುವ ಪ್ರಯತ್ನ ಮಾಡಿಲ್ಲ. ಬದಲು ನೇರವಾಗಿ ಶ್ರೀ ಉಗ್ರಪ್ಪ ಅವರಿಗೆ ದೂರು ನೀಡುವ ಹಾಗೂ ದೃಶ್ಯ ಮಾಧ್ಯಮದವರಲ್ಲಿ ಕಾಲೇಜಿನ ಬಗ್ಗೆಯೇ ತಪ್ಪು ಚಿತ್ರಣ ನೀಡುವ ಪ್ರಯತ್ನ ಮಾಡಿದರು. ಇದೇ ಕಾಲೇಜಿನ ವಿದ್ಯಾರ್ಥಿನಿಯಾಗಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದವರು, ತಮ್ಮ ತಪ್ಪನ್ನು ತಿಳಿಸದೆ ಏಕ ಪಕ್ಷೀಯವಾಗಿ ಕಾಲೇಜಿನವರೆ ನಮಗೆ ಕಿರುಕುಳ, ಹಿಂಸೆ ನೀಡಿದರು ಎಂಬಂತೆ ಬಿಂಬಿಸಿರುವುದು ಸರಿಯಲ್ಲ.

ಕಾಲೇಜಿನ ರಕ್ಷಕ-ಶಿಕ್ಷಕರ ಸಂಘ ಈ ಮೇಲಿನ ವಿಷಯವನ್ನೆಲ್ಲ ಮನಗಂಡು ಕಾಲೇಜಿನ ಆಡಳಿತ ಮಂಡಳಿ ಕೈಗೊಂಡ ನಿರ್ಧಾರವನ್ನು ಸಮಥಿರ್üಸುತ್ತದೆ. ವಿದ್ಯಾರ್ಥಿಗಳ ಹೆತ್ತವರಾಗಲಿ, ಸಾರ್ವಜನಿಕರಾಗಲಿ ಸೌಮ್ಯ ಎಚ್. ಆರೋಪದಲ್ಲಿ ಹುರುಳಿಲ್ಲ ಎಂದು ತಿಳಿಯಬೇಕಾಗಿ ವಿನಂತಿಸುತ್ತದೆ.

 




More News

ಸೆ.30: ಮುಂಬಯಿ ವಿವಿ ಕನ್ನಡ ವಿಭಾಗದಿಂದ ಜಯ ಸಿ.ಸುವರ್ಣ ಸಂಸ್ಮರಣೆ
ಸೆ.30: ಮುಂಬಯಿ ವಿವಿ ಕನ್ನಡ ವಿಭಾಗದಿಂದ ಜಯ ಸಿ.ಸುವರ್ಣ ಸಂಸ್ಮರಣೆ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ,ಶ್ರೀ ಗಣೇಶ ಚತುಥಿರ್s ಆಚರಣೆ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ,ಶ್ರೀ ಗಣೇಶ ಚತುಥಿರ್s ಆಚರಣೆ
ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನಕ್ಕೆ ರಜತ ಸಂಭ್ರಮ ಕಾರ್ಯಾಲಯ ಉದ್ಘಾಟನೆ
ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನಕ್ಕೆ ರಜತ ಸಂಭ್ರಮ ಕಾರ್ಯಾಲಯ ಉದ್ಘಾಟನೆ

Comment Here