ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಮತ್ತು ಬಂಟ್ವಾಳ ತಾಲೂಕನ್ನು ರಾಜ್ಯ ಸರಕಾರ 'ಬರಪೀಡಿತ ತಾಲೂಕು' ಎಂದು ಘೋಷಿಸಿದೆ. ಸಾಮಾನ್ಯವಾಗಿ ಕರಾವಳಿಯಲ್ಲಿ ಏಪ್ರಿಲ್ ನಂತರ ನೀರಿನ ಅಭಾವ ಕಂಡು ಬರುತ್ತಿತ್ತು. ಆದರೆ ಈ ವರ್ಷ ಜನವರಿ ಆರಂಭದಲ್ಲೇ ಜಿಲ್ಲೆಯಲ್ಲಿ ನೀರಿನ ಅಭಾವವುಂಟಾಗಿದೆ.
ತೀವ್ರ ಜಲಕ್ಷಾಮದಿಂದ ಜಿಲ್ಲೆಯ ಜನರು ಪರಿತಪಿಸುತ್ತಿದ್ದಾರೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ನೀರಿನ ಕೊರತೆಯನ್ನು ನೀಗಿಸಲು ರಾಜ್ಯ ಸರಕಾರ ಹೊಸ ಯೋಜನೆ ರೂಪಿಸಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದ್ದಾರೆ. ನರೇಗಾ ಮತ್ತು 'ಜಲಧರೆ' ಯೋಜನೆ ಮೂಲಕ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಯೋಜನೆ ರೂಪಿಸಲಾಗಿದೆ. ರಾಜ್ಯ ಸರಕಾರದ ಆದೇಶದಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ವಿವಿಧ ಗ್ರಾಮಗಳಲ್ಲಿ ಒಂದು ಸಾವಿರ ಚೆಕ್ ಡ್ಯಾಂ ನಿರ್ಮಿಸಲು ಮುಂದಾಗಿದೆ.ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ 2018ರ ಮಾರ್ಚ್ ವೊಳಗೆ ಸಾವಿರ ಚೆಕ್ ಡ್ಯಾಂ ನಿರ್ಮಿಸಲು ಸೂಕ್ತ ವ್ಯವಸ್ಥೆ ಮಾಡಲಿದೆ. ಈ ನೂತನ ಯೋಜನೆ ಮೂಲಕ ನೀರಿನ ಲಭ್ಯತೆ ಮತ್ತಷ್ಟು ಹೆಚ್ಚಳ ಮಾಡುವ ಗುರಿ ರಾಜ್ಯ ಸರ್ಕಾರದ್ದು ಎಂದು ಅವರು ಹೇಳಿದ್ದಾರೆ.