ಮಂಗಳೂರು: ಕಂಬಳ ಮಸೂದೆಗೆ ರಾಷ್ಟ್ರಪತಿಯವರ ಅಂಕಿತ ಪಡೆಯುವ ನಿಟ್ಟಿನಲ್ಲಿ ಎಲ್ಲ ಪ್ರಕ್ರಿಯೆಗಳು ನಡೆಯುತ್ತಿದ್ದು, ಗೃಹ ಸಚಿವಾಲಯದಿಂದ ೧೦ ದಿನಗಳೊಳಗೆ ರಾಷ್ಟ್ರಪತಿ ಭವನಕ್ಕೆ ಹೋಗಲಿದೆ ಎಂದು ಕೇಂದ್ರ ಅಂಕಿ-ಅಂಶ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಂಬಳ ಮಸೂದೆಯನ್ನು ಅತೀ ಶೀಘ್ರ ರೂಪಿಸಿರುವ ಬಗ್ಗೆ ನಾನು ಕರ್ನಾಟಕ ಸರ್ಕಾರವನ್ನು ಅಭಿನಂದಿಸುತ್ತಿದ್ದೆನೆ. ಆಷ್ಟೇ ಶೀಘ್ರವಾಗಿ ನಾನು ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಇದು ರಾಷ್ಟ್ರಪತಿಯವರ ಅಂಕಿತ ಪಡೆಯುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ ಎಂದು ಹೇಳಿದರು. ಮಸೂದೆಯು ಕಾನೂನು, ಸಂಸ್ಕೃತಿ ಪರಿಸರ ಮತ್ತು ಅರಣ್ಯ ಇಲಾಖೆಯಿಂದ ಒಪ್ಪಿಗೆ ಪಡೆದು ಬಳಿಕ ಗೃಹಸಚಿವಾಲಯಕ್ಕೆ ಬಂದಿದೆ.
ರೂಪಿಸಿರುವ ಮಸೂದೆಯಲ್ಲಿ ಕಂಬಳದಲ್ಲಿ ಪ್ರಾಣಿಹಿಂಸೆ ಇಲ್ಲ ಎಂಬ ಸ್ಪಷ್ಟತೆಯ ನ್ಯೂನತೆ ಇದೆ. ಅದನ್ನು ಸರಿಪಡಿಸಲು ಮರಳಿ ರಾಜ್ಯಕ್ಕೆ ಕಳುಹಿಸಿದರೆ ಮತ್ತೆ ೧ ತಿಂಗಳು ವಿಳಂಬವಾಗಲಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಹೊಸದಿಲ್ಲಿಯಲ್ಲಿ ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಾನೂನು ಕಾರ್ಯದರ್ಶಿಗಳ ಸಭೆ ನಡೆಯಲಿದೆ. ಅಲ್ಲೇ ನ್ಯೂನತೆಯನ್ನು ಸರಿಪಡಿಸಲಾಗುವುದು. ಬಳಿಕ ಗೃಹಸಚಿವಾಲಯಿಂದ ರಾಷ್ಟ್ರಪತಿ ಭವನಕ್ಕೆ ರವಾನೆಯಾಗಲಿದೆ ಎಂದು ಹೇಳಿದರು.